Nandi Hills: ‘ಮಾಂಡೌಸ್’ನ ಮಾರ್ದನಿಗೆ ನಂದಿ ಬೆಟ್ಟದಲ್ಲಿ ಚೆಲುವಿನ ಚಿತ್ತಾರ, ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ಆಗಮನ
ಮಾಂಡೌಸ್ ಚಂಡಮಾರುತ ಹತ್ತಾರು ಅವಾಂತರಗಳ ಜತೆಗೆ ಪ್ರಕೃತಿಯ ಸೊಬಗನ್ನ ಹಿಮ್ಮಡಿಗೊಳಿಸಿದೆ. ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರು ನಂದಿ ಬೆಟ್ಟ, ದೇವರಾಯನ ದುರ್ಗಕ್ಕೆ ಭೇಟಿ ನೀಡುತ್ತಿದ್ದಾರೆ.
Updated on: Dec 13, 2022 | 9:11 AM

ಗಿಡಮರಗಳು ಹಸಿರನ್ನ ಹೆಚ್ಚಿಸಿಕೊಂಡಿವೆ. ಗಿರಿಶಿಖರಗಳ ಚೆಲುವು ಹಿಮ್ಮಡಿಯಾಗಿದೆ. ಬೆಳ್ಳಿಮೋಡಗಳ ಆಟ, ಮಂಜಿನ ಹನಿಯ ಮೋಡಿ ಹೊಸಲೋಕವನ್ನೇ ಸೃಷ್ಟಿ ಮಾಡಿವೆ. ಮಾಂಡೌಸ್ ಚಂಡಮಾರುತ ಹತ್ತಾರು ಅವಾಂತರಗಳ ಜತೆಗೆ ಪ್ರಕೃತಿಯ ಸೊಬಗನ್ನ ಹಿಮ್ಮಡಿಗೊಳಿಸಿದೆ.

ಕ್ಷಣ ಕ್ಷಣಕ್ಕೂ ಬದಲಾಗೋ ಹವಾಮಾನ. ಹೊತ್ತು ಹೊತ್ತಿಗೂ ಚೆಲುವಿನ ಚಿತ್ತಾರ. ಸುಯ್ ಅಂತಾ ಬೀಸೋ ತಂಗಾಳಿ, ದಾರಿಯುದ್ದಕ್ಕೂ ಎದುರಾಗೋ ಬೆಳ್ಳಿಮೋಡಗಳು. ಇಡೀ ಬೆಟ್ಟವನ್ನೇ ಮಂಜು ಆವರಿಸಿದೆ. ಹಸಿರ ಸಿರಿಗೆ ಮಂಜುನಿ ಹನಿಗಳು ಮುತ್ತಿಕ್ಕುತ್ತಿವೆ. ಈ ಮನೋಹರ ದೃಶ್ಯಕಾವ್ಯ ಕಂಡಿದ್ದು ಚಿಕ್ಕಬಳ್ಳಾಪುರ ನಂದಿ ಗಿರಿಧಾಮದಲ್ಲಿ.

ನಂದಿಬೆಟ್ಟದ ಮೇಲೆ ಕೊರೆಯುವ ಚಳಿ, ತುಂತುರು ಮಳೆ, ಮುತ್ತಿಕ್ಕುವ ಮಂಜು ಡಬಲ್ ಆಗಿದೆ. ಎತ್ತ ನೋಡಿದ್ರೂ ಹಸಿರು ಹೆಚ್ಚಿಸಿಕೊಂಡಿರೋ ಗಿಡ ಮರ ಬಳ್ಳಿ ಹೂಗಳು, ಹೂಗಳ ಮಂಕರಂದ ಇರಲು ಹವಣಿಸುತ್ತಿರುವ ದುಂಬಿ ಇಷ್ಟೆಲ್ಲಾ ಸೀನ್ಗಳು ಸ್ವರ್ಗಲೋಕ ಸೃಷ್ಟಿಸಿವೆ. ಹೀಗೆ ಚೆಲುವು ಹೆಚ್ಚಾದಂತೆ ಬೆಟ್ಟಕ್ಕೆ ಆಗಮಿಸೋ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಾಗಿದೆ.

ಇನ್ನು ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲೂ ಮಳೆಯಿಂದಾಗಿ ದೇವಲೋಕವೇ ಸೃಷ್ಟಿಯಾಗಿದೆ. ಗಿರಿಧಾಮ ಸುತ್ತಲೂ ಮಂಜು ಕವಿದ ವಾತಾವರಣ ಮಲೆನಾಡನ್ನ ನೆನಪಿಸುತ್ತಿದೆ. ಈ ಸುಂದರ ಸೊಬಗನ್ನ ಕಣ್ತುಂಬಿಕೊಳ್ಳಲು ಜನ ಕೂಡಾ ದೌಡಾಯಿಸುತ್ತಿದ್ದಾರೆ.

ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಹತ್ತಾರು ಅವಾಂತರಗಳೇ ಸೃಷ್ಟಿಯಾಗಿವೆ. ಜನ ತತ್ತರಿಸಿದ್ದಾರೆ. ಆದ್ರೆ ಇದೇ ಮಾರುತದಿಂದ ಸುರಿಯುತ್ತಿರೋ ಮಳೆ, ತೇಲಿ ಬರ್ತಿರೋ ಮಂಜು ನಂದಿಗಿರಿಧಾಮದ ಚೆಲುವನ್ನ ಹಿಮ್ಮಡಿಗೊಳಿಸಿದೆ. ಅದ್ರಲ್ಲೂ ಸೂರ್ಯೋದಕ್ಕೂ ಮುನ್ನ ಇಡೀ ಬೆಟ್ಟ ಮಂಜನ್ನ ಹೊದ್ದು ನಿಂತಿದ್ದು ಪ್ರವಾಸಿಗರನ್ನ ಆಕರ್ಷಣೆ ಮಾಡ್ತಿದೆ.

ಒಟ್ನಲ್ಲಿ ಚಳಿಗಾಲದಲ್ಲೂ ಸುರಿಯುತ್ತಿರೋ ಮಳೆ ಒಂದ್ಕಡೆ ಸಂಕಷ್ಟ ತಂದೊಡ್ಡಿದ್ರೆ, ಮ್ತತ್ತೊಂದು ಕಡೆ ಪ್ರಕೃತಿಯ ಸೊಬಗನ್ನ ಹೆಚ್ಚಿಸಿದೆ.

TV9 Kannada
Read More



