Rajya Sabha Election: ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಖಚಿತ

| Updated By: ಗಣಪತಿ ಶರ್ಮ

Updated on: Feb 26, 2024 | 2:53 PM

ರಾಜ್ಯಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದಂತೆಯೇ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ ಅವರ ಮತ ಕಾಂಗ್ರೆಸ್ ಅಭ್ಯರ್ಥಿಯ ಪಾಲಾಗುವುದು ಬಹುತೇಕ ಖಚಿತಗೊಂಡಿದೆ. ಸೋಮವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ರೆಡ್ಡಿ ಅವರು ಕಾಂಗ್ರೆಸ್ ಪರ ವಾಲಿರುವುದು ಸ್ಪಷ್ಟವಾಗಿದೆ.

Rajya Sabha Election: ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಖಚಿತ
ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಖಚಿತ
Follow us on

ಬೆಂಗಳೂರು, ಫೆಬ್ರವರಿ 26: ರಾಜ್ಯಸಭೆ ಚುನಾವಣೆಗೆ (Rajya Sabha Election) ಕ್ಷಣಗಣನೆ ಆರಂಭವಾಗಿದ್ದು ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದೇ ವೇಳೆ, ಜನಾರ್ದನ ರೆಡ್ಡಿ (G Janardhana Reddy) ನೇತೃತ್ವದ ಕರ್ನಾಟಕ ರಾಜ್ಯ ಪ್ರಗತಿಪಕ್ಷದ (KRPP) ಮತ ಕಾಂಗ್ರೆಸ್ (Congress) ಅಭ್ಯರ್ಥಿಯ ಪಾಲಾಗುವುದು ಬಹುತೇಕ ಖಚಿತವಾಗಿದೆ. ಸೋಮವಾರ ನಡೆದ ಕೆಲವು ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡಿವೆ. ಕರ್ನಾಟಕ ರಾಜ್ಯ ಪ್ರಗತಿಪಕ್ಷದ ಚುನಾವಣಾ ಏಜೆಂಟ್ ಆಗಿ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಯೋಗೇಂದ್ರ ಅವರನ್ನು ನೇಮಕ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಯೋಗೇಂದ್ರ ಅವರನ್ನು ಚುನಾವಣಾ ಏಜೆಂಟ್ ಆಗಿ ನೇಮಕ ಮಾಡಿರುವ ನೇಮಕಾತಿ ಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ತಂಗಡಗಿ ಉಪಸ್ಥಿತರಿದ್ದರು. ನೇಮಕಾತಿ ಪತ್ರಕ್ಕೆ ಕರ್ನಾಟಕ ರಾಜ್ಯ ಪ್ರಗತಿಪಕ್ಷದ ಮುಖ್ಯಸ್ಥ ಜನಾರ್ದನ ರೆಡ್ಡಿ ಸಹಿ ಮಾಡಿದ್ದಾರೆ. ರಾಜ್ಯಸಭೆ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ನಡೆದಿರುವ ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮೃತಪಟ್ಟಿರುವ ಕಾರಣ ಪಕ್ಷಕ್ಕೆ ಒಂದು ಮತ ಕಡಿಮೆಯಾಗುವ ಆತಂಕ ಎದುರಾಗಿದೆ. ಮೊದಲೇ ಅಡ್ಡ ಮತದಾನದ ಭೀತಿಯಲ್ಲಿದ್ದ ಪಕ್ಷಕ್ಕೆ ವೆಂಕಟಪ್ಪ ನಾಯಕ ನಿಧನ ಮತ್ತೊಂದು ಆಘಾತ ನೀಡಿತ್ತು.. ಇದರ ಬೆನ್ನಲ್ಲೇ ಪಕ್ಷದ ಟ್ರಬಲ್ ಶೂಟರ್ ಎಂದೇ ಕರೆಸಿಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಂದು ದಾಳ ಉರುಳಿಸಿದ್ದಾರೆ. ಇದರ ಫಲವಾಗಿಯೇ ಕರ್ನಾಟಕ ರಾಜ್ಯ ಪ್ರಗತಿಪಕ್ಷದ ಮತ ಕಾಂಗ್ರೆಸ್ ಅಭ್ಯರ್ಥಿಯ ಪಾಲಾಗುವುದು ಬಹುತೇಕ ಖಚಿತಗೊಂಡಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಭೀತಿ, ಶಾಸಕರ ಹಿಡಿದಿಡಲು ಕಾಂಗ್ರೆಸ್ ಕಸರತ್ತು

ವಿಧಾನಸಭಾ ಕಲಾಪ ಮುಗಿಯುತ್ತಿದ್ದಂತೆ ಪಕ್ಷದ ಶಾಸಕರನ್ನು ಮಾನ್ಯತಾ ಟೆರ್ಕ್‌ಪಾರ್ಕ್‌ನಲ್ಲಿರೋ ಹಿಲ್ಟನ್ ಹೋಟೆಲ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಮಧ್ಯಾಹ್ನ 3 ಗಂಟೆಗೆ ಹೋಟೆಲ್‌ನಲ್ಲೇ ಶಾಸಕಾಂಗ ಸಭೆ ನಡೆಯಲಿದ್ದು ಈ ವೇಳೆ ಎಲ್ಲಾ ಶಾಸಕರು ಹಾಜರಿರಬೇಕೆಂದು ಸೂಚನೆ ನೀಡಲಾಗಿದೆ. ನಾಳೆ ಬೆಳಗ್ಗೆ ಹೋಟೆಲ್‌ನಿಂದ ಸೀದಾ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡಲು ಸೂಚಿಸಲಾಗಿದೆ.

ಜನಾರ್ದನ ರೆಡ್ಡಿ ಭೇಟಿಯಾಗಿರುವ ಬಗ್ಗೆ ಸಿಎಂ ಕಚೇರಿ ಟ್ವೀಟ್

ಮತದಾನಕ್ಕೆ ವಿಧಾನಸಭೆಯಲ್ಲಿ ಸಿದ್ಧತೆ ಪೂರ್ಣ

ರಾಜ್ಯಸಭೆ ಚುನಾವಣೆಯ ಮತದಾನಕ್ಕೆ ವಿಧಾನಸೌಧದಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ನಾಲ್ಕು ಸ್ಥಾನಗಳಿಗೆ ಘೋಷಣೆಯಾಗಿರುವ ಚುನಾವಣೆಗೆ 223 ಶಾಸಕರು ನಾಳೆ ಮತದಾನ ಮಾಡಲಿದ್ದಾರೆ. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ106 ರಲ್ಲಿ ಮತದಾನ ಮತ್ತು ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Mon, 26 February 24