AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಆಯ್ತು, ಮುಂದಿನ ವಾರ ಪ್ರತಿಪಕ್ಷ ನಾಯಕನ ಆಯ್ಕೆ: ಈ ನಾಯಕರ ಹೆಸರು ಮುಂಚೂಣಿಯಲ್ಲಿ

ಲಿಂಗಾಯತ ಸಮುದಾಯದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಹೈಕಮಾಂಡ್ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ವಿವಿಧ ಸಮುದಾಯಗಳ ಪ್ರತಿಪಕ್ಷ ನಾಯಕರನ್ನು ನೇಮಿಸುವ ಸಾಧ್ಯತೆ ಇದೆ. ಪ್ರತಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲು ಹೈಕಮಾಂಡ್ ನಿರ್ಧರಿಸಿದರೆ, ಮಾಜಿ ಸಚಿವರಾದ ಡಾ.ಅಶ್ವಥ್ ನಾರಾಯಣ್, ಆರ್.ಅಶೋಕ, ಆರಗ ಜ್ಞಾನೇಂದ್ರ ಅವರೇ ಮುಂಚೂಣಿಯಲ್ಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಆಯ್ತು, ಮುಂದಿನ ವಾರ ಪ್ರತಿಪಕ್ಷ ನಾಯಕನ ಆಯ್ಕೆ: ಈ ನಾಯಕರ ಹೆಸರು ಮುಂಚೂಣಿಯಲ್ಲಿ
ಬಿಜೆಪಿ ನಾಯಕರು
Follow us
TV9 Web
| Updated By: Ganapathi Sharma

Updated on:Nov 11, 2023 | 10:59 AM

ಬೆಂಗಳೂರು, ನವೆಂಬರ್ 11: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ (BY Vijayendra)  ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ (BJP State President) ನೇಮಿಸಿದ ನಂತರ ಪಕ್ಷದ ಹೈಕಮಾಂಡ್ ನವೆಂಬರ್ 17 ರಂದು ವಿಧಾನಸಭೆಯ ಉಭಯ ಸದನಗಳ ಪ್ರತಿಪಕ್ಷ ನಾಯಕರ ಹೆಸರನ್ನು ಘೋಷಿಸಲು ನಿರ್ಧರಿಸಿದೆ. ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಅದಕ್ಕೆ ಕೇಂದ್ರದಿಂದ ವೀಕ್ಷಕರು ಬರಲಿದ್ದಾರೆ. ಪ್ರತಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ನೂತನ ಅಧ್ಯಕ್ಷ ವಿಜಯೇಂದ್ರ ಶುಕ್ರವಾರವೇ ತಿಳಿಸಿದ್ದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕನಿಗೆ ಮಣೆ ಹಾಕಿದ ಕಾರಣ, ಪಕ್ಷವು ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕನನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎನ್ನಲಾಗಿದೆ.

ವಿಧಾನಸಭೆ ಚುನಾವಣೆ ಘೋಷಣೆಯಾದ ಸುಮಾರು ಆರು ತಿಂಗಳ ನಂತರ ಬಿಜೆಪಿ ಶುಕ್ರವಾರ ವಿಜಯೇಂದ್ರ ಅವರನ್ನು ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರನ್ನಾಗಿ ಘೋಷಿಸಿದೆ. ಇದೀಗ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ನೇಮಕಕ್ಕೆ ವೇದಿಕೆ ಸಜ್ಜಾಗಿದೆ.

ನವೆಂಬರ್ 17 ರಂದು ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹೈಕಮಾಂಡ್ ಕಳುಹಿಸಿದ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ ಎಂದು ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.

ಮುಂದಿನ ಶುಕ್ರವಾರ ಸಂಜೆ ಸಭೆ ನಿಗದಿಯಾಗಿದ್ದು, ಅದೇ ದಿನ ವಿರೋಧ ಪಕ್ಷದ ನಾಯಕರ ಹೆಸರನ್ನು ಹೈಕಮಾಂಡ್ ಪ್ರಕಟಿಸುವ ನಿರೀಕ್ಷೆಯಿದೆ.

ಜಾತಿ ಲೆಕ್ಕಾಚಾರ

ಲಿಂಗಾಯತ ಸಮುದಾಯದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಹೈಕಮಾಂಡ್ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ವಿವಿಧ ಸಮುದಾಯಗಳ ಪ್ರತಿಪಕ್ಷ ನಾಯಕರನ್ನು ನೇಮಿಸುವ ಸಾಧ್ಯತೆ ಇದೆ.

ಪ್ರತಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲು ಹೈಕಮಾಂಡ್ ನಿರ್ಧರಿಸಿದರೆ, ಮಾಜಿ ಸಚಿವರಾದ ಡಾ.ಅಶ್ವಥ್ ನಾರಾಯಣ್, ಆರ್.ಅಶೋಕ, ಆರಗ ಜ್ಞಾನೇಂದ್ರ ಅವರೇ ಮುಂಚೂಣಿಯಲ್ಲಿದ್ದಾರೆ. ಒಬಿಸಿ ನಾಯಕರಿಗೆ ಪ್ರಾತಿನಿಧ್ಯ ನೀಡಲು ಪಕ್ಷ ನಿರ್ಧರಿಸಿದರೆ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರು ಪ್ರಮುಖ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.

ಒಕ್ಕಲಿಗ ಬೆಂಬಲಿತ ಜೆಡಿಎಸ್ ಜತೆಗಿನ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು ಲಿಂಗಾಯತರಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳಲು ಪಕ್ಷ ನಿರ್ಧರಿಸಿದರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ನಿರ್ಣಾಯಕ ಸ್ಥಾನ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದರೆ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಕೂಡ ರೇಸ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮುಂದಿನ ವಾರ ಪ್ರತಿಪಕ್ಷ ನಾಯಕನ ಆಯ್ಕೆ: ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ವಿಷಯಕ್ಕೆ ಬಂದರೆ, ಪಕ್ಷವು ಒಕ್ಕಲಿಗ ಮತ್ತು ಮಹಿಳೆ ವರ್ಗದ ಅಡಿಯಲ್ಲಿ ಎಂಎಲ್ಸಿ ತೇಜಸ್ವಿನಿ ಗೌಡ ಅವರನ್ನು ಆಯ್ಕೆ ಮಾಡಬಹುದು. ಒಬಿಸಿ ನಾಯಕನನ್ನು ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದರೆ, ಕೋಟಾ ಶ್ರೀನಿವಾಸ ಪೂಜಾರಿಗೆ ಮತ್ತೊಮ್ಮೆ ಅವಕಾಶ ಸಿಗಬಹುದು.

15 ಅಥವಾ 16ರಂದು ವಿಜಯೇಂದ್ರ ಪದಗ್ರಹಣ

ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರಾಗಿ ನೇಮಕವಾಗಿರುವ ಬಿವೈ ವಿಜಯೇಂದ್ರ ನವೆಂಬರ್ 15 ಅಥವಾ 16ರಂದು ಪದಗ್ರಹಣ ಮಾಡುವ ಸಾಧ್ಯತೆ ಇದೆ. ನವೆಂಬರ್ 17ರಂದು ಶಾಸಕಾಂಗ ಪಕ್ಷ ಸಭೆ ನಡೆಸಿ ವಿಜಯೇಂದ್ರ ದೆಹಲಿಗೆ ತೆರಳಲಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 am, Sat, 11 November 23