
ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ, ಜಪ, ಹವನ ಅಥವಾ ಧಾರ್ಮಿಕ ಆಚರಣೆಯನ್ನು ಪ್ರಾರಂಭಿಸುವ ಮೊದಲು ‘ಆಚಮನ’ ಮಾಡುವ ಸಂಪ್ರದಾಯವಿದೆ. ಆದರೆ ಈ ಆಚರಣೆಯ ಹಿಂದೆ ಇರುವ ನೈಜ ಮಹತ್ವದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆಚಮನದ ಮುಖ್ಯ ಉದ್ದೇಶ ಮತ್ತು ಅದರ ವಿಧಿ-ವಿಧಾನಗಳನ್ನು ಮನುಸ್ಮೃತಿ ಹಾಗೂ ಭವಿಷ್ಯ ಪುರಾಣಗಳಲ್ಲಿ ಅತ್ಯಂತ ವಿಸ್ತಾರವಾಗಿ ವಿವರಿಸಲಾಗಿದೆ. ಮನುಸ್ಮೃತಿಯ ಎರಡನೇ ಅಧ್ಯಾಯದ 60ನೇ ಶ್ಲೋಕದಲ್ಲಿ “ತ್ರಿರಚಮೇದಪಃ ಪೂರ್ವಮ್” ಎಂದು ಹೇಳಲಾಗಿದೆ. ಅಂದರೆ ಯಾವುದೇ ಧಾರ್ಮಿಕ ಕಾರ್ಯದ ಮುನ್ನ ಮೂರು ಬಾರಿ ಆಚಮನ ಮಾಡುವುದರಿಂದ ವ್ಯಕ್ತಿಯ ದೇಹ, ಮಾತು (ವಾಕ್) ಮತ್ತು ಮನಸ್ಸು ಪವಿತ್ರಗೊಳ್ಳುತ್ತದೆ. ಬಾಯಿಯನ್ನು ಆಂತರಿಕ ಹಾಗೂ ಬಾಹ್ಯವಾಗಿ ಶುದ್ಧೀಕರಿಸಿ, ಈಶ್ವರನ ಪೂಜೆಗೆ ನಮ್ಮನ್ನು ಸಿದ್ಧಗೊಳಿಸುವುದೇ ಈ ಆಚಮನ.
ಆಚಮನ ಎಂಬುದು ಅತ್ಯಂತ ಪವಿತ್ರವಾದ ಶುದ್ಧೀಕರಣದ ಒಂದು ಅಂಗವಾಗಿದೆ. ಇದರಲ್ಲಿ ಶುದ್ಧ ನೀರನ್ನು ಮಂತ್ರೋಚ್ಚಾರಣೆಯೊಂದಿಗೆ ಗ್ರಹಿಸಲಾಗುತ್ತದೆ ಮತ್ತು ನಂತರ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸಲಾಗುತ್ತದೆ. ಇದು ವ್ಯಕ್ತಿಯಲ್ಲಿ ಆಲೋಚನೆ, ಮಾತು ಹಾಗೂ ಕ್ರಿಯೆಗಳ ಶುದ್ಧತೆಯನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಪೂಜೆ ಅಥವಾ ಯಜ್ಞ-ಯಾಗಾದಿಗಳಿಗೆ ಮೊದಲು ಆಚಮನ ಮಾಡುವುದು ಅತ್ಯಂತ ಶುಭ ಹಾಗೂ ಕಡ್ಡಾಯವೆಂದು ಧರ್ಮಶಾಸ್ತ್ರಗಳು ಹೇಳುತ್ತವೆ.
ಆಚಮನದ ಆಚರಣೆಗೆ ಹೆಚ್ಚಿನ ವಸ್ತುಗಳ ಅಗತ್ಯವಿಲ್ಲ, ಕೇವಲ ಐದು ಮುಖ್ಯ ವಸ್ತುಗಳಿಂದ ಇದನ್ನು ನೆರವೇರಿಸಬಹುದು. ಶುದ್ಧ ನೀರು, ಸಣ್ಣ ತಾಮ್ರದ ಪಾತ್ರೆ (ಪಂಚಪಾತ್ರೆ), ಚಮಚ (ಉದ್ಧರಣೆ), ಕುಶ (ದರ್ಭೆ) ಮತ್ತು ಸ್ವಚ್ಛವಾದ ಆಸನ – ಇವು ಆಚಮನಕ್ಕೆ ಬೇಕಾಗುವ ಪದಾರ್ಥಗಳು. ಒಂದು ವೇಳೆ ನಿಮ್ಮ ಬಳಿ ಚಮಚ ಅಥವಾ ಕುಶ ಲಭ್ಯವಿಲ್ಲದಿದ್ದರೆ, ನಿಮ್ಮ ಕೈಗಳ ಸಹಾಯದಿಂದಲೇ ಆಚಮನ ವಿಧಿಯನ್ನು ಪೂರೈಸಬಹುದು.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ಆಚಮನ ಮಾಡುವ ಮುನ್ನ ಶುಚಿರ್ಭೂತರಾಗಿ ಸ್ನಾನ ಮಾಡಿ ಅಥವಾ ಕೈಕಾಲುಗಳನ್ನು ಚೆನ್ನಾಗಿ ತೊಳೆದು ಶುಭ್ರವಾದ ಉಡುಪನ್ನು ಧರಿಸಬೇಕು. ನಂತರ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸ್ವಚ್ಛವಾದ ಆಸನದ ಮೇಲೆ ಕುಳಿತು, ಮನಸ್ಸನ್ನು ಶಾಂತಗೊಳಿಸಿ ದೇವಸ್ಮರಣೆ ಮಾಡಬೇಕು. ಬಲಗೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಈ ಕೆಳಗಿನ ಮಂತ್ರಗಳನ್ನು ಪಠಿಸುತ್ತಾ ಮೂರು ಬಾರಿ ಸ್ವೀಕರಿಸಬೇಕು:
ಮೂರು ಬಾರಿ ನೀರನ್ನು ಸ್ವೀಕರಿಸಿದ ನಂತರ, ಬಲಗೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳಿನ ಬುಡವನ್ನು ಸ್ಪರ್ಶಿಸಬೇಕು. ತದನಂತರ ಮತ್ತೆ ನೀರನ್ನು ತೆಗೆದುಕೊಂಡು ಬೆರಳುಗಳ ತುದಿಗಳನ್ನು ಮುಟ್ಟುತ್ತಾ “ಓಂ ವಿಷ್ಣುವೇ ನಮಃ” ಎಂದು ಜಪಿಸಬೇಕು. ಇದಾದ ನಂತರ ಎರಡೂ ಅಂಗೈಗಳನ್ನು ಸ್ಪರ್ಶಿಸಿ “ಓಂ ಮಧುಸೂದನಾಯ ನಮಃ” ಎಂದು ಸ್ಮರಿಸಬೇಕು. ಕೊನೆಯದಾಗಿ, ಸ್ವಲ್ಪ ನೀರನ್ನು ತಲೆಯ ಮೇಲ್ಭಾಗ ಅಥವಾ ಹಣೆಗೆ ಪ್ರೋಕ್ಷಿಸಿಕೊಂಡು, ಉಳಿದ ನೀರನ್ನು ನೆಲದ ಮೇಲೆ ಬಿಟ್ಟು ಪೂಜೆಯನ್ನು ಪ್ರಾರಂಭಿಸಬೇಕು.
ಧಾರ್ಮಿಕ ನಂಬಿಕೆಗಳ ಪ್ರಕಾರ ಪೂಜೆಗೂ ಮುನ್ನ ಆಚಮನ ಮಾಡುವುದರಿಂದ ನಾವು ಮಾಡುವ ಪೂಜೆಯ ಸಂಪೂರ್ಣ ಫಲ ನಮಗೆ ಲಭಿಸುತ್ತದೆ. ಇದು ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿ, ಸಕಾರಾತ್ಮಕ ಆಲೋಚನೆಗಳನ್ನು ವೃದ್ಧಿಸುತ್ತದೆ. ಆಚಮನ ಮಾಡಿದ ನಂತರ ಪೂಜೆಯಲ್ಲಿ ಸಂಪೂರ್ಣ ಏಕಾಗ್ರತೆ ಮತ್ತು ಭಕ್ತಿ ಮೂಡುತ್ತದೆ. ಹೀಗಾಗಿ ಆಚಮನ ಎಂಬುದು ಬರಿ ನೀರು ಕುಡಿಯುವ ಆಚರಣೆಯಲ್ಲ; ಅದು ನಮ್ಮ ಕಾಯ, ವಾಚಾ, ಮಾನಸಗಳನ್ನು ಈಶ್ವರಾರ್ಪಣೆ ಮಾಡಲು ಸಿದ್ಧಗೊಳಿಸುವ ಪವಿತ್ರ ಮಾರ್ಗವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ