ಕೆಂಪುಕೋಟೆ ಸೇರಿದಂತೆ ಎಲ್ಲಿ ಬೇಕಾದರೂ ಕೇಸರಿ ಧ್ವಜ ಹಾರಿಸುತ್ತೇವೆ: ಸಚಿವ ಈಶ್ವರಪ್ಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 09, 2022 | 7:28 PM

ರಾಷ್ಟ್ರಧ್ವಜ ಗೌರವಿಸದವನು ರಾಷ್ಟ್ರದ್ರೋಹಿ ಆಗುತ್ತಾನೆ. ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೂ ನಿಯಮಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಕೆಂಪುಕೋಟೆ ಸೇರಿದಂತೆ ಎಲ್ಲಿ ಬೇಕಾದರೂ ಕೇಸರಿ ಧ್ವಜ ಹಾರಿಸುತ್ತೇವೆ: ಸಚಿವ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
Follow us on

ಬೆಂಗಳೂರು: ಕೆಂಪುಕೋಟೆ ಸೇರಿದಂತೆ ಎಲ್ಲಿ ಬೇಕಾದರೂ ನಾವು ಕೇಸರಿ ಧ್ವಜ ಹಾರಿಸುತ್ತೇವೆ. ಆದರೆ ಎಲ್ಲಿಯೂ ನಾವು ರಾಷ್ಟ್ರಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸಿಲ್ಲ. ಇನ್ನು ಮುಂದೆಯೂ ಹಾಗೆ ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು. ರಾಷ್ಟ್ರಧ್ವಜಕ್ಕೆ ದೇಶದಲ್ಲಿರುವ ಎಲ್ಲರೂ ಗೌರವ ಕೊಡಲೇಬೇಕು. ರಾಷ್ಟ್ರಧ್ವಜ ಗೌರವಿಸದವನು ರಾಷ್ಟ್ರದ್ರೋಹಿ ಆಗುತ್ತಾನೆ. ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೂ ನಿಯಮಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಬಂಡೆಯನ್ನು ಲೂಟಿ ಮಾಡಿರುವುದು ಡಿ.ಕೆ.ಶಿವಕುಮಾರ್. ನಾವು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚುತ್ತೇವೆ. ಅದನ್ನು ಕೇಳಲು ಡಿ.ಕೆ.ಶಿವಕುಮಾರ್‌ಗೆ ಅಧಿಕಾರವಿಲ್ಲ. ಡಿಕೆಶಿ ಏನು ಹೇಳುತ್ತಿದ್ದಾರೆ ಎನ್ನುವುದನ್ನು ನೇರವಾಗಿ ಹೇಳಲಿ. ಹೀಗೆ ಸುತ್ತಿ ಬಳಸಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಸಮವಸ್ತ್ರ ಧರಿಸಿ ಶಾಲೆಗೆ ಹೋಗಿ ಎಂದಷ್ಟೇ ನಾವು ಹೇಳುತ್ತಿದ್ದೇವೆ. ಶಾಲೆ ಹೊರತುಪಡಿಸಿ ಬೇರೆ ಕಡೆ ಅವರು ಯಾವ ವಸ್ತ್ರ ಧರಿಸಿದರೂ ನಮಗೆ ಆಕ್ಷೇಪವಿಲ್ಲ. ಅವರನ್ನು ನಾವು ತಡೆಯುತ್ತಲೂ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಎಲ್ಲಿಗೆ ಬೇಕಾದರೂ ಕೇಸರಿ ಶಾಲು ಧರಿಸಿ ಹೋಗುತ್ತೇವೆ. ಆದರೆ ಸಮವಸ್ತ್ರ ಧರಿಸಿ ಹೋಗಬೇಕಾದ ಜಾಗಕ್ಕೆ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಹೋಗುವುದು ತಪ್ಪು. ಕೇಸರಿ ಧ್ವಜವನ್ನು ನಾವು ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಕೆಂಪುಕೋಟೆ ಮೇಲೂ ನಾವು ಕೇಸರಿ ಧ್ವಜ ಹಾರಿಸುವವರೇ ಎಂದು ಸವಾಲು ಹಾಕಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ಮೀರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಧ್ವಜ ಬದಲಾವಣೆ: ಅಶ್ವತ್ಥ ನಾರಾಯಣ ಸ್ಪಷ್ಟನೆ

ಬೆಂಗಳೂರು: ಭಾರತದ ರಾಷ್ಟ್ರಧ್ವಜ ಬದಲಿಸಬೇಕು ಎಂದು ಬಿಜೆಪಿ ಎಲ್ಲಿಯೂ ಹೇಳಿಲ್ಲ. ರಾಷ್ಟ್ರಧ್ವಜ ಬದಲಾವಣೆ ಮಾಡುವುದಿಲ್ಲ. ಸಚಿವ ಈಶ್ವರಪ್ಪ ಕೇವಲ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಅವರು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು.

ಇದನ್ನೂ ಓದಿ: ಶಾಂತಿ ಕದಡುವ ಸುಳ್ಳು ಸುದ್ದಿ ಪೋಸ್ಟ್​ ಮಾಡಿದ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ ಬಿಜೆಪಿ

ಇದನ್ನೂ ಓದಿ: ಹಿಜಾಬ್ ಗಲಾಟೆಯ ಹಿಂದೆ SDPI ಇದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಂಪೂರ್ಣ ಮಾಹಿತಿ ನೀಡಿದ ಕರಾವಳಿ ಕಾಂಗ್ರೆಸ್