ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ: ಸಂತೋಷ್ ಲಾಡ್
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ತಿಂಗಳ ಕಳೆದರೂ ರಾಜಕೀಯ ಕೆಸರೆರಚಾಟಗಳು ಮುಂದುವರಿದಿದೆ. ಮಂದಿರ ನಿರ್ಮಾಣ ವಿಚಾರವಾಗಿ ಕಾಂಗ್ರೆಸ್ ನಾಯಕರು ಒಂದಲ್ಲಾ ಒಂದು ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ ಎಂದರು.
![ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ: ಸಂತೋಷ್ ಲಾಡ್](https://images.tv9kannada.com/wp-content/uploads/2024/02/santosh-lad-1.jpg?w=1280)
ಹುಬ್ಬಳ್ಳಿ, ಫೆ.18: ರಾಮ ಮಂದಿರ (Ram Mandir) ನಿರ್ಮಿಸುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಅದೂ ಶೇ.40 ರಷ್ಟು ಮಾತ್ರ ನಿರ್ಮಾಣ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸುಪ್ರೀಂಕೋರ್ಟ್ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂದರು.
ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ರಾಮ ಮಂದಿರದ ಹೆಸರಿನಲ್ಲಿ ಯಾಕೆ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೆ, ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ಏನು ಕೆಲಸ ಮಾಡಿದೆ? ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ದರ ಕಡಿಮೆ ಆಗಿದೆಯಾ? ಬಡವರಿಗೆ ಅನುಕೂಲವಾಗುವ ಒಂದು ಕಾರ್ಯಕ್ರಮ ಮಾಡಿಲ್ಲ. ದೇಶ ಹಳ್ಳ ಹಿಡಿದು ಹೋಗಿದೆ ಎಂದರು.
ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವ ಪ್ರಭಾವಿಯಾಗಿದ್ದರೆ ಟಿವಿ ಆಫ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ ಅಪಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದರು. ಹಾಗಿದ್ದರೆ RDX ಹೇಗೆ ಬಂತು? ದೇಶದಲ್ಲಿ ಈ ತರಹ ಚರ್ಚೆಗಳೇ ಆಗತಿಲ್ಲ ಎಂದರು.
ಇದನ್ನೂ ಓದಿ: ಪವಡಿಸು ಪರಮಾತ್ಮ; ಬಾಲ ರಾಮನಿಗೆ ಬೇಕು ವಿಶ್ರಾಂತಿ: ಇನ್ನು ಅಯೋಧ್ಯೆ ಮಂದಿರವನ್ನು 1 ಗಂಟೆ ಕಾಲ ಮುಚ್ಚಲಾಗುವುದು
ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಇಂದಿರಾ ಗಾಂಧಿ ಮೂರನೇ ಮಗನಂತಿದ್ದ ಕಮಲನಾಥ್ ಅವರು ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ಸೋತ ಕಮಲನಾಥ್ ಅವರನ್ನು ತೆಗೆದುಕೊಂಡಿದ್ದೀರಿ ಎಂದರು.
ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಕಮಲನಾಥ್ ವಿಚಾರದಿಂದ ಯಾವ ಹಿಂದೂಗೆ ಲಾಭವಾಗಿಲ್ಲ. ಇದಕ್ಕೆಲ್ಲ ಅಂತ್ಯ ಇದೆ, ದೇವರು ಇದ್ದಾನೆ ಎಂದ ಸಂತೋಷ್ ಲಾಡ್, ಬಿಜೆಪಿ ಏನೂ ಮಾಡಿಲ್ಲ. ಗ್ಯಾರಂಟಿಗಳನ್ನು ನೋಡಿ ಮತ ಹಾಕಿದರೆ ಬಿಜೆಪಿಯವರು ಗೆಲ್ಲಲ್ಲ. ಅಭಿವೃದ್ಧಿ ವಿಚಾರದ ಮೇಲೆ ಚುಣಾವಣೆಗೆ ಹೋದರೆ ಬಿಜೆಪಿ ಗೆಲ್ಲಲ್ಲ. ಜನರಿಗೆ ಮೋಸ ಮಾಡಿ ವೋಟ್ ತೆಗೆದುಕೊಳ್ಳುತ್ತಾರೆ. ಮುಂದಿನ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದರು.
ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ನಾನು ಲೋಕಸಭೆ ಚುನಾವಣೆಗೆ ನಿಲ್ಲಲು ಮನಸಿಲ್ಲ. ಲೋಕಸಭೆ ಚುನಾವಣೆ ಸ್ಪರ್ಧೆ ಮಾಡಲು ನನಗೆ ಆಸಕ್ತಿ ಇಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ