ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿಯೂ ಎನ್​ಡಿಎ ಗೆಲ್ಲುವ ವಿಶ್ವಾಸ: ಬಿವೈ ವಿಜಯೇಂದ್ರ

BJP Core Committee Meeting: ಕೇಂದ್ರ ಗೃಹ ಸಚಿವ, ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ಮೈಸೂರು ಪ್ರವಾಸ ಮುಕ್ತಾಯಗೊಂಡಿದೆ. ಮೈಸೂರಿನ ಹೋಟೆಲ್​ನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಅಲ್ಲಿ ನಡೆದ ಚರ್ಚೆಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಾಯಕ ಸಿಟಿ ರವಿ ಮಾಹಿತಿ ನೀಡಿದರು.

ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿಯೂ ಎನ್​ಡಿಎ ಗೆಲ್ಲುವ ವಿಶ್ವಾಸ: ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ
Edited By:

Updated on: Feb 11, 2024 | 7:10 PM

ಮೈಸೂರು, ಫೆಬ್ರವರಿ 11: ಬಿಜೆಪಿಯ (BJP) ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಅವರ ಮೈಸೂರು (Mysuru) ಪ್ರವಾಸ ಯಶಸ್ವಿಯಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಭಾನುವಾರ ಸಂಜೆ ತಿಳಿಸಿದರು. ಮೈಸೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ ಅವರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮುಖಂಡರ ಜತೆ ಚರ್ಚೆಯಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕೂಡ ಎನ್​ಡಿಎ ಮೈತ್ರಿಕೂಟ ಗೆಲ್ಲುವ ವಾತಾವರಣ ಇದೆ. ಪ್ರತಿ ಬೂತ್​ನಲ್ಲೂ ಶೇ 10ರ ವೋಟ್​ ಹೆಚ್ಚಳ ಮಾಡಬೇಕು ಎಂದು ಹೇಳಿದರು.

ಅಮಿತ್ ಶಾ ಅವರ ಮೈಸೂರು ಪ್ರವಾಸ ನಮಗೆ ಬಹಳ ಹುಮ್ಮಸ್ಸು ತಂದಿದೆ. ಶೀಘ್ರದಲ್ಲೇ ಸೀಟ್ ಹಂಚಿಕೆ ಬಗ್ಗೆ ಹೈಕಮಾಂಡ್​ ತೀರ್ಮಾನಿಸಲಿದೆ. ಆದರೆ ಕೋರ್ ಕಮಿಟಿ ಸಭೆಯಲ್ಲಿ ಸೀಟ್ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ. ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಚರ್ಚೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೊಟ್ಟ ಕುದುರೆ ಏರದವನು ಶೂರನು ಅಲ್ಲ, ಧೀರನೂ ಅಲ್ಲ ಎಂದರು.

ಸಿಎಂ ಧರಣಿ ಬಗ್ಗೆ ಚರ್ಚೆ: ಸಿಟಿ ರವಿ

ದೆಹಲಿಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಧರಣಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಸಿಟಿ ರವಿ ಹೇಳಿದರು. ದುರುದ್ದೇಶದ ಪ್ರತಿಭಟನೆ ಬಗ್ಗೆ ಜನ ಜಾಗೃತಿ ಮೂಡಿಸುವಂತೆ ಅಮಿತ್ ಶಾ ಸಲಹೆ ನೀಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಕರ್ನಾಟಕಕ್ಕೆ ಎಷ್ಟು ಅನುದಾನ ಕೊಟ್ಟಿದೆ? ಡಾ. ಮನಮೋಹನ್ ಸಿಂಗ್ ಸರ್ಕಾರ ಎಷ್ಟು ಅನುದಾನ ಕೊಟ್ಟಿತ್ತು? ತೆರಿಗೆಯಿಂದ ಕೊಟ್ಟ ಪಾಲು, ಸಹಾಯಧನ, ಅನುದಾನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಜನರಿಗೆ ಮನವರಿಕೆ ಮಾಡಿಕೊಡಲು ಶಾ ಅವರು ಸಲಹೆ ನೀಡಿದ್ದಾರೆ ಎಂದು ರವಿ ಹೇಳಿದರು.

ಇದನ್ನೂ ಓದಿ: ಮೈಸೂರು: ಜೆಡಿಎಸ್ ಮೈತ್ರಿ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಗೆ

ಸಿಎಂ ಹಾಗೂ ಡಿಸಿಎಂ ನಡುವೆ ಲೂಟಿಗಾಗಿ ಪೈಪೋಟಿ ನಡೆದಿದೆ. ಸಿಎಂ ಸಿದ್ದರಾಮಯ್ಯಗೆ ಇದು ಫೈನಲ್ ಆಟ. ಡಿಸಿಎಂಗಿಂತ ಯಾವುದರಲ್ಲೂ ಕಡಿಮೆ ಆಗಬಾರದೆಂದು ಲೂಟಿ ಮಾಡುತ್ತಿದ್ದಾರೆ. 40% ಕಮಿಷನ್‌, ವರುಣ ಹಾಗೂ ಕನಕಪುರ ಸಬ್‌ಚಾರ್ಜ್‌ ಸಹ ಸೇರಿದೆ ಎಂದು ರವಿ ಟೀಕಿಸಿದರು.

ಅಹಮದಾಬಾದ್​ಗೆ ಅಮಿತ್ ಶಾ ನಿರ್ಗಮನ

ಮೈಸೂರಿನಲ್ಲಿ ನಡೆಯುತ್ತಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಗಮಿಸಿದರು. ಅವರು ಮೈಸೂರಿನಿಂದ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ