ಜೆಡಿಎಸ್​ ಬಗ್ಗೆ ಅಸಮಾಧಾನ; ಕಾಂಗ್ರೆಸ್ ಸೇರುವ ಸುಳಿವು ಬಿಟ್ಟುಕೊಟ್ಟ ಜಿಟಿ ದೇವೇಗೌಡ

| Updated By: ganapathi bhat

Updated on: Aug 24, 2021 | 6:42 PM

GT Devegowda: ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ನಮಗೆ ಆಪ್ತರು. ಹೀಗಾಗಿ ನನ್ನ ಪುತ್ರ ಹರೀಶ್ ಗೌಡ ಫೋಟೋ ಹಾಕಿದ್ದಾರೆ. ಆದರೆ ಹರೀಶ್ ಗೌಡ ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

ಜೆಡಿಎಸ್​ ಬಗ್ಗೆ ಅಸಮಾಧಾನ; ಕಾಂಗ್ರೆಸ್ ಸೇರುವ ಸುಳಿವು ಬಿಟ್ಟುಕೊಟ್ಟ ಜಿಟಿ ದೇವೇಗೌಡ
ಜಿ.ಟಿ.ದೇವೇಗೌಡ (ಸಂಗ್ರಹ ಚಿತ್ರ)
Follow us on

ಮೈಸೂರು: ಜೆಡಿಎಸ್​ನಲ್ಲಿ ಆದ ಅವಮಾನಗಳ ಬಗ್ಗೆ ಹೆಚ್​​.ಡಿ. ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಆಗ ಅವರು ನಿನ್ನನ್ನು ಮರಿದೇವೇಗೌಡ ಎಂದುಕೊಂಡಿದ್ದೇನೆ. ನೀನು ನನ್ನ ಜೊತೆಯೇ ಇರಬೇಕೆಂದು ಹೇಳಿದ್ದರು. ಅದಕ್ಕೆ ನಾನು ದಯವಿಟ್ಟು ಕ್ಷಮಿಸಿ ಎಂದು ದೇವೇಗೌಡರಿಗೆ ಹೇಳಿದ್ದೆ. ನನ್ನೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಾತಾಡಿದ್ದಾರೆ ಎಂದಿದ್ದೆ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಸೇರುವ ಬಗ್ಗೆ ಜಿ.ಟಿ. ದೇವೇಗೌಡ ಸುಳಿವು ನೀಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕರಪತ್ರದಲ್ಲಿ ಹರೀಶ್‌ಗೌಡ ಫೋಟೋ ವಿಚಾರವಾಗಿ ಜಿ.ಟಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ನಮಗೆ ಆಪ್ತರು. ಹೀಗಾಗಿ ನನ್ನ ಪುತ್ರ ಹರೀಶ್ ಗೌಡ ಫೋಟೋ ಹಾಕಿದ್ದಾರೆ. ಆದರೆ ಹರೀಶ್ ಗೌಡ ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವತ್ತೂ ಪಕ್ಷದ ವಿರುದ್ಧವಾಗಿ ನಡೆದುಕೊಂಡಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಮೇಯರ್ ಚುನಾವಣೆ ನಡೆದಿತ್ತು. ಆಗ, ಚುನಾವಣೆಯ ವೇಳೆ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನನ್ನ ಮನಸ್ಸಿಗೆ ಅನಿಸಿದ್ದನ್ನು ನಾನು ನೇರವಾಗಿ ಹೇಳುತ್ತೇನೆ. ಅದನ್ನು ಸಹಿಸಿಕೊಳ್ಳುವುದಕ್ಕೆ ಅವರಿಗೆ ಆಗಿಲ್ಲ. ನಂತರ ನಡೆದ ಜೆಡಿಎಸ್ ಸಭೆಗಳಿಗೆ ನನ್ನನ್ನು ಆಹ್ವಾನಿಸಿಲ್ಲ. ನಾನು ಜೆಡಿಎಸ್‌ನಲ್ಲೇ ಇದ್ದರೂ ಕರೆದು ಮಾತನಾಡಿಲ್ಲ. ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವಂತೆ ನಿಯೋಗ ತೆರಳಿತ್ತು. ಆದರೆ, ಸಾರಾರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ಹೇಳಿದ್ದಾರೆ. ನಾನು ಯಾವುದೇ ಹುದ್ದೆ ಕೇಳದಿದ್ದರೂ ನನಗೆ ಅಪಮಾನ ಮಾಡಲಾಗಿದೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ಜಿ.ಟಿ. ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಹಳೇ ವಿಷಯ ಕೆದಕಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಿ.ಟಿ. ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ. ನಗರ ಪಾಲಿಕೆ ಚುನಾವಣೆ ಸಂಬಂಧ, ಟಿಕೆಟ್ ಹಂಚಿಕೆ ಸಂಬಂಧ ಚರ್ಚಿಸಿಲು ಕುಮಾರಸ್ವಾಮಿ ಕರೆ ಮಾಡಿದ್ದರು. ಆಗ ಹೆಚ್‌ಡಿಕೆ ಬಳಸಿದ ಭಾಷೆಯನ್ನು ಹೇಳಲಾಗುವುದಿಲ್ಲ. ಅಂತಹ ಭಾಷೆ ಬಳಸದಂತೆ ಕುಮಾರಸ್ವಾಮಿಗೆ ಹೇಳಿದ್ದೇನೆ. ಅದನ್ನು ಬಿಟ್ಟರೆ ಬೇರೆ ಏನನ್ನೂ ಕುಮಾರಸ್ವಾಮಿಗೆ ಹೇಳಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

ಸಾ.ರಾ. ಮಹೇಶ್ ನನ್ನ ವಿರುದ್ಧ ಹೇಳಿಕೆ ನೀಡಿದ್ದರು
ಪಾಲಿಕೆ ಚುನಾವಣೆ ವೇಳೆ ಸಾ.ರಾ.ಮಹೇಶ್ ಪ್ರಚಾರ ಮಾಡಿಲ್ಲ. ಒಂದು ದಿನವೂ ಶಾಸಕ ಸಾ.ರಾ.ಮಹೇಶ್ ಪ್ರಚಾರ ಮಾಡಿಲ್ಲ. ಆದರೆ, ನಾನು ಎಲ್ಲ ಅವಮಾನ ಸಹಿಸಿಕೊಂಡು ಪ್ರಚಾರ ಮಾಡಿದ್ದೇನೆ. ಆಗ ನನಗೆ ರಾಜಕೀಯ ಬಿಟ್ಟು ಬೇರೆ ಗತಿ ಇಲ್ಲ ಎಂದು ಶಾಸಕ ಸಾ.ರಾ. ಮಹೇಶ್ ನನ್ನ ವಿರುದ್ಧ ಹೇಳಿಕೆ ನೀಡಿದ್ದರು. ಆ ಸಂದರ್ಭ ಹೆಚ್.ಡಿ. ದೇವೇಗೌಡರು ಸಾ.ರಾ. ಮಹೇಶ್‌ರನ್ನು ಬೈದಿದ್ದರು. ಇಷ್ಟೆಲ್ಲಾ ಆದರೂ ನಾನು ಜೆಡಿಎಸ್ ಪರ ಕೆಲಸ ಮಾಡಿದ್ದೇನೆ ಎಂದು ಜಿ.ಟಿ. ದೇವೇಗೌಡ ಅಸಮಾಧಾನ ತೋಡಿಕೊಂಡಿದ್ದಾರೆ.

ಸಾ.ರಾ. ಮಹೇಶ್ ಮತ್ತು ಹೆಚ್​.ಡಿ.ಕೆ ಆದರೆ ಸಾ.ರಾ. ಮಹೇಶ್ ಹೀರೋ, ಸಾ.ರಾ. ಮಹೇಶ್ ಮೈನಸ್ ಹೆಚ್​.ಡಿ.ಕೆ ಆದರೆ ಸಾ.ರಾ. ಮಹೇಶ್ ಝೀರೋ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂದು ನಾನು ನಿರ್ಧರಿಸಿಲ್ಲ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಯಕರು ಬಂದಿದ್ದು ನಿಜ. ಅವರು ನಾವು ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ಹೇಳಿದ್ರು. ಹೆಚ್‌ಡಿಡಿ, ಹೆಚ್‌ಡಿಕೆ ನಾಯಕತ್ವದಲ್ಲಿ ಒಂದಾಗಿ ಬಂದಿದ್ದೇವೆ. ನೀವು ನಮ್ಮ ಜತೆ ಇರಬೇಕೆಂದು ಮಾತಾಡಲು ಬಂದಿದ್ದರು. ಇದೇ ವೇಳೆ ಅವರ ನೋವುಗಳನ್ನು ನನ್ನ ಬಳಿ ಹಂಚಿಕೊಂಡರು. ಮತ್ತೆ ಬರುವುದಾಗಿ ಹೇಳಿ ಹೋಗಿದ್ದಾರೆ ಎಂದು ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಹರೀಶ್‌ಗೌಡಗೆ ಹುಣಸೂರಿನಿಂದ ಸ್ಪರ್ಧಿಸುವ ಅರ್ಹತೆ ಇತ್ತು. ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಕೂಡ ಹೆಸರು ಪ್ರಸ್ತಾಪಿಸಿದ್ದರು. ನಂತರ ಹೆಚ್. ವಿಶ್ವನಾಥ್‌ರನ್ನು ತಂದು ನಿಲ್ಲಿಸಲಾಯಿತು. ಆಗ ನಾನು, ನನ್ನ ಮಗ ಎಲ್ಲರೂ ಹೆಚ್. ವಿಶ್ವನಾಥ್ ಪರ ಪ್ರಚಾರ ಮಾಡಿದ್ದೇವೆ. ಬೈಎಲೆಕ್ಷನ್‌ನಲ್ಲಿ ಹರೀಶ್‌ಗೌಡರನ್ನು ನಿಲ್ಲಿಸುತ್ತೇವೆ ಎಂದಿದ್ದರು. ಹುಣಸೂರಲ್ಲಿ ಶೆಟ್ಟರು ಗೆದ್ದಾಗಿದೆ ಬೇಡ ಎಂದು ನಾನೇ ಹೇಳಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಧಿಕಾರ ಹೋದಾಗ ಮಾತ್ರ ಹಿಂದುಳಿದವರು ನೆನಪಾಗುತ್ತಾರೆ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಮೈಮುಲ್ ನೂತನ ಅಧ್ಯಕ್ಷರಿಗೆ ಸಲಹೆ ಕೊಡುತ್ತಲೇ ಕುಮಾರಸ್ವಾಮಿಗೆ ಜಿಟಿ ದೇವೇಗೌಡ ಟಾಂಗ್

 

Published On - 6:30 pm, Tue, 24 August 21