
ಹೊಸ ಮನೆ ಕಟ್ಟುವಾಗ ಅಥವಾ ಹೊಸ ವ್ಯಾಪಾರ ಪ್ರಾರಂಭಿಸುವಾಗ, ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಪಡೆಯಲು ಬೂದಿ ಕುಂಬಳಕಾಯಿಯನ್ನು ಕಟ್ಟುವ ಸಂಪ್ರದಾಯ ನಮ್ಮಲ್ಲಿದೆ. ಆದರೆ, ಈ ರೀತಿ ಬೂದಿ ಕುಂಬಳಕಾಯಿಯನ್ನು ನೇತುಹಾಕುವಾಗ ಕೆಲವು ಸಾಂಪ್ರದಾಯಿಕ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ವಿದ್ವಾಂಸರು ಹೇಳುತ್ತಾರೆ. ಮನೆಯ ಮುಂದೆ ಕಟ್ಟು ಉದ್ಧೇಶದಿಂದ ತಂದ ಬೂದಿ ಕುಂಬಳಕಾಯಿಯನ್ನು ಯಾವುದೇ ಕಾರಣಕ್ಕೂ ನೀರಿನಿಂದ ತೊಳೆಯಬಾರದು. ಹೀಗೆ ಮಾಡುವುದರಿಂದ ಅದರ ಆಧ್ಯಾತ್ಮಿಕ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಸ್ವಚ್ಛಗೊಳಿಸುವ ಬದಲು, ಅದನ್ನು ಒಣ ಬಟ್ಟೆಯಿಂದ ಒರೆಸಿ, ಅರಿಶಿನ ಮತ್ತು ಕುಂಕುಮವನ್ನು ಸಿಂಪಡಿಸಿ ಪೂಜಿಸಿದ ನಂತರವೇ ನೇತುಹಾಕಬೇಕು.
ನೇತುಹಾಕಲು ಆಯ್ಕೆ ಮಾಡುವ ಕುಂಬಳಕಾಯಿಗೆ ತೊಟ್ಟು ಇರುವುದು ಕಡ್ಡಾಯ. ಮನೆಗೆ ತರುವಾಗ ತೊಟ್ಟ ಹಿಡಿದು ಎಳೆಯುವುದು ಅಥವಾ ತೂಗಾಡಿಸುವುದರಿಂದ ಅದು ಮುರಿದುಬೀಳುವ ಸಾಧ್ಯತೆ ಇರುತ್ತದೆ. ತೊಟ್ಟು ಇಲ್ಲದ ಅಥವಾ ಹಾನಿಗೊಳಗಾದ ಕುಂಬಳಕಾಯಿಯನ್ನು ಮನೆಯ ಮುಂಭಾಗದಲ್ಲಿ ಕಟ್ಟುವುದು ಶುಭವಲ್ಲ ಎಂದು ನಂಬಲಾಗಿದೆ.
ಕುಂಬಳಕಾಯಿಯನ್ನು ಮನೆಗೆ ತರುವಾಗ ಅದನ್ನು ತಲೆಕೆಳಗಾಗಿ ಹಿಡಿಯಬಾರದು. ಅದರ ತೊಟ್ಟು ಯಾವಾಗಲೂ ಮೇಲ್ಭಾಗದಲ್ಲಿರುವಂತೆ ನೇರವಾಗಿ ಹಿಡಿದುಕೊಂಡು ಬರಬೇಕು. ಈ ರೀತಿ ತರುವುದರಿಂದ ಅದರಲ್ಲಿರುವ ಧನಾತ್ಮಕ ಶಕ್ತಿ ಮತ್ತು ಕೆಟ್ಟ ದೃಷ್ಟಿಯನ್ನು ದೂರವಿಡುವ ಸಾಮರ್ಥ್ಯ ಸಂರಕ್ಷಿಸಲ್ಪಡುತ್ತದೆ.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಯಾವುದೇ ದಿನ ಕುಂಬಳಕಾಯಿ ಕಟ್ಟುವುದಕ್ಕಿಂತ ಅಮಾವಾಸ್ಯೆಯ ದಿನದಂದು ಕಟ್ಟುವುದು ಅತ್ಯಂತ ಶುಭ. ಅಮಾವಾಸ್ಯೆಯಂದು ಕಟ್ಟುವುದರಿಂದ ನಕಾರಾತ್ಮಕ ಪರಿಣಾಮಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಅಮಾವಾಸ್ಯೆಯಂದು ಸಾಧ್ಯವಾಗದಿದ್ದರೆ, ಬುಧವಾರ ಅಥವಾ ಶನಿವಾರದಂದು ಸೂರ್ಯೋದಯಕ್ಕೆ ಮುಂಚಿತವಾಗಿ ಮುಂಜಾನೆ ಸಮಯದಲ್ಲಿ ಕಟ್ಟುವುದು ಉತ್ತಮ.
ಬೂದಿ ಕುಂಬಳಕಾಯಿಯನ್ನು ಕಟ್ಟುವ ಮೊದಲು, ಅದನ್ನು ಒಂದು ದೊಡ್ಡ ತಟ್ಟೆಯಲ್ಲಿಟ್ಟು ಅರಿಶಿನದ ಲೇಪನ ಮಾಡಿ, ಕುಂಕುಮದ ಬೊಟ್ಟುಗಳನ್ನು ಇಡಬೇಕು. ನಂತರ ಧೂಪ-ದೀಪಗಳಿಂದ ಪೂಜಿಸಿ, ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ನೇತುಹಾಕಬೇಕು. ಇವೆಲ್ಲವೂ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಗೆ ಸಂಬಂಧಿಸಿದ ವಿಷಯಗಳಾಗಿದ್ದು, ಇವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಜನರು ತಮ್ಮ ಕುಟುಂಬದ ಪದ್ಧತಿಗೆ ಅನುಗುಣವಾಗಿ ಇವುಗಳನ್ನು ಅನುಸರಿಸಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ