Chanakya Niti: ಈ 4 ಅಂಶಗಳನ್ನು ಪಾಲಿಸಿದರೆ ಗೆಲುವು ನಿಮ್ಮ ಬಳಿ ಇರುತ್ತದೆ – ಚಾಣಕ್ಯ ನೀತಿ

| Updated By: Skanda

Updated on: Jul 06, 2021 | 7:25 AM

ನಡೆ, ನುಡಿ ಪರಿಶುದ್ಧವಾಗಿದ್ದರೆ ಎಂತಹ ಸಂದರ್ಭದಲ್ಲೂ ಗೆದ್ದು ಬರಬಹುದು ಎನ್ನುವುದು ಸಾರ್ವಕಾಲಿಕ ಸತ್ಯ. ಉತ್ತಮ ನಡವಳಿಕೆ ವಿಚಾರದಲ್ಲಿ ಯಾರು ಶ್ರೀಮಂತರೋ ಅವರು ಸುಲಭವಾಗಿ ತಾವು ಮಾಡುವ ಕೆಲಸಗಳಲ್ಲಿ ಗೆಲುವು ಸಾಧಿಸುತ್ತಾರೆ.

Chanakya Niti: ಈ 4 ಅಂಶಗಳನ್ನು ಪಾಲಿಸಿದರೆ ಗೆಲುವು ನಿಮ್ಮ ಬಳಿ ಇರುತ್ತದೆ - ಚಾಣಕ್ಯ ನೀತಿ
ಚಾಣಕ್ಯ
Follow us on

ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಸ್ಥಾನಮಾನವಿದೆ. ಅಂದು ಚಂದ್ರಗೌಪ್ತ ಮೌರ್ಯನನ್ನು ತನ್ನ ಬುದ್ಧಿಶಕ್ತಿ, ತಂತ್ರಗಾರಿಕೆ, ರಾಜಕಾರಣದಿಂದ ಸಾಮ್ರಾಟನನ್ನಾಗಿಸಿದ ಚಾಣಕ್ಯ ಇಂದಿನ ಕಾಲಕ್ಕೂ ಅನ್ವಯಿಸಬಲ್ಲ ಅದೆಷ್ಟೋ ವಿಚಾರಗಳನ್ನು ಬಿತ್ತಿ ಹೋಗಿದ್ದಾರೆ. ನೈತಿಕ ವಿಚಾರಗಳಿಂದ ಹಿಡಿದು ಬದುಕಿನ ಹಲವು ತತ್ವಗಳಿಗೆ ಪೂರಕವಾಗುವ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಬದುಕಿನಲ್ಲಿ ಹೇಗೆ ಯಶಸ್ವಿಯಾಗಬೇಕೆಂಬ ಒಳಗುಟ್ಟುಗಳನ್ನು ತಿಳಿಸುವ ಚಾಣಕ್ಯ ನೀತಿ ಇದೇ ಕಾರಣಕ್ಕಾಗಿ ಜನಪ್ರಿಯವಾಗಿದೆ. ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯ ಹೇಳಿರುವ ಸೂಕ್ಷ್ಮ ವಿಚಾರಗಳು ನಮ್ಮ ಬದುಕಿಗೆ ಸೂಕ್ತ ದಿಕ್ಕನ್ನೂ ಗೊತ್ತು ಮಾಡಿಕೊಡಬಲ್ಲವು. ಬದುಕಿನಲ್ಲಿ ಗೆಲುವು ಸಾಧಿಸುವ ಬಗ್ಗೆ ಚಾಣಕ್ಯ ನೀತಿ ಏನು ಹೇಳುತ್ತದೆ ಎಂಬುದನ್ನು ಇಂದು ತಿಳಿಯೋಣ.

ಎಷ್ಟೋ ಜನರು ತಾವು ಮಾಡುವ ಕೆಲಸದಲ್ಲಿ ಗೆಲ್ಲಲೇಬೇಕು, ಉನ್ನತ ಮಟ್ಟಕ್ಕೇರಲೇ ಬೇಕು ಎಂದು ಸಾಕಷ್ಟು ಶ್ರಮ ವಹಿಸುತ್ತಾರೆ. ಆದರೂ, ಓಟದಲ್ಲಿ ಹಿಂದೆ ಉಳಿದು ನಿರಾಸೆ ಅನುಭವಿಸುತ್ತಾರೆ. ಚಾಣಕ್ಯರು ಹೇಳುವಂತೆ ಉದ್ಯಮ, ಕಾರ್ಯಕ್ಷೇತ್ರ ಯಾವುದರಲ್ಲೇ ಗೆಲುವು ದಕ್ಕಿಸಿಕೊಳ್ಳಬೇಕೆಂದರೂ ಕೆಲವು ಪ್ರಮುಖ ಸಂಗತಿಗಳ ಬಗ್ಗೆ ಗಮನ ಹರಿಸಲೇಬೇಕು. ಅದರಲ್ಲೂ ಈ ಕೆಳಗಿನ ನಾಲ್ಕು ಸಂಗತಿಗಳು ಗೆಲುವಿನ ರೂವಾರಿಗಳಂತೆ ಕೆಲಸ ಮಾಡುತ್ತವೆ ಎಂದರೂ ತಪ್ಪಾಗಲಾರದು.

ಪ್ರಾಮಾಣಿಕತೆ ಹಾಗೂ ಶಿಸ್ತುಬದ್ಧ ಕೆಲಸ
ಒಬ್ಬ ವ್ಯಕ್ತಿ ತಾನು ಮಾಡುತ್ತಿರುವ ಕೆಲಸದಲ್ಲಿ ಅಥವಾ ಉದ್ಯಮದಲ್ಲಿ ಗೆಲುವು ಕಾಣಬೇಕೆಂದರೆ ಪ್ರಪ್ರಥಮವಾಗಿ ಅವರು ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು ಹಾಗೂ ಅದಕ್ಕೆ ನಿಷ್ಠರಾಗಿ ಉಳಿಯಬೇಕು. ಯಾವ ವ್ಯಕ್ತಿ ಶಿಸ್ತನ್ನು ಕಾಪಾಡಿಕೊಳ್ಳುತ್ತಾರೋ ಅವರು ಕೆಲಸದೆಡೆಗೆ ಹೆಚ್ಚಿನ ಶ್ರದ್ಧೆಯನ್ನೂ ತೋರಿಸುತ್ತಾರೆ. ಪ್ರಾಮಾಣಿಕತೆ ಹಾಗೂ ಶಿಸ್ತು ಇಲ್ಲದ ಕಡೆಗೆ ಗೆಲುವು ತಲೆ ಹಾಕುವುದೇ ಇಲ್ಲ. ಹೀಗಾಗಿ ಇವೆರಡನ್ನೂ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ.

ಮುನ್ನುಗ್ಗುವ ಧೈರ್ಯ
ಯಾವುದೇ ಕೆಲಸವಾದರೂ ಅದರಲ್ಲಿ ಒಂದಷ್ಟು ಅಪಾಯಗಳು ಇದ್ದೇ ಇರುತ್ತವೆ. ಹಾಗಂತ ಅಪಾಯವನ್ನು ಮೈಮೇಲೆ ಎಳೆದುಕೊಂಡು, ಜವಾಬ್ದಾರಿ ನಿರ್ವಹಿಸುವ ಧೈರ್ಯ ಮಾಡದೇ ಇದ್ದರೆ ಅದನ್ನು ಸಾಧಿಸಿ ತೋರಿಸುವುದು ಎಂದಿಗೂ ಅಸಾಧ್ಯ. ಆದ್ದರಿಂದ ಚಾಣಕ್ಯ ಹೇಳುವಂತೆ ಉದ್ಯಮ, ಕೆಲಸ ಏನೇ ಇದ್ದರೂ ಅದರಲ್ಲಿ ಒಂದಷ್ಟು ಪ್ರಯೋಗಗಳಿಗೆ ತೆರೆದುಕೊಂಡು, ಹೊಸತನವನ್ನು ಸ್ವಾಗತಿಸುತ್ತಾ, ಅಪಾಯ ಎನ್ನಿಸಿದ್ದನ್ನೂ ನಿಭಾಯಿಸುವ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು.

ಉತ್ತಮ ನಡವಳಿಕೆ
ನಡೆ, ನುಡಿ ಪರಿಶುದ್ಧವಾಗಿದ್ದರೆ ಎಂತಹ ಸಂದರ್ಭದಲ್ಲೂ ಗೆದ್ದು ಬರಬಹುದು ಎನ್ನುವುದು ಸಾರ್ವಕಾಲಿಕ ಸತ್ಯ. ಉತ್ತಮ ನಡವಳಿಕೆ ವಿಚಾರದಲ್ಲಿ ಯಾರು ಶ್ರೀಮಂತರೋ ಅವರು ಸುಲಭವಾಗಿ ತಾವು ಮಾಡುವ ಕೆಲಸಗಳಲ್ಲಿ ಗೆಲುವು ಸಾಧಿಸುತ್ತಾರೆ ಎನ್ನುವುದನ್ನೂ ಆಚಾರ್ಯ ಚಾಣಕ್ಯ ಪ್ರತಿಪಾದಿಸಿದ್ದಾರೆ. ಕೆಲಸ ಮಾಡುವ ಜಾಗದಿಂದ ಹಿಡಿದು ಗ್ರಾಹಕರ ತನಕ ಎಲ್ಲಾ ಕಡೆಯೂ ವ್ಯಕ್ತಿಯ ನಡೆ, ನುಡಿ, ವ್ಯಕ್ತಿತ್ವ ಭಾರೀ ಪರಿಣಾಮ ಬೀರುತ್ತದೆ. ಹೀಗಾಗಿ ಸನ್ನಡತೆಯೂ ಗೆಲುವು ತಂದುಕೊಡಬಲ್ಲ ಒಂದು ಪ್ರಮುಖ ಮಾರ್ಗ.

ತಂಡದೊಂದಿಗೆ ಕೆಲಸ ಮಾಡುವುದು
ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಎಷ್ಟೇ ಬುದ್ಧಿವಂತನಾಗಿದ್ದರೂ, ಬಲಶಾಲಿಯಾಗಿದ್ದರೂ ಆತ ಕೆಲಸ ಮಾಡುವಾಗ ಏಕಾಂಗಿಯಾಗಿ ಹೋರಾಡಿದರೆ ಅಷ್ಟು ಸುಲಭಕ್ಕೆ ಮುಂದೆ ಬರಲಾರದು. ಏಕೆಂದರೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ಯಾವಾಗಲೂ ತಂಡದಲ್ಲಿ ಕೆಲಸ ಮಾಡುವುದು ಉತ್ತಮ ಫಲಿತಾಂಶ ನೀಡುತ್ತದೆ. ಹೀಗಾಗಿ ಗುಂಪಿನಲ್ಲಿ ಕೆಲಸ ಮಾಡುತ್ತಾ ಎಲ್ಲರನ್ನೂ ಗೆಲುವಿನತ್ತ ಕೊಂಡೊಯ್ಯುತ್ತೇನೆ ಎನ್ನುವ ಮನೋಭಾವ ಉಳ್ಳವರು ಸಹಜವಾಗಿ ಗೆಲುವು ದಕ್ಕಿಸಿಕೊಳ್ಳುತ್ತಾರೆ.

ಇದನ್ನೂ ಓದಿ:
Chanakya Niti: ಈ ನಾಲ್ಕು ವಿಚಾರಗಳಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ

Chanakya Niti: ಈ ಮೂರು ವಿಚಾರಗಳನ್ನು ಪಾಲಿಸುವವರ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ; ಚಾಣಕ್ಯ ನೀತಿ