ಕಾಂಗ್ರೆಸ್​​ ಬಣ ಬಡಿದಾಟಕ್ಕೆ ಸುರ್ಜೇವಾಲ ತೇಪೆ: ಮಾಧ್ಯಮಗಳ ಮೇಲೂ ಗೂಬೆ ಕೂರಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ

ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಬಣದ ನಡುವೆ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಇದೆಲ್ಲ ಬಿಜೆಪಿ ಅಪಪ್ರಚಾರ ಎಂದಿದ್ದಾರೆ. ಅಲ್ಲದೆ ಮಾಧ್ಯಮಗಳ ಮೇಲೂ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.

ಕಾಂಗ್ರೆಸ್​​ ಬಣ ಬಡಿದಾಟಕ್ಕೆ ಸುರ್ಜೇವಾಲ ತೇಪೆ: ಮಾಧ್ಯಮಗಳ ಮೇಲೂ ಗೂಬೆ ಕೂರಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ
ರಣದೀಪ್‌ ಸುರ್ಜೇವಾಲ

Updated on: Nov 21, 2025 | 4:50 PM

ಬೆಂಗಳೂರು, ನವೆಂಬರ್​ 21: ರಾಜ್ಯ ರಾಜಕೀಯದಲ್ಲಿ ನವೆಂಬರ್​ ಕ್ರಾಂತಿ ವಿಚಾರ ಭಾರಿ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಬಣದ ನಡುವೆ ರಾಜಕೀಯ ಯುದ್ಧ ತಾರಕಕ್ಕೇರಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್​​ನಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಗೆ ತೇಪೆ ಹಚ್ಚುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ವ್ಯರ್ಥ ಪ್ರಯತ್ನ ಮಾಡಿದ್ದಾರೆ.

ಸುರ್ಜೇವಾಲ ಹೇಳಿದ್ದೇನು?


ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಮಾಡಿರುವ ರಣದೀಪ್‌ ಸುರ್ಜೇವಾಲ, ಸೋಲು ಮತ್ತು ಬಣ ರಾಜಕಾರಣದಿಂದ ಕರ್ನಾಟಕ ಬಿಜೆಪಿ ಬಳಲುತ್ತಿದೆ. ಮಾಧ್ಯಮದ ಒಂದು ಭಾಗವು ರಾಜ್ಯ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಜೊತೆ ಚರ್ಚೆ ನಡೆಸಲಾಗಿದ್ದು, ಅಪಪ್ರಚಾರದ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ, ಸರ್ಕಾರದ ಭರವಸೆ ದುರ್ಬಲಗೊಳಿಸುವುದು ಇದರ ಉದ್ದೇಶವಾಗಿದೆ. ಕೆಲವು ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಅನಗತ್ಯ ಹೇಳಿಕೆಗಳು ಸಹ ಊಹಾಪೋಹಗಳಿಗೆ ಕಾರಣವಾಗಿವೆ. ಪಕ್ಷದ ವಿವಿಧ ಪದಾಧಿಕಾರಿಗಳ ಅಭಿಪ್ರಾಯಗಳನ್ನು  ನಾಯಕರು ಪಡೆದಿರೋದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ದಿಲ್ಲಿಗೆ ಹೋಗಿರುವ ಡಿಕೆಶಿ ಬಣಕ್ಕೆ ಖಡಕ್ ಸಂದೇಶ ರವಾನಿಸಿದ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಬಿಜೆಪಿ ಕಿಡಿ


ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ, ಕಾಂಗ್ರೆಸ್​​ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ರೈತರಿಗೆ ಇನ್ನಿಲ್ಲದ ತೊಂದರೆಗಳು ಎದುರಾಗುತ್ತವೆ. ಕಬ್ಬು ಬೆಳೆಗಾರರು, ಮೆಕ್ಕೆ ಜೋಳ ಬೆಳೆದ ರೈತರು ಮತ್ತು ತುಂದಭದ್ರಾ ಡ್ಯಾಂ ಪಾತ್ರದ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ರೈತರು ಅನ್ನ ನೀರಿಲ್ಲದೆ, ಹಗಲಿರುಳೆನ್ನದೆ ಕಳೆದೊಂದು ತಿಂಗಳಿಂದ ಹೋರಾಡುತ್ತಿದ್ದರು ತಿರುಗಿ ನೋಡಲು ರಾಜ್ಯದ ಕಾಂಗ್ರೆಸ್​​ ನಾಯಕರಿಗೆ ಸಮಯವಿಲ್ಲ. ಆದರೆ, ಕುರ್ಚಿಗಾಗಿ ದೆಹಲಿಯಲ್ಲಿ ಗುಲಾಮಗಿರಿ ಮಾಡಲು ಸಮಯವಿದೆ ಎಂದು ಆರೋಪಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 4:45 pm, Fri, 21 November 25