ಬಿಜೆಪಿ ವಿರುದ್ಧ ತೀವ್ರತೆ ಕಳೆದುಕೊಂಡ ಜೆಡಿಎಸ್ ಹೋರಾಟ: ವೈಎಸ್​ವಿ ದತ್ತ ಅಸಮಾಧಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2022 | 7:50 PM

ಬಿಜೆಪಿ ವಿರುದ್ಧ ಜೆಡಿಎಸ್ ಹೆಚ್ಚು ತೀವ್ರವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷದ ಜಾತ್ಯತೀತ ನಿಲುವು ಶಿಥಿಲವಾಗುತ್ತಿದೆ ಎಂದು ದೇವೇಗೌಡರ ಆಪ್ತವಲಯದಲ್ಲಿರುವ ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತ ಟೀಕಿಸಿದರು.

ಬಿಜೆಪಿ ವಿರುದ್ಧ ತೀವ್ರತೆ ಕಳೆದುಕೊಂಡ ಜೆಡಿಎಸ್ ಹೋರಾಟ: ವೈಎಸ್​ವಿ ದತ್ತ ಅಸಮಾಧಾನ
ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತ
Follow us on

ಬೆಂಗಳೂರು: ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ಜಾತ್ಯತೀತ ಜನತಾದಳದ (ಜೆಡಿಎಸ್) ಹೋರಾಟ ತೀವ್ರತೆ ಕಳೆದುಕೊಳ್ಳುತ್ತಿದೆ ಎಂದು ಜೆಡಿಎಸ್​ನ ಹಿರಿಯ ನಾಯಕ ವೈ.ಎಸ್​.ವಿ.ದತ್ತ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಜೆಡಿಎಸ್ ಹೆಚ್ಚು ತೀವ್ರವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷದ ಜಾತ್ಯತೀತ ನಿಲುವು ಶಿಥಿಲವಾಗುತ್ತಿದೆ. ಪಕ್ಷದ ಸಿದ್ಧಾಂತ ಯಾವ ಕಾರಣಕ್ಕೂ ಬದಲಾಗಬಾರದು. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ದೂರದಲ್ಲೇ ಇಡಬೇಕು. ಈ ಮೂಲಕ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕು. ಬಿಜೆಪಿ ವಿರುದ್ಧ ಜೆಡಿಎಸ್ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ. ಇದನ್ನು ನಾನು ಪಕ್ಷದ ವೇದಿಕೆಯಲ್ಲಿಯೂ ಚರ್ಚಿಸಿದ್ದೇನೆ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸ್ಪಷ್ಟ ನಿಲುವು ಇರಬೇಕು ಎಂದು ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯನ್ನು ಜೆಡಿಎಸ್ ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ ಎನ್ನುವ ಅಭಿಪ್ರಾಯ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಲ್ಲಿ ಇದೆ ಎಂದರು.

ಪಕ್ಷದ ನಿಲುವು ಒಂದೇ ರೀತಿಯಲ್ಲಿರಬೇಕು. ಅದು ಪದೇಪದೆ ಬದಲಾಗಬಾರದು. ಪಕ್ಷದ ನಿಲುವುಗಳಲ್ಲಿ ನಿರಂತರತೆ ಇರಬೇಕು. ನಮ್ಮ ನಿಲುವು ಸದಾ ಸಾಮಾಜಿಕ ನ್ಯಾಯದ ಪರವಾಗಿಯೇ ಇರಬೇಕು. ಹೀಗೆ ಇರುತ್ತದೆ ಎನ್ನುವ ಕಾರಣಕ್ಕೆ ನಾನು ಜೆಡಿಎಸ್​ನಲ್ಲಿ ಇಷ್ಟು ದೀರ್ಘ ಕಾಲ ಇದ್ದೇನೆ. ಆದರೆ ಇತ್ತೀಚೆಗೆ ಈ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಮನೋಭಾವ ಮತದಾರರಲ್ಲಿ ಮೂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರ ವಿಚಾರ ಇಂದಿಗೂ ಸ್ಪಷ್ಟವಾಗಿಯೇ ಇದೆ. ಅವರ ನಿಲುವುಗಳ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಜಾತ್ಯತೀತರಾಗಿಯೇ ಎಲ್ಲ ಕಾಲದಲ್ಲಿಯೂ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದರು. ಎಚ್.ಡಿ.ಕುಮಾರಸ್ವಾಮಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ 20 ವರ್ಷವಿದ್ದಾಗ ದೇವೇಗೌಡರ ಅನುಯಾಯಿಯಾದೆ. ಈಗ ನನಗೆ 69 ವರ್ಷ ವಯಸ್ಸು. ಇಂದಿಗೂ ನಾನು ದೇವೇಗೌಡರ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದೇನೆ. ಅವರು ಏನು ಎಂಬುದು ನನಗೆ ಗೊತ್ತು ಎಂದರು.

ಬೆಳೆ ಖರೀದಿ ವಿಚಾರದಲ್ಲಿ ಸರ್ಕಾರದ ನಿಲುವನ್ನು ಅವರು ಉಗ್ರವಾಗಿ ಖಂಡಿಸಿದರು. ಕರ್ನಾಟಕ ಸರ್ಕಾರವು ಯಾವುದೇ ಮುನ್ಸೂಚನೆ ನೀಡದೆ ರಾಜ್ಯದ ಒಟ್ಟು ರಾಗಿ ಖರೀದಿ ಪ್ರಮಾಣ ಕಡಿಮೆ ಮಾಡಿದೆ. ಸಣ್ಣ ರೈತರಿಂದ ಕೇವಲ 20 ಕ್ವಿಂಟಲ್ ರಾಗಿ ಖರೀದಿ ಮಾಡುವುದಾಗಿ ಹೇಳುತ್ತಿದೆ. ಇದು ಸರಿಯಲ್ಲ ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ-ದತ್ತ ಭೇಟಿ

ಕಡೂರು ಕ್ಷೇತ್ರದ ರೈತರೊಂದಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದತ್ತಾ ಅವರನ್ನು ಮುಂಜಾನೆ ಭೇಟಿ ಮಾಡಿ ರಾಗಿ ಬೆಳೆಗಾರರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ವಿನಂತಿಸಿದರು. ದತ್ತ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳುವಂತೆ ಕಡೂರಿನಿಂದ ಬಂದಿದ್ದ ದತ್ತ ಬೆಂಬಲಿಗರು ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರನ್ನು ಕೋರಿದರು. ಸಿದ್ದರಾಮಯ್ಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇದನ್ನೂ ಓದಿ: ಅಲಿಂಗ ಚಳುವಳಿ ಘೋಷಿಸಿದ ಸಿಎಂ ಇಬ್ರಾಹಿಂ; ಜೆಡಿಎಸ್ ಸೇರುವ ಬಗ್ಗೆಯೂ ಮಾಹಿತಿ ನೀಡಿದ ನಾಯಕ

ಇದನ್ನೂ ಓದಿ: ಶಿಕ್ಷಣಕ್ಕೆ ಕೊಡೋಕೆ ದುಡ್ಡಿಲ್ಲ, ಸರ್ಕಾರ ಪಾಪರ್ ಆಗಿದೆ ಅಂತ ಹೇಳಿಬಿಡ್ಲಿ: ಜೆಡಿಎಸ್ ನಾಯಕ ರೇವಣ್ಣ ಸವಾಲು

Published On - 7:49 pm, Mon, 7 February 22