ಹನುಮಂತನ ತಾಯಿ ಅಂಜನಾದೇವಿ ಕೋತಿಯಾಗಿದ್ದು ಹೇಗೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 01, 2024 | 6:38 PM

ಭಗವಂತ ಹನುಮಂತನ ಶೌರ್ಯದ ಬಗ್ಗೆ ನಿಮಗೆ ತಿಳಿದಿರಬಹುದು. ಹನುಮಂತನ ಹುಟ್ಟಿನಿಂದ ರಾಮನ ಭಕ್ತನಾಗುವ ವರೆಗೆ ನೀವು ಅನೇಕ ಪೌರಾಣಿಕ ಕಥೆಯನ್ನು ಕೇಳಿರಬಹುದು, ಆದರೆ ಹನುಮಂತನ ತಾಯಿ ಅಂಜನಿ ಅಥವಾ ಅಂಜನಾದೇವಿ ಬಗ್ಗೆ ನೀವು ತಿಳಿದುಕೊಂಡಿದ್ದೀರಾ? ಅಪ್ಸರೆಯಾಗಿದ್ದ ದೇವಿ, ಕೋತಿಯಾಗಿ ಹೇಗೆ ಮಾರ್ಪಟ್ಟಳು ಎಂಬುದು ತಿಳಿದಿದೆಯಾ? ದೇವರಾಜ ಇಂದ್ರನ ಆಸ್ಥಾನದಲ್ಲಿ ಅಪ್ಸರೆಯಾಗಿದ್ದವಳು ಭಜರಂಗಿಗೆ ಜನ್ಮ ನೀಡಿದ್ದರ ಉದ್ದೇಶವೇನಾಗಿತ್ತು? ಈ ಶಾಪದ ಹಿಂದಿನ ಪೌರಾಣಿಕ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ಹನುಮಂತನ ತಾಯಿ ಅಂಜನಾದೇವಿ ಕೋತಿಯಾಗಿದ್ದು ಹೇಗೆ ಗೊತ್ತಾ?
Follow us on

ಭಗವಂತ ಹನುಮಂತನ ಶೌರ್ಯದ ಬಗ್ಗೆ ನಿಮಗೆ ತಿಳಿದಿರಬಹುದು. ಹನುಮಂತನ ಹುಟ್ಟಿನಿಂದ ರಾಮನ ಭಕ್ತನಾಗುವವರೆಗೆ ನೀವು ಅನೇಕ ಪೌರಾಣಿಕ ಕಥೆಯನ್ನು ಕೇಳಿರಬಹುದು, ಆದರೆ ಹನುಮಂತನ ತಾಯಿ ಅಂಜನಿ ಅಥವಾ ಅಂಜನಾದೇವಿ ಬಗ್ಗೆ ನೀವು ತಿಳಿದುಕೊಂಡಿದ್ದೀರಾ? ಅಪ್ಸರೆಯಾಗಿದ್ದ ದೇವಿ, ಕೋತಿಯಾಗಿ ಹೇಗೆ ಮಾರ್ಪಟ್ಟಳು ಎಂಬುದು ತಿಳಿದಿದೆಯಾ? ದೇವರಾಜ ಇಂದ್ರನ ಆಸ್ಥಾನದಲ್ಲಿ ಅಪ್ಸರೆಯಾಗಿದ್ದವಳು ಭಜರಂಗಿಗೆ ಜನ್ಮ ನೀಡಿದ್ದರ ಉದ್ದೇಶವೇನಾಗಿತ್ತು? ಈ ಶಾಪದ ಹಿಂದಿನ ಪೌರಾಣಿಕ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ತಾಯಿ ಅಂಜನಿ ಏಕೆ ಶಾಪಗ್ರಸ್ತಳಾದಳು ಗೊತ್ತಾ?

ಧಾರ್ಮಿಕ ನಂಬಿಕೆ ಮತ್ತು ಪೌರಾಣಿಕ ಕಥೆಗಳ ಪ್ರಕಾರ, ಒಮ್ಮೆ ಸ್ವರ್ಗದಲ್ಲಿ ಇಂದ್ರನು, ಒಂದು ಸಭೆಯನ್ನು ಆಯೋಜಿಸಿದ್ದನಂತೆ. ಅದರಲ್ಲಿ ಋಷಿ ದುರ್ವಾಸ ಮುನಿಗಳು ಕೂಡ ಭಾಗವಹಿಸಿದ್ದರಂತೆ. ಈ ಸಭೆಯಲ್ಲಿ ಮುಖ್ಯವಾದ ಚರ್ಚೆಗಳು ನಡೆಯುತ್ತಿರುವಾಗ ಪುಂಜಿಕ್ಷಲಿ ಎಂಬ ಅಪ್ಸರೆ ಅಲ್ಲಲ್ಲಿ ಸುತ್ತುತ್ತಿದ್ದಳಂತೆ. ಅವಳ ಓಡಾಟದಿಂದ ಸಭೆಯಲ್ಲಿ ಗೊಂದಲ ಆರಂಭವಾದರೂ ಅದನ್ನು ಲೆಕ್ಕಿಸದ ಅಪ್ಸರೆ ತನ್ನ ವರ್ತನೆಯನ್ನು ಮುಂದುವರೆಸಿದಳಂತೆ. ಅಪ್ಸರೆಯ ಆ ನಡವಳಿಕೆಯನ್ನು ಗಮನಿಸಿದ ದುರ್ವಾಸ ಮುನಿ ಕೋಪಗೊಂಡು ಆಕೆಗೆ “ಅಪ್ಸರೆಯಾಗಿದ್ದರೂ ಕೂಡ ಕೋತಿಗಳಂತೆ ಕೂಟದಲ್ಲಿ ಅಡೆತಡೆ ಸೃಷ್ಟಿಸಿದ್ದಕ್ಕಾಗಿ ನೀನು ಕೋತಿಯಾಗು” ಎಂದು ಶಪಿಸುತ್ತಾರಂತೆ. ಋಷಿ ನೀಡಿದ ಆ ಶಾಪದಿಂದಾಗಿ, ಅಂಜನಿ ಶಾಪಗ್ರಸ್ತಳಾದಳಂತೆ. ಬಳಿಕ ದುರ್ವಾಸ ಮುನಿಗಳ ಬಳಿ ಕ್ಷಮೆಯಾಚಿಸುತ್ತಾ, ಈ ಶಾಪದಿಂದ ಹೊರಬರಲು ಯಾವುದಾದರೂ ಮಾರ್ಗ ಕೇಳುತ್ತಾಳಂತೆ. ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲದರಿಂದ ಅಪ್ಸರೆಯ ಕೋರಿಕೆಯ ಮೇರೆಗೆ, ದುರ್ವಾಸ ಋಷಿಗಳು “ನೀನು ಮುಂದಿನ ಜನ್ಮದಲ್ಲಿ ಕೋತಿ ಜಾತಿಯಲ್ಲಿ ಜನಿಸು. ಆದರೆ ನಿನ್ನ ಗರ್ಭದಿಂದ ಬಹಳ ಶಕ್ತಿಶಾಲಿ, ಪ್ರಸಿದ್ಧ ಮತ್ತು ದೇವಭಕ್ತಿಯುಳ್ಳ ಮಗು ಜನಿಸುತ್ತದೆ” ಎಂಬ ವಾಗ್ದಾನವನ್ನು ನೀಡುತ್ತಾರಂತೆ. ಈ ಶಾಪದಿಂದಾಗಿಯೇ ಅಂಜನಿ, ರಾಜ ವಿರಾಜನ ಮಗಳಾಗಿ ಜನಿಸುತ್ತಾಳೆ, ಬಳಿಕ ಅವಳು ರಾಜ್ ಕೇಸರಿಯನ್ನು ವಿವಾಹವಾಗಿ ಹನುಮಂತನಿಗೆ ಜನ್ಮ ನೀಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

ಇದನ್ನೂ ಓದಿ:ಗುಪ್ತ ನವರಾತ್ರಿ ಸಾಧು – ಸಂತರು ಮಾತ್ರ ಆಚರಿಸಬೇಕು, ಇದರ ಹಿಂದಿದೆ ಮಹತ್ವದ ಉದ್ದೇಶ

ಮತ್ತೊಂದು ಪೌರಾಣಿಕ ಕಥೆ ಏನು?

ಇನ್ನೊಂದು ದಂತ ಕಥೆಯ ಪ್ರಕಾರ, ಅಂಜನಿ ಬಾಲ್ಯದಿಂದಲೂ ತುಂಟಿಯಾಗಿರುತ್ತಾಳಂತೆ. ಒಮ್ಮೆ ಅವಳು ಕಾಡಿನಲ್ಲಿ ಆಟವಾಡಲು ಹೋದಾಗ, ಒಬ್ಬ ಋಷಿ ಅಲ್ಲಿ ತಪಸ್ಸು ಮಾಡುತ್ತಿರುತ್ತಾರಂತೆ. ಅಂಜನಿ ಮರದಿಂದ ಹಣ್ಣನ್ನು ಕಿತ್ತು ತಪಸ್ವಿಯ ಮೇಲೆ ಎಸೆದಾಗ ಋಷಿಯ ತಪಸ್ಸು ಭಂಗವಾಗಿ, ಅಂಜನಿಯ ಮೇಲೆ ಕೋಪಗೊಂಡು ಕೋತಿಗಳಂತೆ ವರ್ತಿಸಿದ್ದಕ್ಕಾಗಿ, “ಮುಂದಿನ ಜನ್ಮದಲ್ಲಿ ಕೋತಿಯಾಗಿ ಹುಟ್ಟು” ಎಂದು ಶಪಿಸುತ್ತಾರಂತೆ. ಈ ಶಾಪದಿಂದಾಗಿಯೇ, ತಾಯಿ ಅಂಜನಿ ಕೋತಿಯಾದಳು ಎಂದು ಹೇಳಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ