ಗ್ಯಾರಂಟಿ ಯೋಜನೆಗಳಿಗೆ ಷರತ್ತು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ

|

Updated on: Jun 08, 2023 | 4:45 PM

ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಗ್ಯಾರಂಟಿ ಘೋಷಣೆ ಮಾಡುವಾಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ಪರಿಜ್ಞಾನ ಇರಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಷರತ್ತು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Follow us on

ಬೆಂಗಳೂರು: ಒಂದು ಗ್ಯಾರಂಟಿಯಲ್ಲಿ ಮಾತ್ರವಲ್ಲ, ಬದಲಾಗಿ 5 ಗ್ಯಾರಂಟಿಗಳಲ್ಲೂ ಗೊಂದಲಗಳಿವೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆ ಮಾಡುವಾಗ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರಿಗೆ ಪರಿಜ್ಞಾನ ಇರಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಗ್ಯಾರಂಟಿಗೆ ಹಲವಾರು ಷರತ್ತು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಇದು ಒಂದು ಕಾರ್ಯಕ್ರಮದ ಗೊಂದಲ ಅಲ್ಲ ಐದು ಕಾರ್ಯಕ್ರಮ ಗೊಂದಲವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮಾಷೆಯಾಗಿ ಮಾತಾಡುತ್ತಿದ್ದಾರೆ. ಇಂಧನ ಇಲಾಖೆ ಸಚಿವರು ಜಾರ್ಜ್ ಅವರಿಗೆ ಅರ್ಥ ಆಗಿಲ್ಲ ಎಂದು ಅನಿಸುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನಿಸುತ್ತಿದೆ ಎಂದರು.

ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಸಬೂಬು ಏನು ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, 15 ಲಕ್ಷ ಬಿಜೆಪಿ ಯವರು ಕೊಟ್ಟಿದ್ದಾರಾ ಅಂತ ಕೇಳುತ್ತಾ ಇದ್ದಾರೆ. ಅವರು ಕೊಟ್ಟಿಲ್ಲ ಅಂತ ನಾನು ಕೊಡಲ್ಲ ಅನ್ನೋದು ಎಷ್ಟು ಸರಿ? ಘೋಷಣೆ ಮಾಡುವಾಗ ಪರಿಜ್ಞಾನ ಇರಲಿಲ್ವಾ ಹಾಗಾದರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿಯ ಪ್ರತಿಷ್ಠಿತ, ಸುಸಜ್ಜಿತ ಹೆಚ್‌ಡಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಜನರ ಗೋಳು ಕೇಳೋರೇ ಇಲ್ಲ!

ಅಂದು ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದರು. ಆಗ ಇಂಧನ ಇಲಾಖೆಯಲ್ಲಿ ಎಷ್ಟು ರೂಪಾಯ ಖರ್ಚು ಮಾಡಿ ಸೋಲಾರ್ ಹಾಕಿಸಿದರು, ಅದರಲ್ಲಿ ಅಕ್ರಮ ಮಾಡಿದರು ಅಂತ ಮಾಹಿತಿ ಬಂತು. ದೂರು ಬಂದ ಬೆನ್ನಲ್ಲೇ ಅಂದು ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡಿದೆ. ಸದನ ಸಮಿತಿಗೂ ನಾನು ಹೇಳಿದ್ದೆ. ಆದರೆ ಅಲ್ಲಿಗೆ ತೋಳವನ್ನೇ ತಂದರೆ ಹೇಗೆ? ಕುರಿ ಕಾಯೋಕೆ ತೋಳ ತಂದ ಹಾಗೆ ಆಗಿದೆ ಅಷ್ಟೆ. ಕೋಟ್ಯಾಂತರ ಖರ್ಚು ಮಾಡಿ ಖರೀದಿ ಮಾಡಿ ಅಗ್ರಿಮೆಂಟ್ ಮಾಡಿದ್ದರಲ್ಲ ತಾಕತ್ ಇದ್ದರೆ ಅದನ್ನು ರದ್ದು ಮಾಡಿ ಎಂದು ಸವಾಲೆಸೆದರು.

ಸಚಿವ ಹೆಚ್.ಕೆ.ಪಾಟೀಲ್ 2013-18 ರಲ್ಲಿ ಇದ್ದವರು. ಅಕ್ರಮ ಗಣಿಗಾರಿಗೆ ಕುರಿತಂತೆ ಸದನ ಸಮಿತಿ ಮಾಡಿದ್ದರು. ಹೆಚ್ ಕೆ ಪಾಟೀಲ್ ಅವರು ಒಂದು ವರದಿ ಕೊಟ್ಟಿದ್ದಾರೆ. ಬಿಜೆಪಿಗೆ 40 ಪರ್ಸೆಂಟ್ ಅಂತರಲಾ ಇವರು (ಕಾಂಗ್ರೆಸ್), ಅಂದು ಕೊಟ್ಟ ವರದಿ ಏನಾಯ್ತು ಹಾಗಾದರೆ? 35 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿದೆ. 1ಲಕ್ಷ 43 ಸಾವಿರ ಕೋಟಿ ಮೌಲ್ಯವಾಗಿದೆ. ಅಂದು ಹೆಚ್ ಕೆ ಪಾಟೀಲ್ ಕೊಟ್ಟ ವರದಿಯಲ್ಲಿ ಈ ವಿಚಾರ ಇದೆ. ಅಂದು ತಿಂದ್ರಲಾ ಅದನ್ನ ಹೊರಗೆ ತೆಗೆಯಿರಿ. ಅದನ್ನ ಹೊರ ತೆಗೆದರೆ ಸಾಕು ಅದರಲ್ಲೇ ಉಚಿಯ ಯೋಜನೆಗಳಿಗೆ ಹಣ ಕೊಡಬಹುದು ಎಂದರು.

ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ: ಕುಮಾರಸ್ವಾಮಿ

ವರ್ಗಾವಣೆಗೆ ದರ ನಿಗದಿ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಈಗ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ. ಪೇ ಸಿಎಂ ಈ ಸರ್ಕಾರದಲ್ಲಿ ಪ್ರಾರಂಭ ಮಾಡಬೇಕಾಗಿದೆ. ಇವರೆಲ್ಲಾ ಬಿಜೆಪಿಗೆ ಪೇ ಸಿಎಂ ಅಂದಿದ್ದರಲ್ಲ, ಅಧಿಕಾರಿಗಳಲ್ಲೇ ರೇಟ್ ಫಿಕ್ಸ್ ಆಗಿದೆ ಅಂತ ಮಾತಾಡುತ್ತಾ ಇದ್ದರಲ್ವಾ? ಈಗ ಇವರು ಏನು ಮಾಡುತ್ತಾ ಇದ್ದಾರೆ? ಇದನ್ನು ಫ್ರೂವ್ ಮಾಡಿ ಅಂದರೆ ಹೇಗೆ ಮಾಡುವುದು? ಸರ್ಕಾರ ಇದೆಲ್ವ, ಪಡೆದ ಪರ್ಸೆಂಟೇಜ್ ಆರೋಪವನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: HD Kumaraswamy; ಚಲುವರಾಯಸ್ವಾಮಿ ಹೇಳಿದ್ದು ಕೇಳಿಸಿಕೊಂಡಿದ್ದೇನೆ, ಕಾಂಗ್ರೆಸ್ ಪಕ್ಷದ ನಿಜಬಣ್ಣ ಬಯಲಾಗುತ್ತಿದೆ: ಹೆಚ್ ಡಿ ಕುಮಾರಸ್ವಾಮಿ, ಶಾಸಕ

ಸೋಷಿಯಲ್ ಮೀಡಿಯಾದಲ್ಲಿ ದೋಸೆ ವಿಚಾರ ಚರ್ಚೆ

ಸರ್ಕಾರ ಪ್ರಾರಂಭಿಕ ಹಂತದಲ್ಲಿ ಯಾವ ರೀತಿ ಬಿತ್ತನೆ ಇದೆ ಅಂತ ಗೊತ್ತಾಗುತ್ತಿದೆ, ಗ್ಯಾರಂಟಿಗಳಿಗೆ ಷರತ್ತು ವಿಧಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ದೋಸೆ ವಿಚಾರ ಚರ್ಚೆ ಆಗುತ್ತಿದೆ. ದೋಸೆ ಫ್ರೀ ಅಂತ ಬೋರ್ಡ್ ಹಾಕಿಕೊಂಡು ಚಟ್ನಿಗೆ ಹಣ ಕೇಳುವ ಕಥೆ ಇವರದ್ದು. ಸ್ವಚ್ಚ ಸರ್ಕಾರ ಇಲ್ಲಿ ಸಿಗುವುದಿಲ್ಲ. ಜನ ನಂಬಿಕೆ ಇಟ್ಟು ಮತ ಹಾಕಿದ್ದಾರೆ. ಇವರು ಮೂರು ನಾಮ ಎಳೀತಾ ಇದಾರೆ ಅಷ್ಟೆ. ನಾನು ಸುಮ್ನೆ ಜನರ ಮುಂದೆ ಹೋಗಲ್ಲ. ಜನರಿಗೆ ಏನು ಮೋಸ ಮಾಡಿದ್ದಾರೆ ಅಂತ ಇಟ್ಟುಕೊಂಡು ಹೋಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಪಠ್ಯ ಪುಸ್ತಕ ಬಗ್ಗೆ ಈಗ ಮಾತಾಡುತ್ತಿದ್ದಾರೆ. ಕೋಟ್ಯಾಂತರ ಹಣ ಖರ್ಚು ಮಾಡು ಪ್ರಿಂಟ್ ಮಾಡಿದ್ದಾರೆ. ಯಾರ ದುಡ್ಡು ಅದು ಹಾಗಾದರೆ? ಮಕ್ಕಳಿಗೆ ಪರಿಶುದ್ಧ ವಾತಾವರಣ ಸೃಷ್ಟಿ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಜ್ಞಾನ ತುಂಬಬೇಕು. ದ್ವಂದ್ವ ಹೇಳಿಕೆ ನೀಡೋ ಮೂಲಕ ಅವರ ಮೇಲೆ ಪರಿಣಾಮ ಬೀಳುವಂತೆ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ