ಹೋಗೋ ದಾರಿಯಲ್ಲಿ ಹಾವು ಅಡ್ಡ ಬಂದರೆ ಅದು ಶುಭವೋ… ಅಶುಭವೋ…
ಹಿಂದೂ ಧರ್ಮದಲ್ಲಿ ಸರ್ಪಗಳನ್ನು ಪೂಜನೀಯ ರೂಪದಲ್ಲಿ ಕಾಣಲಾಗುತ್ತದೆ. ಅದರಲ್ಲೂ ನಾಗರ ಹಾವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಹೀಗೆ ಹಾವುಗಳು ಧಾರ್ಮಿಕವಾಗಿ ಮಹತ್ವವನ್ನು ಹೊಂದಿದೆ. ಕೆಲವೊಂದು ಬಾರಿ ಹಾವುಗಳು ನಮ್ಮ ದಾರಿಗೆ ಎದುರಾಗುತ್ತವೆ. ಬೆಕ್ಕು, ಮುಂಗುಸಿ ಸೇರಿದಂತೆ ಕೆಲವು ಪ್ರಾಣಿಗಳು ನಾವು ಹೋಗೋ ದಾರಿಗೆ ಎದುರಾದಾಗ ಅವು ಶುಭ, ಅಶುಭದ ಸಂಕೇತವನ್ನು ಸೂಚಿಸುವಂತೆ ಶಕುನಶಾಸ್ತ್ರದ ಪ್ರಕಾರ, ಹೋಗೋ ದಾರಿಯಲ್ಲಿ ಇದ್ದಕ್ಕಿದ್ದಂತೆ ಹಾವುಗಳು ಕಂಡರೂ ಅದು ಹಲವಾರು ಅರ್ಥಗಳನ್ನು ಸೂಚಿಸುತ್ತದೆ. ಹಾಗಾದ್ರೆ ಹೋಗೋ ದಾರಿಯಲ್ಲಿ ಹಾವುಗಳು ಕಂಡರೆ ಅದು ಶುಭದ ಸಂಕೇತವೋ ಅಥವಾ ಅಶುಭವೋ ಎಂಬುದನ್ನು ತಿಳಿಯಿರಿ.
Updated on: Apr 29, 2025 | 4:07 PM

ನಮ್ಮಲ್ಲಿ ಹೆಚ್ಚು ಶಕುನಗಳನ್ನು ನಂಬಲಾಗುತ್ತದೆ. ಬೆಕ್ಕು ಅಡ್ಡ ಬಂದರೆ ಅದು ಅಶುಭದ ಸಂಕೇತ, ನವಿಲುಗಳು ಗರಿ ಬಿಚ್ಚಿ ಕುಣಿದರೆ ಅದೃಷ್ಟದ ಸಂಕೇತ ಅಂತೆಲ್ಲಾ ನಂಬಲಾಗುತ್ತದೆ. ಅದೇ ರೀತಿ ಧಾರ್ಮಿಕ ನಂಬಿಕೆಗಳ ಪ್ರಕಾರ ಹಾವುಗಳು ಕೂಡಾ ಶುಭ ಮತ್ತು ಅಶುಭದ ಸಂಕೇತವನ್ನು ಸೂಚಿಸುತ್ತದೆಯಂತೆ. ಹಾಗಾದರೆ ಹಾವು ಬಲಗಡೆಯಿಂದ ಎಡಗಡೆಗೆ ದಾಟಿದರೆ, ಎಡಗಡೆಯಿಂದ ಬಲಗಡೆ ದಾಟಿದರೆ ಏನರ್ಥ ತಿಳಿಯೋಣ.

ಬಲದಿಂದ ಎಡಕ್ಕೆ ಹಾವು ಹೋದರೆ: ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬಲದಿಂದ ಎಡಕ್ಕೆ ಹಾವು ರಸ್ತೆ ದಾಟುತ್ತಿರುವುದನ್ನು ನೋಡಿದರೆ, ನೀವು ಹೋಗುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಮತ್ತು ನೀವು ಹಣದ ವಿಚಾರವಾಗಿ ಪ್ರಯಾಣಿಸುತ್ತಿದ್ದರೆ ನಿಮಗೆ ಆರ್ಥಿಕ ಲಾಭಗಳು ಸಿಗುತ್ತವೆ ಎಂದು ನಂಬಲಾಗಿದೆ.

ಎಡಭಾಗದಿಂದ ಹಾವುಗಳು ರಸ್ತೆ ದಾಟುತ್ತಿರುವುದನ್ನು ನೋಡಿದರೆ: ನೀವು ದಾರಿಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ನಿಮಗೇನಾದರೂ ಎಡಭಾಗದಿಂದ ಹಾವುಗಳು ರಸ್ತೆ ದಾಟುತ್ತಿರುವ ದೃಶ್ಯ ಕಣ್ಣಿಗೆ ಬಿದ್ದರೆ ಅದು ಶುಭ ಶಕುನವಲ್ಲ. ಅಂದು ನೀವು ಹೋಗುವ, ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.

ಬಿಳಿ ಹಾವು ಕಂಡರೆ: ಸಾಮಾನ್ಯವಾಗಿ ಬಿಳಿ ಹಾವುಗಳು ಕಾಣಸಿಗುವುದು ಅಪರೂಪವಾಗಿದೆ. ಆದರೆ ನಿಮಗೇನಾದರೂ ಬಿಳಿ ಹಾವುಗಳು ಕಾಣ ಸಿಕ್ಕರೆ ಅದನ್ನು ತುಂಬಾ ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮ್ಮ ಅಡೆತಡೆಗಳು ನಿವಾರಣೆಯಾಗಿ ನಿಮಗೆ ಶುಭ ಫಲ ಸಿಗುತ್ತದೆ ಎಂದರ್ಥ. .

ಹಾವು ಮರ ಹತ್ತುವುದನ್ನು ನೋಡಿದರೆ: ನೀವು ಹಾವು ಮರ ಹತ್ತುವುದನ್ನು ನೋಡಿದರೆ, ಅದು ಶುಭದ ಸಂಕೇತವಾಗಿದ್ದು, ನಿಮ್ಮ ಪ್ರಗತಿಯ ಹಾದಿಯು ತೆರೆದುಕೊಳ್ಳಲಿದೆ ಎಂದರ್ಥ. ಹಾವು ಹತ್ತುವುದನ್ನು ನೋಡುವುದು ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವ ಸೂಚನೆಯಾಗಿದೆ ಎಂದು ನಂಬಲಾಗಿದೆ.

ನಿಮ್ಮ ಮನೆಯಲ್ಲಿ ಎರಡು ತಲೆಯ ಹಾವು ಕಾಣಿಸಿಕೊಂಡರೆ, ಅದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಹಾವು ಲಕ್ಷ್ಮಿ ದೇವಿಯ ಆಗಮನದ ಸೂಚಕವಾಗಿದೆ. ಈ ಹಾವು ವಿಷಕಾರಿಯಲ್ಲ ಹಾಗಾಗಿ ಅವುಗಳಿಗೆ ತೊಂದರೆ ಮಾಡಬಾರದು, ಕೊಲ್ಲಬಾರದು.

ಮನೆಯಲ್ಲಿ ಅಥವಾ ಎಲ್ಲೋ ಹೋಗುವಾಗ ಸತ್ತ ಹಾವನ್ನು ನೋಡಿದರೆ ಅದು ಶುಭ ಶಕುನವಲ್ಲ, ಅದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಶುಭದ ಪರಿಣಾಮಗಳನ್ನು ತಪ್ಪಿಸಲು ನೀವು ಶಿವನಿಗೆ ಜಲಭಿಷೇಕ ಮಾಡುವುದು ಉತ್ತಮ.

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



