ಕರ್ನಾಟಕದಲ್ಲಿ ಮಳೆ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಗೋಡೆ ಕುಸಿದು ಅವಾಂತರ, ಇಲ್ಲಿವೆ ಫೋಟೋಸ್
ಕರ್ನಾಟಕದಾದ್ಯಂತ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಮನೆ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಹಾನಿ ಉಂಟಾಗಿದೆ. ಅಷ್ಟೇ ಅಲ್ಲದೆ ಬಾಗಲಕೋಟೆಯ ಮಹಾಲಿಂಗಪುರ ಪಟ್ಟಣದಲ್ಲಿ ಮನೆ ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಎಲ್ಲೆಲ್ಲಿ, ಏನೇನು ಅವಾಂತರಗಳು ಸಂಭವಿಸಿವೆ ಎಂಬ ಮಾಹಿತಿ ಇಲ್ಲಿದೆ.
Updated on: Sep 27, 2025 | 2:12 PM

ಕೊಡಗಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿ ತಾಲೂಕಿನ ಮರಗೋಡು ರಸ್ತೆ ಕೆಸರು ಮಯವಾಗಿದೆ. ಮಡಿಕೇರಿ-ಕತ್ತಲೆಕಾಡು -ಮರಗೋಡು ರಸ್ತೆಯಲ್ಲಿ ಖಾಸಗಿ ಬಸ್ ಒಂದು ಕೆಸರಿನಲ್ಲಿ ಸಿಲುಕಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದೆ. ಕಲಬುರಗಿ ಸನ್ನತಿ ಬ್ಯಾರೇಜ್ನಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ ನೂರಾರು ಎಕರೆ ಬೆಳೆ ನೀರುಪಾಲಾಗಿದೆ.

ರಾಯಚೂರು ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಹಲವು ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಟ್ಟಿ ಚಿನ್ನದ ಗಣಿ ಕಂಪನಿ ಸಿಬ್ಬಂದಿ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲು ಹರಸಾಹಸಪಟ್ಟಿದ್ದಾರೆ. ಹಲವು ವಸ್ತುಗಳು ಹಾನಿಯಾಗಿವೆ.

ಇನ್ನು ಪಶ್ಚಿಮಘಟ್ಟ ಪ್ರದೇಶವಾದ ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದೆ. ಪರಿಣಾಮ ಕುಂದಾನಗರಿ ಜನ ಕಂಗಾಲಾಗಿದ್ದಾರೆ. ನಿರಂತರ ಮಳೆಗೆ ಗೋಕಾಕ್ ನಗರದ ರಸ್ತೆಗಳು ಜಲಾವೃತಗೊಂಡಿವೆ.

ಜೇವರ್ಗಿ ಪಟ್ಟಣದ ಸಮೀಪದ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗಿದೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಸಂಚಾರ ಸ್ಥಗಿತ ಹಿನ್ನೆಲೆ ವಾಹನಗಳು ಕಿ.ಮೀ ಗಟ್ಟಲೇ ಕ್ಯೂ ನಿಂತ್ತಿದ್ದು ಕಂಡುಬಂತು. ಬೆಂಗಳೂರು ಸೇರಿ ವಿವಿಧೆಡೆಯಿಂದ ಕಲಬುರಗಿಗೆ ಸಂಚಾರ ಸ್ಥಗಿತಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಹತ್ತಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಮಹಾಲಿಂಗಪುರ ಪಟ್ಟಣದಲ್ಲಿ ಮನೆ ಕುಸಿದು, ದರ್ಶನ್ ಲಾತೂರ್ ಎಂಬ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ನೀರಲಕೇರಿ ಗ್ರಾಮದಲ್ಲಿ ಈರಣ್ಣ ಉಳ್ಳಾಗಡ್ಡಿ ಎಂಬುವರ ಮಾಳಿಗೆ ಮನೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.




