ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು: ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ದಲಿತರ ಕ್ಷಮೆ ಕೂಡ ಕೇಳಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡ್ತೇವೆ. ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟ ಮಾಡುತ್ತೇವೆ ಎಂದು ಎನ್.ರವಿಕುಮಾರ್ ತಿಳಿಸಿದ್ದಾರೆ.

ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು: ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಸಿದ್ದರಾಮಯ್ಯ ಹಾಗೂ ಛಲವಾದಿ ನಾರಾಯಣಸ್ವಾಮಿ
Edited By:

Updated on: Nov 06, 2021 | 2:10 PM

ಬೆಂಗಳೂರು: ದಲಿತರು ಹೊಟ್ಟೆಪಾಡಿಗೋಸ್ಕರ ಬಿಜೆಪಿ ಸೇರಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇಂದು (ನವೆಂಬರ್ 6) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಸತ್ಯ ಹೇಳ್ತಾರೆ. ಅವರ ಮನಸಿನಲ್ಲಿರುವುದನ್ನ ಬೇರೆಯವರ ಮೇಲೆ ಹೇಳ್ತಾರೆ. ಕಾಂಗ್ರೆಸ್ ಪಕ್ಷ ಹೇಗೆ ಮುಸ್ಲಿಮರನ್ನ ಬಳಸಿಕೊಳ್ಳುತ್ತಿದೆ. ಹೊಟ್ಟೆಪಾಡಿಗಾಗಿ ಹೇಗೆ ಬಳಸಿಕೊಳ್ತಿದೆ ಎಂದು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ದಲಿತರನ್ನಿಟ್ಟುಕೊಂಡು ರಾಜಕೀಯ ಮಾಡೋದು ಕಾಂಗ್ರೆಸ್. ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಬಾಬು ಜಗಜೀವನ ರಾಮ್​ರನ್ನ ಪ್ರಧಾನಿ ಮಾಡದೆ ದಲಿತರನ್ನ ಹೇಗೆ ಮತಬ್ಯಾಂಕ್ ಮಾಡಿಕೊಳ್ಳಲಾಯ್ತು ಎಂದು ಗೊತ್ತಿದೆ ಎಂದು ರವಿಕುಮಾರ್ ಹೇಳಿದ್ದಾರೆ.

ಸಾಮಾನ್ಯ ಅವಶ್ಯಕತೆ ವಿಷಯದಲ್ಲೂ ದಲಿತರಿಗೆ ಅನ್ಯಾಯ ಆಗಿದೆ. ಅಕ್ಕಿ, ಕುಡಿಯುವ ನೀರು, ರೇಷನ್ ಕಾರ್ಡ್, ವೇತನ ವಿಚಾರದಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ದಲಿತರ ಬಗೆಗಿನ ಹೇಳಿಕೆ ಹಿಂಪಡೆಯಬೇಕು. ದಲಿತರ ಕ್ಷಮೆ ಕೂಡ ಕೇಳಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡ್ತೇವೆ. ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟ ಮಾಡುತ್ತೇವೆ ಎಂದು ಎನ್.ರವಿಕುಮಾರ್ ತಿಳಿಸಿದ್ದಾರೆ.

ಡಾ.ಜಿ.ಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಪರಮೇಶ್ವರ್‌ರನ್ನು ಸೋಲಿಸಲಾಯ್ತು. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪರನ್ನು ಮುಗಿಸಿದ್ದು ಯಾರು? ವಿ.ಶ್ರೀನಿವಾಸ ಪ್ರಸಾದ್‌ರನ್ನು ಮುಗಿಸಿದ್ದು ಯಾರೆಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಹೋರಾಟ ಮಾಡ್ತೇವೆ. 2013 ರಿಂದ 18 ರ ಅವಧಿಯಲ್ಲಿ ಅತಿ ಹೆಚ್ಚು ಮತಾಂತರವಾಗಿದೆ. ಮತಾಂತರವಾಗಿರುವ ದಾಖಲೆಗಳು ಕೂಡ ನಮ್ಮ ಬಳಿ ಇವೆ. ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಎನ್. ರವಿಕುಮಾರ್ ತಿಳಿಸಿದ್ದಾರೆ.

ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು: ಛಲವಾದಿ ನಾರಾಯಣಸ್ವಾಮಿ
ಸಿದ್ದರಾಮಯ್ಯ ಅಲ್ಲ ಅವರು ಸುಳ್ಳುರಾಮಯ್ಯ. 70 ವರ್ಷ ಕಾಂಗ್ರೆಸ್‌ನವರೇ ದೇಶವನ್ನು ಆಳಿದ್ದಾರೆ. ಆದ್ರೂ ದಲಿತರಿಗೆ ಹೊಟ್ಟೆ ಹಸಿವು ಇದೆ ಅಂತಾಯ್ತಲ್ಲ. ಕಾಂಗ್ರೆಸ್‌ ಪಕ್ಷವನ್ನು ಯಾರೂ ನಂಬಬೇಡಿ. ಅದು ಸುಡುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್‌ಗೆ ಹೋದರೆ ಆತ್ಮಹತ್ಯೆಗೆ ಸಮ ಎಂದು ಹೇಳಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಲಸೆ ಗಿರಾಕಿ ಅಲ್ವಾ? ಕಾಂಗ್ರೆಸ್ ಪಕ್ಷದ ಇತಿಹಾಸ ಸಿದ್ದರಾಮಯ್ಯಗೆ ಗೊತ್ತಿದ್ಯಾ? ಜೆಡಿಎಸ್‌ನಲ್ಲಿದ್ದವರು ಹೊಟ್ಟೆಪಾಡಿಗೆ ಕಾಂಗ್ರೆಸ್ ಸೇರಲಿಲ್ವಾ? ಅವರು ಬಂದಮೇಲೆ ದೊಡ್ಡ ದಲಿತ ನಾಯಕರು ಕಾಣೆಯಾದ್ರು. ದಲಿತ ಮುಖಂಡರ ತಲೆ ಮೇಲೆ ಕಾಲಿಟ್ಟು ಮುಗಿಸಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮನಸ್ಸಿನಲ್ಲಿ ದಲಿತ ವಿರೋಧಿ. ಬಾಯಲ್ಲಿ ಮಾತ್ರ ದಲಿತ ಪ್ರೇಮ ಇದೆ ಎಂದು ಬೆಂಗಳೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಆರೋಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಅತಿ ಹೆಚ್ಚು ಮತಾಂತರವಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ದಲಿತರು ಮತಾಂತರವಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಸೋನಿಯಾ ಗಾಂಧಿ ಮೆಚ್ಚಿಸುವುದಕ್ಕೆ ಈ ಕೆಲಸ ಮಾಡಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಜನ್ಮ ಕೊಟ್ಟವರನ್ನೇ ಸಾಯಿಸುವ ಸಂಸ್ಕೃತಿ ಸಿದ್ದರಾಮಯ್ಯರದ್ದು. ಚೇಳು ಮರಿಗಳಿಗೆ ಜನ್ಮ ಕೊಟ್ಟರೆ ಚೇಳೇ ಸತ್ತು ಹೋಗುತ್ತದೆ. ಯಾಕಂದ್ರೆ ಮರಿಗಳು ಚೇಳಿನ ಹೊಟ್ಟೆ ಸೀಳಿ ಹೊರಬರುತ್ತವೆ. ಅಂತಹ ಸಂಸ್ಕೃತಿ ವಿಪಕ್ಷ ನಾಯಕ ಸಿದ್ದರಾಮಯ್ಯರದ್ದು. ಹೆಸರು ನಮ್ಮದು, ಬಸಿರು ನಿಮ್ಮದಾ? 80,000 ಕೋಟಿ SCP, TSP ಹಣ ಬಿಡುಗಡೆಗಾಗಿ ಸಿದ್ದರಾಮಯ್ಯ ಲಂಚ ತಿಂದು ಹೊಟ್ಟೆ ತುಂಬಿಸಿಕೊಂಡಿಲ್ವಾ? ಸಿದ್ದರಾಮಯ್ಯ ಬಿಡುಗಡೆ ಮಾಡಿದ ದುಡ್ಡು ಯಾರಿಗೂ ಸಿಕ್ಕಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು. ರಾಜ್ಯ ಕಾಂಗ್ರೆಸ್‌ನಲ್ಲಿ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದರು. ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬ ಮಾತು ಸೂಕ್ತವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಈ ಮಾತು ಸೂಕ್ತವಾಗಿದೆ. ಡಾ.ಹೆಚ್.ಸಿ.ಮಹಾದೇವಪ್ಪ ಸಿದ್ದರಾಮಯ್ಯರ ಕಂಕಳ ಕೂಸು. ಆರ್.ಧ್ರುವನಾರಾಯಣ ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಸುದ್ದಿಗೋಷ್ಠಿ ಮಾಡಿದರೆ ಡಿ.ಕೆ.ಶಿವಕುಮಾರ್ ಬಯ್ಯುತ್ತಾರೆ. ಸುದ್ದಿಗೋಷ್ಠಿ ಮಾಡದಿದ್ದರೆ ಸಿದ್ದರಾಮಯ್ಯ ಬಯ್ಯುತ್ತಾರೆ. ದ್ವೇಷದ ರಾಜಕಾರಣ ಮಾಡೋದರಲ್ಲಿ ಅವರದ್ದು ಎತ್ತಿದ ಕೈ ಎಂದು ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಆ ರೀತಿ ಮಾತನಾಡಲು ಸಾಧ್ಯವೇ ಇಲ್ಲ: ದಲಿತ ವಿರೋಧಿ ಹೇಳಿಕೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಇದನ್ನೂ ಓದಿ: ನಾವು ಅಂಬೇಡ್ಕರ್​ರ ಸಂವಿಧಾನದ ಪರವಾಗಿ ಇರುವವರು: ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ತಿರುಗೇಟು

Published On - 2:08 pm, Sat, 6 November 21

Web contact

TV9 Kannada

Read More
Follow Us