ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಶೈಲಜಾ ಸುರೇಶ

‘ಗಳಗನಾಥರು ತಲೆಯ ಮೇಲೆ ಪುಸ್ತಕಗಳ ಗಂಟು ಹೊತ್ತು ಹಳ್ಳಿಹಳ್ಳಿಗಳಲ್ಲಿ ಸಂಚರಿಸುತ್ತ ಮಾರುತ್ತ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡ ಪರಿ. ಅಂತಹ ಸಮಯದಲ್ಲಿ ಅವರಿಗಾದ ಅಪಮಾನಗಳು, ಸನ್ಮಾನಗಳು, ಇವೆಲ್ಲವನ್ನೂ ಸಚಿತ್ರವಾಗಿ ಸುರೇಖಾ ಕುಲಕರ್ಣಿ ಕಟ್ಟಿ ಕೊಟ್ಟಿದ್ದಾರೆ.’ ಎನ್ನುತ್ತಾರೆ ಲೇಖಕಿ ಶೈಲಜಾ ಸುರೇಶ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಶೈಲಜಾ ಸುರೇಶ
ಲೇಖಕಿ ಶೈಲಜಾ ಸುರೇಶ
ಶ್ರೀದೇವಿ ಕಳಸದ

Updated on: Dec 30, 2020 | 11:12 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಈಗಿಲ್ಲಿ ಲೇಖಕಿ ಶೈಲಜಾ ಸುರೇಶ ಅವರ ಆಯ್ಕೆಗಳು ಹೀಗಿವೆ.

 

ಕೃ: ಸಮಗ್ರ ವಿಮರ್ಶೆ

ಲೇ: ಡಾ. ಎಸ್​. ವಿ. ಪ್ರಭಾವತಿ

ಪ್ರ: ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್

ಡಾ. ಎಸ್. ವಿ. ಪ್ರಭಾವತಿಯವರ ‘ಸಮಗ್ರ ವಿಮರ್ಶೆ’ ಈ ವರ್ಷದ ನನ್ನ ಮೆಚ್ಚಿನ ಪುಸ್ತಕ. ಇದೊಂದು ಪ್ರಬಂಧಗಳ ಸಂಕಲನ. ಇಲ್ಲಿ ಸುಮಾರು 39 ವಿಭಿನ್ನ ಲೇಖನಗಳಿವೆ. ಪ್ರತಿಯೊಂದು ಲೇಖನವೂ ಅತ್ಯಂತ ಪ್ರಬುದ್ಧವಾದ, ವೈಚಾರಿಕ ದೃಷ್ಟಿಕೋನದ ಲೇಖನಗಳು. ಪ್ರಭಾವತಿಯವರ ಖಡಕ್ ಮಾತುಗಳ ವಿಮರ್ಶಾ ಸಂಕಲನ ಇಷ್ಟವಾಗುವುದೇ ಅವರ ದಿಟ್ಟ, ವಸ್ತುನಿಷ್ಠ ನಿಲುವಿಗೆ. ‘ಶೂದ್ರ ತಪಸ್ವಿ- ಒಂದು ಅವಲೋಕನ’,  ಸ್ತ್ರೀವಾದದ ಪ್ರಸ್ತುತತೆ’, ಮಹಿಳಾ ಸಾಹಿತ್ಯದ ತಾತ್ವಿಕ ಆಯಾಮ’,  ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಮಹಿಳಾ ಸಾಹಿತ್ಯ “, ” ವೈಚಾರಿಕ ಸಾಹಿತ್ಯ ಮತ್ತು ಮಹಿಳಾ ಬರವಣಿಗೆ‘, ‘ಭಾರತೀಯ ಪರಂಪರೆಯಲ್ಲಿ ಸ್ತ್ರೀ ವಾದ’, ‘ಆಧುನಿಕ ಮಹಿಳಾ ಕಥಾ ಸಾಹಿತ್ಯ’ ಹೀಗೆ ಒಂದೊಂದು ಪ್ರಬಂಧಗಳ ಶೀರ್ಷಿಕೆಗಳೇ ಆಳವಾದ ಅಧ್ಯಯನವನ್ನು ಸೂಚಿಸುತ್ತವೆ. ಸಾಹಿತ್ಯ ಸಂಶೋಧಕರಿಗೆ ಈ ಕೃತಿ ನಿಜಕ್ಕೂ  ಮಾಹಿತಿಪೂರ್ಣ ಆಕರ ಗ್ರಂಥವಾಗಿದೆ. ಪ್ರತಿಯೊಂದು ಪುಟವೂ ತೌಲನಿಕ ವಸ್ತುನಿಷ್ಠ ಮಾಹಿತಿಯನ್ನು ಒಳಗೊಂಡಿದೆ. ಈ ಸಂಕಲನ ಸಂಗ್ರಹ ಯೋಗ್ಯವಾದಂಥದ್ದು.

ಕೃ: ಕಾದಂಬರಿಕಾರನ ಕಾದಂಬರಿ

ಲೇ: ಸುರೇಖಾ ಕುಲಕರ್ಣಿ

ಪ್ರ: ಮನೋಹರ ಗ್ರಂಥಮಾಲಾ

ಸುರೇಖಾ ಕುಲಕರ್ಣಿಯವರು ತಮ್ಮ ಮುತ್ತಜ್ಜ ‘ಗಳಗನಾಥ’ ಜೀವನಗಾಥೆಯನ್ನು ಪ್ರಸ್ತುತ ಪಡಿಸಿರುವ ‘ಕಾದಂಬರಿಕಾರನ ಕಾದಂಬರಿ.’ ಒಬ್ಬ ಲೇಖಕಿಯಾಗಿ ನನಗೆ ಮೆಚ್ಚುಗೆಯಾದ ಕೃತಿ. ಕನ್ನಡದ ಪ್ರಥಮ ಕಾದಂಬರಿ ಕಾರರಾದ ಗಳಗನಾಥರ ಸಾಮಾಜಿಕ ಬದುಕು, ಸಾಹಿತ್ಯಿಕ ಸಾಧನೆಗಳು, ಜೀವನದುದ್ದಕ್ಕೂ ಎದುರಿಸಿದ ಸಮಸ್ಯೆಗಳು, ಅವರು ಪ್ರಕಟಿಸುತ್ತಿದ್ದ ‘ಸದ್ಭೋದ ಚಂದ್ರಿಕೆ’ ಪತ್ರಿಕೆಯ ಕಷ್ಟನಷ್ಟಗಳು, ತಲೆಯ ಮೇಲೆ ಪುಸ್ತಕಗಳ ಗಂಟು ಹೊತ್ತು ಹಳ್ಳಿಹಳ್ಳಿಗಳಲ್ಲಿ ಸಂಚರಿಸುತ್ತ ಪುಸ್ತಕ ಮಾರುತ್ತ, ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡ ಪರಿ – ಅಂತಹ ಸಮಯದಲ್ಲಿ ಅವರಿಗಾದ ಅಪಮಾನಗಳು, ಸನ್ಮಾನಗಳು, ಇವೆಲ್ಲವನ್ನೂ ಸಚಿತ್ರವಾಗಿ ಸುರೇಖಾ ಕುಲಕರ್ಣಿ ಕಟ್ಟಿ ಕೊಟ್ಟಿದ್ದಾರೆ . ಆಪ್ತವೆನಿಸುವ ರೀತಿಯಲ್ಲಿ ಬರವಣಿಗೆಯಿದೆ. ಸಾಹಿತ್ಯದ ವಿದ್ಯಾರ್ಥಿಗಳು ಅವಶ್ಯವಾಗಿ ಇಂತಹ ಕೃತಿಗಳನ್ನು ಗಮನಿಸಲೇ ಬೇಕಾಗಿದೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಡಾ. ನಾ. ಸೋಮೇಶ್ವರ; ’ಹರಿದಾಸರ 10,000 ಹಾಡುಗಳು‘ ಮತ್ತು ‘Death An Inside Story’

Published On - 11:04 am, Tue, 29 December 20

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us