ಶ್ರೀರಾಮ ಬಿಜೆಪಿಯವರ ಅಪ್ಪನ ಮನೆ ಆಸ್ತಿಯಾ: ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ

ಬಿಜೆಪಿ ನಾಯಕರು ಭಗವಾನ್ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಾಮ ಬಿಜೆಪಿಯವರ ಅಪ್ಪನ ಮನೆ ಆಸ್ತಿಯಾ: ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ
ಡಿಕೆ ಶಿವಕುಮಾರ್
Edited By:

Updated on: Jan 23, 2024 | 2:55 PM

ಬೆಂಗಳೂರು, ಜನವರಿ 23: ಭಗವಾನ್ ಶ್ರೀರಾಮ (Lord Rama) ಏನು ಬಿಜೆಪಿಯವರ (BJP) ಅಪ್ಪನ ಮನೆ ಆಸ್ತಿಯಾ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರಲ್ಲಿ ಶಿವನ ಮಗ ಕುಮಾರನೂ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದರು.

ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ. ದೇಗುಲಗಳಲ್ಲಿ ಪೂಜೆ ಮಾಡುವಂತೆ ನಾವು ಆದೇಶ ಮಾಡಿಲ್ವಾ? ಮುಜರಾಯಿ ಇಲಾಖೆ ದೇಗುಲಗಳಿಗೆ ಆದೇಶಿಸಿಲ್ವಾ? ರಾಮನನ್ನೂ ಪೂಜಿಸುತ್ತೇವೆ, ಸೀತೆಯನ್ನೂ ಪೂಜಿಸುತ್ತೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ

ಮೈತ್ರಿ ಸರ್ಕಾರ ಪತನಗೊಳಿಸಿದವರ ಜೊತೆಗೆ ಸಖ್ಯ ಬೆಳೆಸಿದ್ದಾರೆ ಎಂದು ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಹಂಚುತ್ತಿದ್ದಾರೆ ಎಂದು ಅವರು ದೂರಿದರು.

ರಾಹುಲ್ ಗಾಂಧಿ ಯಾತ್ರೆಯ ಯಶಸ್ಸು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ: ಡಿಕೆ ಶಿವಕುಮಾರ್

ಕುಟುಂಬಸ್ಥರ ಸಾವು ಸಹಿಸಿಕೊಂಡು ರಾಹುಲ್ ಗಾಂಧಿ ಜೋಡೋ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಕೆ ಶಿವಕುಮಾರ್ ಹೇಳಿದರು.

ದೇಶದ ಜನರ ಹೃದಯ ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಜೋಡೋ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ದೇಶದ ನ್ಯಾಯಕ್ಕಾಗಿ ರಾಹುಲ್​ 2ನೇ ಹಂತದ ಯಾತ್ರೆ ಮಾಡುತ್ತಿದ್ದಾರೆ. ಇದೊಂದು ಮಾದರಿ ಹಾಗೂ ಐತಿಹಾಸಿಕವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ನಿಗಮ ಮಂಡಳಿಗಳಿಗೆ ಶಾಸಕರ ಹೆಸರು ಫೈನಲ್​​, ಚರ್ಚೆಯಲ್ಲಿದೆ ಕಾರ್ಯಕರ್ತರ ನೇಮ್ಸ್​​: ಸಿದ್ದರಾಮಯ್ಯ

ರಾಹುಲ್ ಗಾಂಧಿ ಅವರನ್ನು ಅಸ್ಸಾಂನ ಗುವಾಹಟಿ ನಗರಕ್ಕೆ ಪ್ರವೇಶಿಸಲು ಪೊಲೀಸರು ಬಿಡುತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಬದುಕಿದೆಯಾ? ರಾಹುಲ್ ಗಾಂಧಿ ಪಾದಯಾತ್ರೆಯಿಂದ ಅವರಿಗೆ (ಬಿಜೆಪಿ) ಭಯ. ನಾವು ರಾಜಕಾರಣಕ್ಕೆ ಧರ್ಮವನ್ನು‌ ದುರುಪಯೋಗ ಮಾಡುತ್ತಿಲ್ಲ. ನಮ್ಮ ಹೆಸರಿನಲ್ಲಿ ದೇವರುಗಳ ನಾಮ ಇದೆ. ಯಾವುದೇ ಜಾತಿ, ಧರ್ಮ ಇರಲಿ, ಎಲ್ಲದರದ್ದೂ ತತ್ವ ಒಂದೇ. ದೇವನೊಬ್ಬ ನಾಮ ಹಲವು, ಎಲ್ಲದರಲ್ಲೂ ದೇವರನ್ನು ನೋಡ್ತೇವೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Follow Us