ಮೋದಿ ಹೆಸರು ಹೇಳೋದು ಬಿಟ್ಟು ನಳಿನ್ ಕುಮಾರ್ ಕಟೀಲ್ ಏನು ಅಭಿವೃದ್ಧಿ ಮಾಡಿದ್ದಾರೆ: ಮಧು ಬಂಗಾರಪ್ಪ ವಾಗ್ದಾಳಿ

ನಳಿನ್ ಕಟೀಲ್ ಅವರು ಚರಂಡಿ, ಕಾಲುವೆ ನೋಡಬೇಡಿ, ಹೊಡಿಬಡಿ ಅಂದರು. ಆವತ್ತು ನನ್ನ ರಾಜೀನಾಮೆ ಕೇಳಿದ್ದರು. ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಲಿ. ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಕಾರಣ ಎಂದು ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಮೋದಿ ಹೆಸರು ಹೇಳೋದು ಬಿಟ್ಟು ನಳಿನ್ ಕುಮಾರ್ ಕಟೀಲ್ ಏನು ಅಭಿವೃದ್ಧಿ ಮಾಡಿದ್ದಾರೆ: ಮಧು ಬಂಗಾರಪ್ಪ ವಾಗ್ದಾಳಿ
ಮಧು ಬಂಗಾರಪ್ಪ
Updated By: Ganapathi Sharma

Updated on: Jan 13, 2024 | 1:04 PM

ಮಂಗಳೂರು, ಜನವರಿ 13: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಓಡಾಡಿದ್ದು ಬಿಟ್ಟರೆ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರಶ್ನಿಸಿದರು. ಮಂಗಳೂರಿಗೆ ಭೇಟಿ ನೀಡಿ ಮಾತನಾಡಿದ ಅವರು, ನಳಿನ್ ಕಟೀಲ್ ಹಿಂದುತ್ವ ಮತ್ತು ಭಾವನಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ತೋರಿಸಿ, ಮೋದಿ ಹೆಸರು ಬಿಟ್ಟು ಏನು ಮಾಡಿದ್ದಾರೆ? ಅವರು ಪ್ರಗತಿ ತೋರಿಸಿ ಅಧಿಕಾರಕ್ಕೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಳಿನ್ ಕಟೀಲ್ ಅವರು ಚರಂಡಿ, ಕಾಲುವೆ ನೋಡಬೇಡಿ, ಹೊಡಿಬಡಿ ಅಂದರು. ಆವತ್ತು ನನ್ನ ರಾಜೀನಾಮೆ ಕೇಳಿದ್ದರು. ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಲಿ. ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಕಾರಣ. ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ನಳಿನ್ ಕಟೀಲ್ ಅಧಿಕಾರ ನೋಡಿದ್ದು. ಯತ್ನಾಳ್ ಹೇಳಿದ್ರಲ್ಲ ಸಾವಲ್ಲಿ ರಾಜಕೀಯ ಅಂತ, ಬಂಗಾರಪ್ಪ ಹೆಸರಿನಲ್ಲಿ ನಳಿನ್ ಇಲ್ಲಿ ಸಂಸದರಾಗಿದ್ದು. ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಧಿಕ್ಕಾರ ಕೂಗಿದ್ದು ಕಾಂಗ್ರೆಸ್ ನವರಲ್ಲ. ಬಿಜೆಪಿ, ಭಜರಂಗದಳ ಮತ್ತು ವಿಎಚ್​​​ಪಿ ಕಾರ್ಯಕರ್ತರೇ ಅವರ ಕಾರು ಅಲುಗಾಡಿಸಿದ್ದು. ಬಿಜೆಪಿ ನಳಿನ್ ಕಟೀಲ್​ಗೆ ಟಿಕೆಟ್ ಕೊಡಬೇಕು, ಆಗ ಇಲ್ಲಿಗೆ ನಾನೇ ಬರ್ತೇನೆ. ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ನಾನು ಇಲ್ಲಿ ಮಾಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್​​ಗೆ ಇಲ್ಲಿ ಬಲ ಇಲ್ಲದಿದ್ರೂ ನಾವು ಮತ್ತೆ ವಿಶ್ವಾಸ ಪಡೆಯಲು ಕರಾವಳಿಗೆ ಬರ್ತಾ ಇದ್ದೇವೆ. ಪಕ್ಷದ ಸಂಘಟನೆಯನ್ನು ಈ ಭಾಗದಲ್ಲಿ ಮಾಡೋದು ನಮ್ಮ ಹಕ್ಕು. ಇಲ್ಲಿ ಹಿಂದುಳಿದ ವರ್ಗದವರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಬಂಡವಾಳ ಹೂಡಿಕೆಯಾಗಿ ಅಭಿವೃದ್ಧಿ ಮೂಲಕ ಜನ ಸುಖವಾಗಿ ಇರಬೇಕು. ಇದನ್ನ ವಾಪಾಸ್ ತರಲು ನಾನು ಇಲ್ಲಿ ಕೈ ಜೋಡಿಸ್ತೇನೆ. ನಳಿನ್ ಕಟೀಲ್ ಇಲ್ಲಿ ಸೋಲಬೇಕು, ನಾನು ಕೂಡ ಅದರ ಪಾತ್ರಧಾರ ಆಗ್ತೀನಿ. ನಾನು ವೈಯಕ್ತಿಕವಾಗಿ ಹೋಗಲ್ಲ, ಆದರೆ ಅವರು ನನ್ನ ರಾಜೀನಾಮೆ ಕೇಳಿದ್ದರು ಎಂದು ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಯತೀಂದ್ರ ಎದುರಾಳಿಯಾದರೆ ಒಳ್ಳೆಯದು: ಪ್ರತಾಪ್ ಸಿಂಹ

ಜನವರಿ 21ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದ ಬಗ್ಗೆ ನಾಯಕರ ಜೊತೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಶಿವಮೊಗ್ಗದಲ್ಲಿ ಶುಕ್ರವಾರ ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದೇವೆ. ಬಿಜೆಪಿಯವರು ನಾವು ಗ್ಯಾರಂಟಿ ನೀಡಲ್ಲ ಅಂತಾ ಟೀಕೆ ಮಾಡಿದ್ದರು. ಆದರೆ, ನಾವು ಕೊಟ್ಟ ಭರವಸೆಯಂತೆ ಗ್ಯಾರಂಟಿಗಳನ್ನು ನೀಡಿದ್ದೇವೆ. ನಮ್ಮನ್ನು ಟೀಕಿಸಿದವರ ಹಣೆಬಹಕ್ಕೆ ಇಂಥ ಯೋಜನೆ ನೀಡಲಾಗಿಲ್ಲ ಎಂದು ಮಧು ಬಂಗಾರಪ್ಪ ಟೀಕಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ