ಡಿಕೆಶಿ ಸಿಎಂ ಆಗುವ ಉಪ ಚುನಾವಣೆ ಇದು: ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ

ಕರ್ನಾಟಕ ಕಾಂಗ್ರೆಸ್​​ ಮುಂದಿನ ಸಿಎಂ ಬಗ್ಗೆ ಭಾರೀ ಚರ್ಚೆಯಾಗಿದೆ. ಸರ್ಕಾರ ರಚನೆಯಾದಾಗಿನಿಂದಲೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣ ನಾಯಕರು ಸಿಎಂ ಕುರ್ಚಿ ಬಗ್ಗೆ ಒಂದಲ್ಲ ಒಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಹಿರಿಯ ಕಾಂಗ್ರೆಸ್​ ನಾಯಕರೇ ತಾವೇ ಸಿಎಂ ಎಂದು ಹೇಳಿಕೊಂಡು ಓಡಾಡಿದ್ದರು. ಇದಕ್ಕೆ ಹೈಕಮಾಂಡ್​ ಮಧ್ಯ ಪ್ರವೇಶಿಸಿ ಬ್ರೇಕ್ ಹಾಕಿತ್ತು. ಇದೀಗ ಉಪಚುನಾವಣೆ ಸಂದರ್ಭದಲ್ಲೂ ಸಹ ಸಿಎಂ ವಿಚಾರ ಸದ್ದು ಮಾಡಿದೆ.

ಡಿಕೆಶಿ ಸಿಎಂ ಆಗುವ ಉಪ ಚುನಾವಣೆ ಇದು: ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ
ಡಿಎಸಿಎಂ ಡಿಕೆ ಶಿವಕುಮಾರ್​

Updated on: Oct 27, 2024 | 5:20 PM

ರಾಮನಗರ, (ಅಕ್ಟೋಬರ್ 27): ಸಿದ್ದರಾಮಯ್ಯ ಬುಡಕ್ಕೆ ಮುಡಾ ಹಗರಣ ಬಂದ ಬೆನ್ನಲ್ಲೇ ಸಿಎಂ ರಾಜೀನಾಮೆ ಬಗ್ಗೆ ಸುದ್ದಿ ಹರಿದಾಡಿದ್ದವು. ಅಲ್ಲದೇ ಕಾಂಗ್ರೆಸ್​ನಲ್ಲೇ ಮುಂದಿನ ಸಿಎಂ ಬಗ್ಗೆ ರಾಜಕೀಯ ಬೆಳವಣಿಗೆಗಳು ಜೋರಾಗಿದ್ದವು. ಮುಂದಿನ ಸಿಎಂ ತಾವೇ ಎಂದು ಹಿರಿಯ ಕಾಂಗ್ರೆಸ್ ಶಾಸಕರು ಬಹಿರಂಗ ಹೇಳಿಕೆ ನೀಡಲು ಶುರು ಮಾಡಿದ್ದರು. ಆದ್ರೆ, ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಇದೀಗ ಬೈ ಎಲೆಕ್ಷನ್​ನಲ್ಲಿ ಸಿಎಂ ವಿಚಾರ ಸದ್ದು ಮಾಡಲಾರಂಭಿಸಿದೆ. ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿರುವ ಶಾಸಕ ಶಿವಲಿಂಗೇಗೌಡ, ಡಿಕೆಶಿವಕುಮಾರ್​ ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು. ಉಪಚುನಾವಣೆ ಫಲಿತಾಂಶ ಡಿ.ಕೆ.ಶಿವಕುಮಾರ್​ ನಾಯಕತ್ವ ತೋರಿಸುತ್ತೆ. ನೀವು ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಬಿಟ್ಟುಕೊಡಬಾರದು. ರಾಜ್ಯದ ರಾಜಕಾರಣದ ತಿರುವು ಚನ್ನಪಟ್ಟಣ ಕ್ಷೇತ್ರದಿಂದ ಶುರುವಾಗುತ್ತೆ ಎಂದು ಹೇಳಿದರು.

ಇದನ್ನೂ ಒದಿ: ಚನ್ನಪಟ್ಟಣದಲ್ಲಿ ಜಾತಿ ಲೆಕ್ಕಾಚಾರ: ಮುಸ್ಲಿಂ ಮತಗಳ ಮೇಲೆ ಯೋಗೇಶ್ವರ್, ಜೆಡಿಎಸ್ ಕಣ್ಣು

ಡಿ.ಕೆ.ಸುರೇಶ್​ರನ್ನ ನಿಲ್ಲಿಸಿ ಗೆಲ್ಲಿಸಿ ಕೊಡೋದಕ್ಕೆ ಡಿಕೆ ಶಿವಕುಮಾರ್​​ಗೆ ಆಗುತ್ತಿರಲಿಲ್ವಾ? ಆದರೆ ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ತ್ಯಾಗ ಮಾಡಿದ್ದಾರೆ. ರಾಜಕೀಯ ಜೀವನ ಉಳಿಸಿಕೊಳ್ಳಲು ಕುಮಾರಸ್ವಾಮಿ​​​ ಬಿಜೆಪಿಗೆ ಹೋದ್ರು. ಇಲ್ಲದಿದ್ರೆ ಹೆಚ್​ಡಿಕೆ ರಾಜಕಾರಣ ಮುಗಿದೇ ಹೋಗ್ತಿತ್ತು. ಕುಮಾರಸ್ವಾಮಿ ತಮ್ಮ ಕುಟುಂಬ ಅಷ್ಟೇ ಬದುಕಿದ್ರೂ ಸಾಕು ಅನ್ನೋ ಥರದಲ್ಲಿದ್ದಾರೆ ಎಂದು ಎಚ್​ಡಿಕೆ ವಿರುದ್ಧ ಕಿಡಿಕಾರಿದರು.

ಒಕ್ಕಲಿಗ ಮತ ಸೆಳೆಯುವ ಪ್ಲಾನ್?

ಉಪಚುನಾವಣೆ ಘೋಷಣೆಯಾದ ಮೂರು ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಕ್ಷೇತ್ರದಲ್ಲಿನ ಸೋಲು ಗೆಲುವಿನ ಆಧಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕರು ಒಕ್ಕಲಿಗ ಮತ ಸೆಳೆಯಲೂ ಭರ್ಜರಿ ಪ್ಲಾನ್ ಮಾಡಿಕೊಂಡಿದಂತಿದೆ. ಡಿಕೆಶಿ ಮುಂದಿನ ಸಿಎಂ ಅಂದರೆ ಒಕ್ಕಲಿಗರು ಸಿಪಿ ಯೋಗೇಶ್ವರ್​​ ಮತ ನೀಡಿ ಗೆಲ್ಲಿಸಲಿದ್ದಾರೆ ಎನ್ನುವ ಪ್ಲಾನ್ ಕಾಂಗ್ರೆಸ್ ನಾಯಕರದ್ದಾಗಿ. ಹೀಗಾಗಿ ಡಿಕೆಶಿ ಸಿಎಂ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ.

ಚನ್ನಪಟ್ಟಣ ಕೈವಶ ಮಾಡಿಕೊಂಡು ಕಾಂಗ್ರೆಸ್ ಹಿಡಿತ ಮೆರೆಸಲು ನಾಯಕರು ರಣತಂತ್ರ ರೂಪಿಸಿದ್ದಾರೆ. ಈ ಸಂಬಂಧ ಕ್ಷೇತ್ರದ ಪ್ರಬಲ ನಾಯಕರಾಗಿದ್ದ, ಬಿಜೆಪಿಯಿಂದ ಟಿಕೆಟ್ ವಂಚಿತ ನಾಯಕ ಸಿಪಿ ಯೋಗೇಶ್ವರ್ ಅವರನ್ನ ಸೆಳೆಯಾಗಿದ್ದು. ಒಂದು ವೇಳೆ ಎಲ್ಲವು ಅಂದುಕೊಂಡಂತೆ ಆದರೆ, ಒಕ್ಕಲಿಗರ ಅಭಿಮಾನ, ಸಮುದಾಯ ನಾಯಕ ಡಿಕೆ ಶಿವಕುಮಾರ್ ಅವರ ಮೇಲೆ ಹೆಚ್ಚಾಗುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಒಕ್ಕಲಿಗರ ಮತ ಸೆಳೆಯಲು ತಂತ್ರ ರೂಪಿಸಿರುವ ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಕ್ಷೇತ್ರ ಗೆದ್ದರೆ ಸಮುದಾಯವರ ತಮ್ಮೊಂದಿಗೆ ನಿಲ್ಲಲಿದ್ದಾರೆ ಎಂಬುದು ಅವರ ಪ್ಲಾನ್.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us