ವ್ಯಕ್ತಿ ವ್ಯಕ್ತಿತ್ವ | ವಿವಾದಗಳ ಮಾಲೆಯನ್ನೇ ಸುತ್ತಿಕೊಂಡ ಬೆಂಕಿಯುಗುಳುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್

ಸ್ವತಂತ್ರವಾಗಿ ಗೆಲುವು ಸಾಧಿಸಿದ ಕಾರಣಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಆಹ್ವಾನ ನೀಡಿದ್ದರು ಎಂದಿದ್ದ ಅವರು, ಉಚ್ಛಾಟನೆಗೊಂಡ 3 ವರ್ಷಕ್ಕೆ ಬಿಜೆಪಿ ಸೇರಿದ್ದರು.

ವ್ಯಕ್ತಿ ವ್ಯಕ್ತಿತ್ವ | ವಿವಾದಗಳ ಮಾಲೆಯನ್ನೇ ಸುತ್ತಿಕೊಂಡ ಬೆಂಕಿಯುಗುಳುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 21, 2021 | 11:45 PM

ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ್, ರಾಜ್ಯ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕೇವಲ ರಾಜ್ಯವೊಂದೇ ಅಲ್ಲ, ದೆಹಲಿ ಬಿಜೆಪಿ ವಲಯದಲ್ಲೂ ಬಸನಗೌಡ ಪಾಟೀಲ್ ಎಂಬ ನಾಮಧೇಯ ಆಗಾಗ ಓಡಾಡುತ್ತಲೇ ಇರುತ್ತದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸ್ಥಾನಮಾನ ನೀಡಬೇಕು ಎಂದು ಆರಂಭವಾದ ಹೋರಾಟ ಇಂದು ಬೆಂಗಳೂರಲ್ಲಿ ನಡೆಸಿದ ಕೋಲಾಹಲ ಒಂದೆರಡಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರಕಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ್ ಅವರ ಹಿನ್ನೆಲೆ ಪರಿಚಯಿಸುವ ಸಂಕ್ಷಿಪ್ತ ಬರಹ ಇಲ್ಲಿದೆ.

1963ರ ಡಿಸೆಂಬರ್ 13ರಂದು ಹುಟ್ಟಿದ ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ್ ಬಿಕಾಂ ಪದವೀಧರರು. ಸದ್ಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅವರ ಇತ್ತೀಚಿನ ಹೇಳಿಕೆಗಳು ವಿವಾದಗಳಿಂದಲೇ ಪ್ರಸಿದ್ಧವಾಗಿವೆ. ಖಟ್ಟರ್ ಹಿಂದೂವಾದಿಯಾಗಿ ಗುರುತಿಸಿಕೊಂಡಿರುವ ಅವರು, ಇದೀಗ ಪಂಚಮಸಾಲಿ ಸಮುದಾಯ ನಡೆಸುತ್ತಿರುವ 2A ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.

708 ಕಿಮೀ ಪಾದಯಾತ್ರೆಯ ನಂತರ ಬೆಂಗಳೂರಲ್ಲಿ ನಡೆಸಿದ ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ, ಲಿಂಗಾಯತರಿಗೆ OBC ಸ್ಥಾನಮಾನ ಸಿಗಲು ಬೇಕಾದರೆ ದೆಹಲಿಗೆ ಹೋಗುತ್ತೇನೆ. ಸಂಸದರನ್ನು ಕೂಡ ಕರೆದುಕೊಂಡು ಹೋಗುತ್ತೇನೆ. ಆದರೆ, ಸದ್ಯ ನಮಗೆ ಬೇಕಿರುವ 2A ಮೀಸಲಾತಿಗಾಗಿ ದೆಹಲಿಗೆ ಹೋಗಬೇಕಿಲ್ಲ, ಮುಖ್ಯಮಂತ್ರಿಗಳೇ ಅದನ್ನು ನೆರವೇರಿಸಬಹುದು ಎಂದು ಹೇಳಿದ್ದಾರೆ. ಈ ಹೇಳಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಚುಚ್ಚುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರರ ಕುರಿತು ನಾಲಿಗೆ ಹರಿಬಿಡುತ್ತಲೇ ಇರುವ ಯತ್ನಾಳ್, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ದುಡಿದಿದ್ದರು. 2002-2003ರಲ್ಲಿ ಕೇಂದ್ರ ಸರ್ಕಾರದ ಜವಳಿ ಖಾತೆಯ ರಾಜ್ಯ ಸಚಿವರಾಗಿಯೂ, 2003-04ರಲ್ಲಿ ಕೆಂದ್ರ ಸರ್ಕಾರದ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿಯೂ ದೆಹಲಿ ಮಟ್ಟದಲ್ಲಿ ಕೆಲಸ ಮಾಡಿದ್ದರು. ಇದೇ ಅನುಭವ ಆಧರಿಸಿ ಬಿಜೆಪಿಯ ಕೆಲ ನಾಯಕರನ್ನು ‘ಅನನುಭವಿ’ ಎನ್ನುತ್ತಾರೆ ಯತ್ನಾಳ್.

ಸದ್ಯ ವಿಜಯಪುರ ನಗರ ಕ್ಷೇತ್ರದ ಶಾಸಕರಾಗಿರುವ ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ್, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು 1994ರಲ್ಲಿ. 1999ರಲ್ಲಿ ವಿಜಯಪುರ ಕ್ಷೇತ್ರದಿಂದಲೇ ಲೋಕಸಭೆಗೆ ಪ್ರವೇಶಿಸಿದ ಅವರು 2004ರಲ್ಲಿಯೂ ಮರುಆಯ್ಕೆಯಾಗಿ ದೆಹಲಿ ವಿಮಾನ ಏರಿದ್ದರು.

2009ರ ನಂತರ ಜನತಾದಳ! ಎರಡು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದ ಬಸನಗೌಡ ಪಾಟೀಲ ಯತ್ನಾಳ್ 2009ರಲ್ಲಿಯೂ ವಿಜಯಪುರ ಕ್ಷೇತ್ರದಿಂದ ಮೂರನೇ ಬಾರಿಗೆ ಸಂಸದರಾಗಿ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ, ಅವರಿಗೆ ಬಿಜೆಪಿ ಟಿಕೆಟ್ ನೀಡದೇ ನಿರಾಕರಿಸಿತು. ಇದೇ ಕಾರಣ ಇಟ್ಟುಕೊಂಡು ಬಿಜೆಪಿ ತೊರೆದ ಬಸನಗೌಡ ಪಾಟೀಲ ಯತ್ನಾಳ್ 2010ರಲ್ಲಿ ಜನತಾದಳ ಸೇರಿದರು. ಆದರೆ, ಈ ಸಲ ಗೆಲುವಿನ ಹಾರ ಅವರ ಕೊರಳು ಸೇರಲಿಲ್ಲ. ಸೋತರೂ ಬಸನಗೌಡ ಪಾಟೀಲ್ ಯತ್ನಾಳ್ ಮಹತ್ವಾಕಾಂಕ್ಷಿಯಾಗಿದ್ದರು. ಜನತಾದಳದ ರಾಜ್ಯಾಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟಿದ್ದ ಅವರ ಬೇಡಿಕೆಯನ್ನು ಜನತಾದಳ ತಳ್ಳಿಹಾಕಿತು. ಮರಳಿ ತಮ್ಮ ಮೂಲ ಪಕ್ಷ ಬಿಜೆಪಿ ಸೇರಿದರು.

ಬಂಡಾಯ ಸ್ಪರ್ಧಿಸಿಯೂ ಗೆಲುವು ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿತ್ತು. ಆಗ ಹಿರಿಯ ಬಿಜೆಪಿ ನಾಯಕ ಸದಾನಂದಗೌಡ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿದ್ದ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಹೀಗೆ ಸ್ವತಂತ್ರವಾಗಿ ಗೆಲುವು ಸಾಧಿಸಿದ ಕಾರಣಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಆಹ್ವಾನ ನೀಡಿದ್ದರು ಎಂದಿದ್ದ ಅವರು, ಉಚ್ಚಾಟನೆಗೊಂಡ 3 ವರ್ಷಕ್ಕೆ ಬಿಜೆಪಿ ಸೇರಿದ್ದರು. ನಂತರ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಶಾಸಕರಾಗಿ ಬಿಜೆಪಿಯಿಂದ ಆಯ್ಕಯಾಗಿದ್ದರು.

ವಿವಾದಗಳು 2018ರಲ್ಲಿ ಬುದ್ದಿಜೀವಿಗಳು ದೇಶವನ್ನು ಹಾಳುಗೆಡವುತ್ತಿದ್ದಾರೆ ಎಂದು ದೂರಿದ್ದ ಅವರು, ಖಟ್ಟರ್ ಹಿಂದೂವಾದಿಯೆಂದು ಗುರುತಿಸಿಕೊಂಡಿದ್ದರು. ಫೆಬ್ರವರಿ 20, 2020ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಯತ್ನಾಳ್ ಕ್ಷಮೆ ಕೇಳುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು.

ತಮಗೆ ಮುಸ್ಲಿಮರ ಮತಗಳು ಬಿದ್ದಿಲ್ಲ ಹಾಗೂ ಅವು ಬೇಕಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವೈರಲ್‌ ಆಗಿರುವ ವಿಡಿಯೊ ತಮ್ಮದೇ ಎಂದು ಹೇಳಿಕೊಂಡಿರುವ ಯತ್ನಾಳ್‌, ಆ ಮಾತುಗಳಿಗೆ ತಾವು ಈಗಲೂ ಬದ್ಧ ಎಂದು ಹೇಳಿದ್ದರು.

ತಮ್ಮನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದ ಸದಾನಂದಗೌಡರ ಕುರಿತು, ‘ನಾನು ಓರ್ವ ಸಾಮಾನ್ಯ ಶಾಸಕ. ಆದರೆ, ನಾನು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದೆ. ಡಿ.ವಿ.ಸದಾನಂದಗೌಡರು ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಯಾರು ಸೀನಿಯರ್ ಅಂತಾ ನೀವೇ ತಿಳಿದುಕೊಳ್ಳಿ’ ತಿರುಗೇಟು ಕೊಟ್ಟಿದ್ದರು.

ಬಿಜೆಪಿಯ ಶಾಸಕರಾಗಿದ್ದಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಹೇಳಿಕೆ ನೀಡುತ್ತಲೇ ಬಂದಿರುವ ಯತ್ನಾಳ್, ಸದಾ ಸುದ್ದಿಯಲ್ಲಿರುತ್ತಾರೆ. ಅವರಿಗೆ ಪ್ರಾದೇಶಿಕವಾಗಿ ಪ್ರಬಲ ಶಕ್ತಿಯಿದೆ ಎಂದೇ ಬಿಜೆಪಿ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತು.

ಬಿಜೆಪಿ ಮೌನ; ಏನು ಕಾರಣ? ಇಷ್ಟೆಲ್ಲ ಆದರೂ, ವಿವಾದಿತ ಹೇಳಿಕೆಗಳಿಗೆ ಇನ್ನೊಂದು ಹೆಸರು ಎಂದೇ ಬಿಂಬಿತವಾಗಿರುವ, ಬಸನಗೌಡ ಪಾಟೀಲ್ ಯತ್ನಾಳರ ಕುರಿತು ಬಿಜೆಪಿ ಈಗಲೂ ಮೃದು ಧೋರಣೆ ತಳೆದಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಲವಾದ ಕಾರಣ ಇಲ್ಲದೇ ಏನನ್ನೂ ಮಾಡದ ಬಿಜೆಪಿ ತಲೆಗಳ ಈ ಲೆಕ್ಕದ ಹಿಂದೆ ಯಾವುದೋ ಪ್ರಬಲ‌ ಕಾರಣ ಇದ್ದೇ ಇದೆ. ‌ಸ್ಥಳೀಯವಾಗಿ ಬಸನಗೌಡ ಪಾಟೀಲ್ ಯತ್ನಾಳರ ಪ್ರಾಬಲ್ಯ, ಉತ್ತರ ಕರ್ನಾಟಕ ಭಾಗದಲ್ಲಿ ಅವರ ಹಿಡಿತ, ಅವರು ಗಳಿಸಿರುವ ಹೆಸರು ಬಿಜೆಪಿ ಸೌಮ್ಯ ಧೋರಣೆಗೆ ಕಾರಣ.

ಹಿಂದೆ ಬಿಜೆಪಿ- ಆರ್​ಎಸ್​ಎಸ್​ನ ಕೆಲವು ಬಲಿಷ್ಠ ಶಕ್ತಿಕೇಂದ್ರಗಳು ಯತ್ನಾಳ್ ಬೆಂಬಲಕ್ಕಿದ್ದವು. ಅಲ್ಲಿ ರೂಪುಗೊಳ್ಳುತ್ತಿದ್ದ ಗುಂಡುಗಳು ಬಸನಗೌಡ ಯತ್ನಾಳರ ಕೋವಿಯಿಂದ ಸಿಡಿಯುತ್ತಿದ್ದವು. ಆದರೆ, ಸದ್ಯದ ರಾಜಕೀಯ ವಾತಾವರಣದಲ್ಲಿ ಯತ್ನಾಳರಿಗೆ ಈ ‘ಸಿಡಿತಲೆ’ ಬಲವಿಲ್ಲ. ಈಗಲೂ ಪದೇಪದೇ ಪಕ್ಷಕ್ಕೆ ಮುಜುಗರ ತಂದರೆ ಉಚ್ಚಾಟನೆಗೊಳಿಸಬಹುದು. ಆದರೆ ಪಂಚಮಸಾಲಿಗರ ಬೆಂಬಲ ಅವರೊಟ್ಟಿಗೆ ಇದೆ. ಇದನ್ನೆಲ್ಲ ನೆನೆದು ಅವರು ಸದ್ಯ ವಾಕ್ಪ್ರಹಾರವನ್ನು ಹಿಡಿತದಲ್ಲಿಟ್ಟುಕೊಂಡೇ ಹೋರಾಡುವುದು ಒಳಿತು.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

ಇದನ್ನೂ ಓದಿ: Mallikarjun Kharge ವ್ಯಕ್ತಿ-ವ್ಯಕ್ತಿತ್ವ | ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದ ಹಾದಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು