ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಕುವೈತ್ ಪ್ರವಾಸದಲ್ಲಿದ್ದಾರೆ. ಈಗಾಗಲೇ ಅವರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತು ಕೂಡ ಆಡಿದ್ದಾರೆ. ಈ ವೇಳೆ ಕುವೈತ್ನ ಮಿನಾ ಅಬ್ದುಲ್ಲಾ ಪ್ರದೇಶದಲ್ಲಿರುವ ಗಲ್ಫ್ ಸ್ಪಿಕ್ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿ ಕುವೈತ್ಗೆ ಭೇಟಿ ನೀಡಿದ ಮೊದಲ ದಿನ ಭಾರತದ ವಿವಿಧ ರಾಜ್ಯಗಳ ಸುಮಾರು 1,500 ಪ್ರಜೆಗಳೊಂದಿಗೆ ಅವರು ಸಂವಾದ ಮಾಡಿದ್ದಾರೆ. ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಜೊತೆಗೆ ಕಾರ್ಮಿಕರಿಗೆ ತಿಂಡಿ ತಿನಿಸುಗಳನ್ನು ಬಡಿಸಿದ್ದಾರೆ.
ಕಾರ್ಮಿಕ ಶಿಬಿರಕ್ಕೆ ಪ್ರಧಾನಿ ಮೋದಿ ಅವರ ಭೇಟಿ ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಕಲ್ಯಾಣಕ್ಕೆ ನೀಡಿದ ಪ್ರಾಮುಖ್ಯತೆಯ ಸಂಕೇತವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಕಲ್ಯಾಣಕ್ಕಾಗಿ ಇ-ಮೈಗ್ರೇಟ್ ಪೋರ್ಟಲ್, ಎಂಎಡಿಎಡಿ ಪೋರ್ಟಲ್ ಮತ್ತು ವಿಮಾ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.
ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಹತ್ವದ ದಾಪುಗಾಲು ಇಟ್ಟಿದ್ದಾರೆ. 40ಕ್ಕೂ ಹೆಚ್ಚು ಭಾರತೀಯರ ಸಾವಿಗೆ ಕಾರಣವಾದ ಕುವೈತ್ ಅಗ್ನಿ ದುರಂತದ ಬಳಿಕ ಪಿಎಂ ಮೋದಿ ಅವರು ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಿದ್ದರು.
ಪ್ರಧಾನಿ ಮೋದಿ ಅವರು 2015 ರಲ್ಲಿ ಅಬು ಧಾಬಿಯ ಕಾರ್ಮಿಕ ಶಿಬಿರಕ್ಕೂ ಭೇಟಿ ನೀಡಿದ್ದರು. ಅಲ್ಲಿ ಅವರು ವಲಸೆ ಕಾರ್ಮಿಕರ ಕಲ್ಯಾಣದ ಬಗ್ಗೆ ಭಾರತದ ಕಾಳಜಿಯನ್ನು ಎತ್ತಿ ತೋರಿಸಿತ್ತು. ಶಿಬಿರಗಳಲ್ಲಿ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು, ಭಾರತ ಸರ್ಕಾರವು ಅವರಿಗೆ ಹೇಗೆ ಸಹಾಯ ಮಾಡಬಹುದೆಂದು ಚರ್ಚಿಸಿದ್ದರು.
Published On - 11:09 pm, Sat, 21 December 24