ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು ರಾಜ್ಯ ಮತ್ತು ದೇಶದ ಪ್ರವಾಸಿಗರ ಗಮನ ಸೆಳೆದಿವೆ. ಜೋಗ್ ಫಾಲ್ಸ್. ಲಯನ್ ಸಫಾರಿ, ಸಕ್ರೆಬೈಲು ಆನೆ ಬಿಡಾರ, ಸಿಗಂದೂರು ದೇವಸ್ಥಾನ, ಕೊಡಚಾದ್ರಿ, ಆಗುಂಬೆ ಸೂರ್ಯಾಸ್ಥ ಸ್ಥಳ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳಿವೆ. ಈ ನಡುವೆ ಶಿವಮೊಗ್ಗ ನಗರದಲ್ಲಿ ಹರಿದು ಹೋಗಿರುವ ತುಂಗಾ ನದಿ ತೀರವನ್ನು ಮಹಾನಗರ ಪಾಲಿಕೆಯು ಬಳಕೆ ಮಾಡಿಕೊಂಡು 80 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಅಭಿವೃದ್ಧಿ ಕಾಮಗಾರಿಯು ನಡೆದಿದೆ. ಗುಜರಾತ್ ನ ಸಬರಮತಿ ನದಿ ತೀರದ ಅಭಿವೃದ್ದಿ ಮಾದರಿಯಲ್ಲಿ ತುಂಗಾ ನದಿ ತೀರದ ಅಭಿವೃದ್ಧಿ ಆಗಿರುವುದು ವಿಶೇಷವಾಗಿದೆ.
ತುಂಗಾ ನದಿಯಲ್ಲಿ 2.8 ಕಿ.ಮೀ. ಉದ್ದದ ವಾಕಿಂಗ್ ಪಾತ್ ಅಭಿವೃದ್ಧಿಪಡಿಸಲಾಗಿದೆ. ವಾಕಿಂಗ್ ಪಾತ್, ಗಾರ್ಡನ್ ಗಳು, ಪಾರಂಪರಿಕ ಪ್ರತಿಮೆಗಳು, ದೋಣಿ ವಿಹಾರವನ್ನ ನಿರ್ಮಿಸಲಾಗಿದೆ. ಆದರೆ ದೋಣಿ ವಿಹಾರವನ್ನ ಮಳೆಗಾಲ ಹೊರತುಪಡಿಸಿ ಗುಜರಾತ್ ನ ಸಬರಮತಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿರುವಂತೆ ನಿರ್ಮಿಸಲಾಗುತ್ತಿದೆ.
ಸಾರ್ವಜನಿಕರಿಗೆ ಆರಂಭದಲ್ಲಿ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಮಾರ್ಚ್ 8 ರ ಬಳಿಕ ಪ್ರವಾಸಿ ತಾಣಕ್ಕೆ ಜನರ ಸ್ಪಂದನೆ ನೋಡಿಕೊಂಡು ಪ್ರವೇಶ ಶುಲ್ಕದ ಕುರಿತು ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಇಲ್ಲಿ ಕತ್ತಲಾದರೆ ಭಯ ಪಡುವ ವಾತಾವರಣವಿದ್ದ ಜಾಗದಲ್ಲಿ ರಾತ್ರಿಯೂ ಕೂಡ ಹಗಲಿನಂತೆ, ವಿಹಾರ ನಡೆಸಲು ಸುಂದರವಾಗಿ ರೂಪುಗೊಂಡಿದೆ. ನದಿ ತೀರದ ಪರಿಸರ, ಪಕ್ಷಿಗಳ ಹಾರಾಟ ಮತ್ತು ಚಿಲಿಪಿಲಿ ಶಬ್ದಗಳು... ಈ ತೀರದಲ್ಲಿ ರಿವರ್ ಫ್ರಂಟ್, ಚಿಲ್ಡ್ರನ್ ಸ್ಪೋರ್ಟ್ಸ್, ಬೈಪಾಸ್ ನಿಂದ ಬೆಕ್ಕಿನಕಲ್ಮಠ ತನಕ ಬೈಸಿಕಲ್ನಲ್ಲಿ ಸೈಕ್ಲಿಂಗ್ ಅವಕಾಶ ಕಲ್ಪಿಸಲಾಗಿದೆ.
ವಾಯುವಿಹಾರಕ್ಕೆ ಈ ತಾಣವು ಹೇಳಿ ಮಾಡಿಸಿದ ಜಾಗವಾಗಿದೆ. ಇಲ್ಲಿ ಲ್ಯಾಂಡ್ ಸ್ಕೇಪಿಂಗ್ ಇದೆ. ಐದು ಕಟ್ಟಡ ಇದೆ. ಫುಡ್ ಕ್ಯಾಂಟೀನ್ ಇದೆ. ಇಂಡೋರ್ ಗೇಮ್ಸ್ ಬ್ಯಾಸ್ಕೆಟ್ ಬಾಲ್ ಆಡುವ ವ್ಯವಸ್ಥೆ ಮಾಡಲಾಗಿದೆ. ತುಂಗಾ ನದಿ ಹಾಗೂ ಇಲ್ಲಿಗೆ ಬರುವ ವಿಶೇಷ ಪಕ್ಷಿಗಳ ವೀಕ್ಷಣೆಗಾಗಿ ವಾಚ್ ಟವರ್ ನಿರ್ಮಿಸಲಾಗಿದೆ. ನೀರು ಶೇಖರಣೆ ಮಾಡಿ ಬೋಟಿಂಗ್ ಅವಕಾಶ ಕಲ್ಪಿಸಲಾಗಿದೆ. ಐದು ಆಕ್ಟಿವಿಟಿ ವಾಲ್ ಇದೆ.
ಪ್ರಕೃತಿಯನ್ನು ನೋಡಲು ಕಲ್ಲಿನ ಬೆಂಚ್ ಇದೆ. ಬಯಲು ರಂಗಮಂದಿರವಿದೆ. ವಿವಿಧೋದ್ದೇಶ ಕ್ರೀಡಾ ಸಂಕೀರ್ಣ ಇದೆ. ಅಂದಹಾಗೆ, ಈ ಸುಂದರ ಹಾಗೂ ಪ್ರೇಕ್ಷಣಿಯ ಸ್ಥಳವಾಗಿ ಮಾರ್ಪಾಡಾಗಿರುವು ಪ್ರವಾಸಿಗರಿಗೆ ಸಂತಸ ತಂದಿದೆ. ತುಂಗಾ ನದಿಯ ತೀರವು ಈಗ ಹೈಟೆಕ್ ಆಗಿದೆ. ಕಲರ್ ವಿದ್ಯುದೀಪಗಳ ಅಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಸಂಜೆ ಆದ್ರೆ ಸಾಕು ವಿದ್ಯುತ್ ಅಲಂಕಾರ ಕೂಡಾ ಈ ಪ್ರವಾಸಿ ತಾಣದ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 80.75 ಕೋಟಿ ರೂ. ವೆಚ್ಚದಲ್ಲಿ ಗುಜರಾತ್ ನ ಸಬರಮತಿ ನದಿ ದಂಡೆಯ ಹಾಗೆಯೇ ಇದನ್ನು ಅಭಿವೃದ್ಧಿಗೊಳಿಸಲಾಗಿದೆ.. ಈ ಅಭಿವೃದ್ಧಿ ಯೋಜನೆಯ 10 ವರ್ಷದ ನಿರ್ವಹಣೆಗೆ 22.43 ಕೋಟಿ ಹಣವನ್ನು ಮೀಸಲು ಇಡಲಾಗಿದೆ. ಸದ್ಯ ಮಲೆನಾಡಿನಲ್ಲಿ ಅತ್ಯುತ್ತಮ ಪ್ರವಾಸಿ ತಾಣದ ಅಭಿವೃದ್ದಿ ಯೋಜನೆಯಲ್ಲಿ ಇದು ಒಂದಾಗಿದೆ.
ಈ ತುಂಗಾ ನದಿ ತೀರ ಸುಂದರ ಸ್ಥಳ ವೀಕ್ಷಣೆ ಮತ್ತು ಆಸ್ವಾದಿಸಲು 22 ಬ್ಯಾಟರಿ ಚಾಲಿತ ಸೈಕಲ್ ಗಳನ್ನು ಇಡಲಾಗಿದೆ. ಸೈಕಲಿಂಗ್ ಮೂಲಕ ಯುವಕರು ಮಕ್ಕಳು ತುಂಗಾ ತೀರದ ಪರಿಸರವನ್ನು ಎಂಜಾಯ್ ಮಾಡಬಹುದಾಗಿದೆ. ವಿವಿಧ ಪ್ರಾಣಿ ಮತ್ತು ಪಕ್ಷಿಗಳು ಹೀಗೆ ನಗರದ ವ್ಯಾಪ್ತಿಯಲ್ಲಿ ಹರಿದು ಹೋಗಿರುವ ತುಂಗಾ ನದಿಯ ತೀರದ ಚಿತ್ರಣವೇ ಬದಲಾಗಿರುವುದಕ್ಕೆ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಮತ್ತೊಂದು ಪ್ರವಾಸಿ ತಾಣ ಅಭಿವೃದ್ಧಿಗೊಂಡಿದೆ. ನದಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ಬಳಸಿಕೊಂಡಡು ತುಂಗಾ ನದಿಯ ತೀರಕ್ಕೆ ಈಗ ಹೈಟೆಕ್ ಸ್ಪರ್ಶ ನೀಡಲಾಗಿದೆ. ತುಂಗಾ ನದಿಯ ತೀರದಲ್ಲಿ ಈಗ ಪ್ರವಾಸಿಗರ ಕಲರವದ್ದೇ ಕಾರುಬಾರು.