ಜೆಡಿಎಸ್​-ಬಿಜೆಪಿ ಮೈತ್ರಿ ಮಾತುಕತೆ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ, ಮಂಡ್ಯದ ಬಗ್ಗೆ ಮಹತ್ವದ ಚರ್ಚೆ

| Updated By: ರಮೇಶ್ ಬಿ. ಜವಳಗೇರಾ

Updated on: Sep 19, 2023 | 1:38 PM

ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳು ಮಾತುಕತೆ ನಡೆದಿರುವ ಬೆನ್ನಲ್ಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಂಡ್ಯದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜೆಡಿಎಸ್​-ಬಿಜೆಪಿ ಮೈತ್ರಿ ಮಾತುಕತೆ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ, ಮಂಡ್ಯದ ಬಗ್ಗೆ ಮಹತ್ವದ ಚರ್ಚೆ
Follow us on

ನವದೆಹಲಿ/ಮಂಡ್ಯ, (ಸೆಪ್ಟೆಂಬರ್ 19): 2019ರ ಲೋಕಸಭಾ ಚುನಾವಣೆ (Loksabha Elections 2019) ವೇಳೆ ಮಂಡ್ಯ(Mandya) (Mandya) ಕ್ಷೇತ್ರ ಇಡೀ ದೇಶದಲ್ಲಿಯೇ ಸದ್ದು ಮಾಡಿತ್ತು. ಈಗ ಮತ್ತೆ ಆ ಎಲ್ಲಾ ಲಕ್ಷಣಗಳು ರಾಜ್ಯ ರಾಜಕಾರಣದಲ್ಲಿ (Karnataka Politics) ಕಾಣಿಸುತ್ತಿವೆ. ಹೌದು…ಲೋಕಸಭಾ ಚುನಾವಣೆಗೆ (Loksabha Elections 2024) ಜೆಡಿಎಸ್-ಬಿಜೆಪಿ ಮೈತ್ರಿ (BJP-JDS Alliance) ಬಹುತೇಕ ಖಚಿತವಾಗಿದ್ದು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ ತನ್ನ ತೆಕ್ಕೆಗೆ ನೀಡುವಂತೆ ಬಿಜೆಪಿಗೆ ಕೇಳಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಮೈತ್ರಿ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನು ಇದರ ಮಧ್ಯೆ  ಮಂಡ್ಯ ಗೌಡ್ತಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಸಮಸ್ಯೆ ಜೊತೆ ಜಿಲ್ಲಾ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು…ಇಂದು (ಸೆಪ್ಟೆಂಬರ್ 19) ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್ ಅವರು 73ನೇ ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ನಡೆದ G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೇ ಇದೆ ಸಮಯದಲ್ಲಿ ಮಂಡ್ಯ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ ದೋಸ್ತಿ: ಸುಮಲತಾ ಅಂಬರೀಶ್​ ಅತಂತ್ರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು

ಜೆಡಿಎಸ್​ ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದರಿಂದ ಮಂಡ್ಯ ಕೈ ಟಿಕೆಟ್ ಸಿಗದ ಹಿನ್ನೆಲೆ ಸುಮಲತಾ ಅಂಬರೀಶ್ ಸೆರಗೊಡ್ಡಿ ಸ್ವಾಭಿಮಾನದ ಹೆಸರಲ್ಲಿ ಗೆಲುವು ಕಂಡಿದ್ದರು. ಬಳಿಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದರು. ನಂತರ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿ ವೇದಿಕೆಯನ್ನು ಸಹ ಹಂಚಿಕೊಂಡಿದ್ದರು.

ಮೋದಿ ಭೇಟಿ ಬಗ್ಗೆ ಸುಮಲತಾ ಹೇಳಿದ್ದೇನು?

ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ 73ನೇ ಜನ್ಮ ದಿನದ ಶುಭಾಶಯಗಳನ್ನು ಹೇಳಿದೆ. ಮತ್ತು ಇತ್ತೀಚೆಗಷ್ಟೇ ನಡೆದ G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸಿದೆ. ಈ ಸಂದರ್ಭದಲ್ಲಿ ನನ್ನ ಕ್ಷೇತ್ರ ಮಂಡ್ಯ ಮತ್ತು ಕರ್ನಾಟಕದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅದಕ್ಕೆ ಸಂಬಂಧಿಸಿದ ಅನೇಕ ಸಲಹೆ ಸಹಕಾರವನ್ನು ಮಾನ್ಯ ಪ್ರಧಾನ ಮಂತ್ರಿಗಳು ನೀಡಿದರು.

ಸಾಕಷ್ಟು ಒತ್ತಡ ಮತ್ತು ಬಿಡುವಿಲ್ಲದ ಕೆಲಸಗಳ ನಡುವೆಯೂ ಕಡಿಮೆ ಸಮಯದಲ್ಲಿ ನನ್ನ ಭೇಟಿಗೆ ಅವಕಾಶ ನೀಡಿದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ದೇಶದ ಬಗೆಗಿನ ದೂರದೃಷ್ಟಿ ಯಾವಾಗಲೂ ನಮಗೆ ಸ್ಫೂರ್ತಿ ಹಾಗೂ ಮಾದರಿ ಎಂದು ಹೇಳಿಕೊಂಡಿದ್ದಾರೆ.

ಸದ್ಯ 2024ರ ಚುನಾವಣೆಗೆ ಸುಮಲತಾ ಅಂಬರೀಶ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದ್ರೆ ಈ ಬಾರಿ ಜೆಡಿಎಸ್​​ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಅಲ್ಲದೇ ಮಂಡ್ಯ ಕ್ಷೇತ್ರವನ್ನು ತಮಗೆ ನೀಡಬೇಕೆಂದು ದಳಪತಿಗಳು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್​ಗೆ ಟೆನ್ಷನ್ ಶುರುವಾಗಿದೆ. ಇದರ ಬೆನ್ನಲ್ಲೇ ಇದೀಗ ಮೋದಿ ಅವರನ್ನು ಭೇಟಿ ಮಾಡಿ ಮಂಡ್ಯದ ಬಗ್ಗೆ ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Tue, 19 September 23