AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧ ಮಾಡುವವರಿಗೆ ಟಿಕೆಟ್ ಸಿಗಲ್ಲ: ಸಿಟಿ ರವಿ ವಿರುದ್ಧ ಶೋಭಾ ಕರಂದ್ಲಾಜೆ ಪರೋಕ್ಷ ವಾಗ್ದಾಳಿ

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮ ವಿರುದ್ಧ ಗೋಬ್ಯಾಕ್ ಅಭಿಯಾನ ನಡೆಸಲು ಕುಮ್ಮಕ್ಕು ನೀಡಿದವರಿಗೆ ಇದೀಗ ಬೆಂಗಳೂರು ಉತ್ತರದಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಮಾಡಿದವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಅವರು ಸಿಟಿ ರವಿಯನ್ನು ಉದ್ದೇಶಿಸಿ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ವಿರೋಧ ಮಾಡುವವರಿಗೆ ಟಿಕೆಟ್ ಸಿಗಲ್ಲ: ಸಿಟಿ ರವಿ ವಿರುದ್ಧ ಶೋಭಾ ಕರಂದ್ಲಾಜೆ ಪರೋಕ್ಷ ವಾಗ್ದಾಳಿ
ಶೋಭಾ ಕರಂದ್ಲಾಜೆ
ಕಿರಣ್​ ಹನಿಯಡ್ಕ
| Updated By: Ganapathi Sharma|

Updated on: Mar 14, 2024 | 12:35 PM

Share

ಬೆಂಗಳೂರು, ಮಾರ್ಚ್​ 14: ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ (BJP) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ (Shobha Karandlaje) ಬೆಂಗಳೂರು ಉತ್ತರದಿಂದ ಟಿಕೆಟ್ ನೀಡಲಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅವರ ವಿರುದ್ಧ ಗೋಬ್ಯಾಕ್ ಅಭಿಯಾನ ತೀವ್ರಗೊಂಡಿತ್ತು. ಹೀಗಾಗಿ ಹೈಕಮಾಂಡ್ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರವನ್ನು ನೀಡಿದೆ. ಈ ಮಧ್ಯೆ, ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಶೋಭಾ ಕರಂದ್ಲಾಜೆ ಪರೋಕ್ಷ ವಾಗ್ದಾಳಿ ನಡೆಸಿದ್ದು, ವಿರೋಧಿಸುವವರಿಗೆ ಟಿಕೆಟ್ ಸಿಗುವುದಿಲ್ಲ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಕೆಲವರು ಅದನ್ನು ವಿರೋಧಿಸಿದ್ದಾರೆ. ಕೆಲವರು ಪ್ರಾಯೋಜನೆ ಮಾಡಿ ವಿರೋಧಿಸುವಂತೆ ಮಾಡಿದರು. ಆದರೆ, ಹಾಗೆ ಮಾಡಿದವರು ಕೂಡ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ವಿರೋಧ ಮಾಡುವವರಿಗೆ ಟಿಕೆಟ್ ಸಿಗಲ್ಲ. ಇನ್ನಾದರೂ ವಿರೋಧ ಮಾಡುವವರು ಪಾಠ ಕಲಿಯಬೇಕು. ಪಕ್ಷ ವಿರೋಧಿಸುವವರಿಗೆ ಹೈಕಮಾಂಡ್​​ ಮಣೆ ಹಾಕಲ್ಲ ಎಂದು ಶೋಭಾ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ತೀವ್ರಗೊಂಡಿತ್ತು. ಇದನ್ನು ಸಿಟಿ ರವಿ ಬೆಂಬಲಿಗರೇ ಮಾಡಿಸುತ್ತಿದ್ದಾರೆ ಎನ್ನಲಾಗಿತ್ತು. ಆದಾಗ್ಯೂ ಆ ಕ್ಷೇತ್ರದಿಂದಲೇ ಟಿಕೆಟ್ ಪಡೆಯಲು ಶೋಭಾ ಯತ್ನ ಮಾಡಿದ್ದರು. ಅಂತಿಮವಾಗಿ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಘೋಷಣೆ ಮಾಡಿರುವ ಹೈಕಮಾಂಡ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ.

ಸದಾನಂದ ಗೌಡ ಕಾಲಿಗೆ ಬಿದ್ದ ಶೋಭಾ

ಮತ್ತೊಂದೆಡೆ, ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಮಾಜಿ ಸಿಎಂ ಡಿವಿ ಸದಾನಂದ ಗೌಡರ ನಿವಾಸಕ್ಕೆ ತೆರಳಿರುವ ಶೋಭಾ ಕರಂದ್ಲಾಜೆ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಗುರುವಾರ ಬೆಳಗ್ಗೆ ಸದಾನಂದ ಗೌಡರ ಬೆಂಗಳೂರಿನ ಸಂಜಯನಗರದಲ್ಲಿರುವ ಡಿವಿಎಸ್ ನಿವಾಸಕ್ಕೆ ಭೇಟಿ ನೀಡಿದ ಶೋಭಾ, ಸಮಾಲೋಚನೆ ನಡೆಸಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನದಿಂದ ಬಿಎಸ್​ವೈ ಇಳಿಸಿದ್ದೇ ಕಟೀಲ್​ಗೆ ಮುಳುವಾಯ್ತಾ? ಟಿಕೆಟ್ ಕೈತಪ್ಪಲು ಕಾರಣ ಏನು ಗೊತ್ತಾ?

ಈ ಮಧ್ಯೆ ಬೆಂಗಳೂರು ಉತ್ತರದಲ್ಲಿಯೂ ಶೋಭಾ ವಿರುದ್ಧ ಗೋಬ್ಯಾಕ್ ಅಭಿಯಾನ ಆರಂಭವಾಗಿತ್ತು. ಆದರೆ, ಅದನ್ನು ತಣ್ಣಗಾಗಿಸುವಲ್ಲಿ ಅವರು ಬಹುತೇಕ ಯಶಸ್ವಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ