Lakshmibai Enagi death : ಹಿರಿಯ ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ

| Updated By: ಶ್ರೀದೇವಿ ಕಳಸದ

Updated on: May 04, 2022 | 1:21 PM

Kannada Theatre : ನಾಯಕಿ ಅನುರಾಧಾ ಪಾತ್ರಧಾರಿ ಕೈಕೊಟ್ಟರು. ಯಾಕೆ ತಾನೇ ಆ ಹರೆಯದ ಹುಡುಗಿಯ ಪಾತ್ರ ನಿರ್ವಹಿಸಬಾರದು ಎನ್ನಿಸಿತು ಲಕ್ಷ್ಮೀಬಾಯಿಯವರಿಗೆ. ಪಾತ್ರವನ್ನು ಆವಾಹಿಸಿಕೊಂಡೇ ಬಿಟ್ಟರು. ಆಗವರಿಗೆ ಕೇವಲ 80 ವರ್ಷ!

Lakshmibai Enagi death : ಹಿರಿಯ ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ
ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ
Follow us on

Enagi Lakshmibai : ಹಿರಿಯ ರಂಗಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ (96) ಇಂದು ಬೆಳಗ್ಗೆ ಧಾರವಾಡದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಪುತ್ರಿ ಭಾಗ್ಯಶ್ರೀ, ಸೊಸೆ ಲತಾ, ಮೊಮ್ಮಕ್ಕಳಾದ ಅಮೋಘ, ಆದೇಶ ಅವರನ್ನು ಅಗಲಿದ್ದಾರೆ. ಗುಬ್ಬಿ ವೀರಣ್ಣನವರ ಕಂಪೆನಿಯಲ್ಲಿ ಬಾಲಕಲಾವಿದೆಯಾಗಿ ನಟನಾ ವೃತ್ತಿಯನ್ನು ಆರಂಭಿಸಿದಾಗ ಲಕ್ಷ್ಮೀಬಾಯಿಯವರಿಗೆ ಕೇವಲ ಏಳು ವರ್ಷ. ಇವರ ತಂದೆ ಗುಬ್ಬಿ ನಾಟಕ ಕಂಪೆನಿಯ ವ್ಯವಸ್ಥಾಪಕರಾಗಿದ್ದ ಕಾರಣ ರಂಗದ ನಂಟು ಇವರನ್ನು ಎಳವೆಯಲ್ಲಿಯೇ ಆಕರ್ಷಿಸಿತು. ಮುಂದೆ ಇವರು 1948ರಲ್ಲಿ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘವನ್ನು ಸೇರಿದರು. 1950ರಲ್ಲಿ ಮಹಾಂತೇಶ ಶಾಸ್ತ್ರಿಗಳು ಬರೆದ ‘ಕುಂಕುಮ’ ನಾಟಕವನ್ನು ಅಭಿನಯಿಸುವುದರ ಮೂಲಕ ರಂಗಾಸಕ್ತರನ್ನು ವಿಶೇಷವಾಗಿ ಗಮನ ಸೆಳೆದರು. ವಿಧವಾ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಕಥಾವಸ್ತುವನ್ನು ಈ ನಾಟಕ ಹೊಂದಿತ್ತು. ಇವರು ಅನುರಾಧೆಯಾಗಿ ಪಾತ್ರ ನಿರ್ವಹಿಸಿದರೆ ಏಣಗಿ ಬಾಳಪ್ಪ ಅಶ್ವಿನಿ ಪಾತ್ರ ಮಾಡಿದ್ದರು.

ಮರಾಠಿ ರಂಗಭೂಮಿಯ ಛೋಟಾ ಗಂಧರ್ವರ ಏಕದೃಶ್ಯ ತಂತ್ರದಿಂದ ಪ್ರಭಾವಿತರಾದ ಬಾಳಪ್ಪನವರು ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಇಂಥ ಪ್ರಯೋಗವನ್ನು ಈ ನಾಟಕದ ಮೂಲಕ ಮಾಡಿದರು. ಇದು ಯಶಸ್ವಿಯಾಗಲು ಕಾರಣ ಲಕ್ಷ್ಮೀಬಾಯಿಯವರ ನಟನಾ ವೈಖರಿ. 1950ರಲ್ಲಿ ಉತ್ತರ ಕರ್ನಾಟಕದ ಸಿದ್ದಾಪುರದಲ್ಲಿ ಈ ನಾಟಕದ ಮೊದಲ ಪ್ರಯೋಗ ಕಂಡಿತು. ಯಾವಾಗ ಲಕ್ಷ್ಮೀಬಾಯಿಯವರು ಏಣಗಿ ಬಾಳಪ್ಪನವರ ಕಂಪೆನಿ ಪ್ರವೇಶಿಸಿದರೋ ಆಗ ಬಾಳಪ್ಪನವರು ಕ್ರಮೇಣ ತಾವು ಸ್ತ್ರೀಪಾತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದರು. ಹೇಮರಡ್ಡಿ ಮಲ್ಲಮ್ಮ, ಪಠಾಣಿ ಪಾಷಾ, ಚಲೇಜಾವ್, ಕುರುಕ್ಷೇತ್ರ, ಕಿತ್ತೂರು ಚನ್ನಮ್ಮ, ಬಡತನ ಭೂತ, ದೇವರ ಮಗು… ಮುಂತಾದ ನಾಟಕಗಳ ಸ್ತ್ರೀಪಾತ್ರಗಳನ್ನು ಲಕ್ಷ್ಮೀಬಾಯಿಯವರು ಅದ್ಭುತವಾಗಿ ಅಭಿನಯಿಸಿ ಜನಮನಸೂರೆಗೊಂಡರು.

ಇದನ್ನೂ ಓದಿ : Theatre : ಅಂಕಪರದೆ; ‘ನವೋದಯ’ ತಂಡದಿಂದ ಮೇ5ರಂದು ‘ಅಯೋಧ್ಯಾ ಕಾಂಡ’ ಪ್ರದರ್ಶನ

ಮುಂದೆ ಧಾರವಾಡದಲ್ಲಿ 1994ರಲ್ಲಿ ‘ಮ್ಯಾಳ’ ಎಂಬ ರಂಗತಂಡವನ್ನು ಚಂಪಾ, ಏಣಗಿ ಬಾಳಪ್ಪ, ನಟರಾಜ ಏಣಗಿ ಪ್ರಾರಂಭಿಸಿದರು. ಅದೇ ‘ಕುಂಕುಮ’ ನಾಟಕವನ್ನು ಪ್ರದರ್ಶಿಸಲು ತಂಡ ಮುಂದಾಯಿತು. ಆದರೆ ತಾಲೀಮಿನ ಕೊನೆಯ ಹಂತದಲ್ಲಿ ಅನುರಾಧಾ ಪಾತ್ರಧಾರಿ ಅನಿವಾರ್ಯ ಕಾರಣಗಳಿಂದ ಗೈರಾದರು. ಈ ಎಲ್ಲ ತಾಲೀಮನ್ನು ಗಮನಿಸುತ್ತಿದ್ದ ಲಕ್ಷ್ಮೀಬಾಯಿಯವರಿಗೆ ತಾವು ಹಿಂದೆ ನಿರ್ವಹಿಸಿದ್ದ ಅನುರಾಧಾ ಪಾತ್ರ ಮೆಲ್ಲಗೆ ಆವಾಹಿಸಿಕೊಳ್ಳತೊಡಗಿತ್ತು. ಯಾಕೆ ‘ನಾನೇ ನಟಿಸಬಾರದು?’ ಎಂಬ ನಿರ್ಧಾರಕ್ಕೆ ಬಂದರು. ತಮ್ಮ ಎಂಬತ್ತರ ಇಳಿವಯಸ್ಸಿನಲ್ಲಿ ಹರೆಯದ ಹುಡುಗಿ ಅನುರಾಧಾ ಪಾತ್ರ ಮಾಡಿ ತಮ್ಮೊಳಗಿನ ಕಲಾವಿದೆಯನ್ನು ಮತ್ತೆ ಬಡಿದೆಬ್ಬಿಸಿದರೆಂದರೆ!

ಇಂಥ ಅದ್ಭುತ ಜೀವಚೈತನ್ಯದ ಕಲಾವಿದೆಗೆ ನಾಟಕ ಕಾಡೆಮಿ ಗೌರವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಮೈಸೂರಿನ ನಟನಾ ರಂಗಪುರಸ್ಕಾರ ಲಭಿಸಿದ್ದವು.  ಮೃತರ ಅಂತ್ಯಕ್ರಿಯೆ ಇಂದು ಧಾರವಾಡದಲ್ಲಿ ನಡೆಯಲಿದೆ.

ಇದನ್ನೂ ಓದಿ : Obituary : ಕನ್ನಡ ರಂಗಭೂಮಿಯ ಕ್ರಿಯಾಶೀಲ ನಿರ್ದೇಶಕ ಜಿ. ಚನ್ನಕೇಶವ ಇನ್ನಿಲ್ಲ

Published On - 12:45 pm, Wed, 4 May 22