Bharat Gaurav Darshan: ಕನ್ನಡಿಗರಿಗೆ ಕಾಶಿಯಾತ್ರೆ ಇನ್ನು ಸುಲಭ; ‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲಿಗೆ ನಾಳೆ ಮೋದಿ ಚಾಲನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 10, 2022 | 1:36 PM

ಈ ಯಾತ್ರೆಗಾಗಿ ವಿಶೇಷ ವಿನ್ಯಾಸದ ರೈಲನ್ನು ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಸಿದ್ಧಪಡಿಸಲಾಗುತ್ತಿದೆ.

Bharat Gaurav Darshan: ಕನ್ನಡಿಗರಿಗೆ ಕಾಶಿಯಾತ್ರೆ ಇನ್ನು ಸುಲಭ; ‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲಿಗೆ ನಾಳೆ ಮೋದಿ ಚಾಲನೆ
ಭಾರತ್ ಗೌರವ್ ರೈಲನ್ನು ವಿಶೇಷ ಚಿತ್ರಗಳಿಂದ ಅಲಂಕರಿಸಲಾಗಿದೆ
Follow us on

ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನ 11) ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. 8 ದಿನಗಳ ಪ್ರವಾಸದಲ್ಲಿ ಈ ರೈಲು ಕಾಶಿ, ಅಯೋಧ್ಯೆ, ಪ್ರಯಾಗ್​ರಾಜ್​ ಕ್ಷೇತ್ರಗಳಿಗೆ ಯಾತ್ರಿಗಳನ್ನು ಕೊಂಡೊಯ್ಯಲಿದೆ. ನ 11ರಂದು ಬೆಂಗಳೂರಿನಿಂದ ಹೊರಡಲಿರುವ ರೈಲು ನ 18ಕ್ಕೆ ಮತ್ತೆ ಬೆಂಗಳೂರಿಗೆ ಬರಲಿದೆ. ಈ ಯಾತ್ರೆಗಾಗಿ ವಿಶೇಷ ವಿನ್ಯಾಸದ ರೈಲನ್ನು ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಸಿದ್ಧಪಡಿಸಲಾಗುತ್ತಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಇತ್ತೀಚೆಗಷ್ಟೇ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಭೇಟಿ ನೀಡಿ ರೈಲನ್ನು ಪರಿಶೀಲಿಸಿದ್ದರು. ರೈಲಿನಲ್ಲಿ ಪ್ರಯಾಣಿಸಲು ಪ್ರತಿ ಪ್ರಯಾಣಿಕರಿಗೆ ₹ 20,000 ಟಿಕೆಟ್ ದರ ವಿಧಿಸಲಾಗಿದೆ. ಈ ಪೈಕಿ ಕರ್ನಾಟಕ ಸರ್ಕಾರವು ₹ 5 ಸಾವಿರ ಸಬ್ಸಿಡಿ ಒದಗಿಸುತ್ತದೆ. ಹೀಗಾಗಿ ಪ್ರಸ್ತುತ ಪ್ರಯಾಣಿಕರು ₹ 15,000ದಲ್ಲಿ ಕಾಶಿಯಾತ್ರೆ ಮಾಡಬಹುದಾಗಿದೆ.

ಕಳೆದ ಜುಲೈ ತಿಂಗಳಲ್ಲಿ ಕರ್ನಾಟಕ ಸರ್ಕಾರವು ‘ಕಾಶಿ ಯಾತ್ರಾ’ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯ ಅನ್ವಯ ಕರ್ನಾಟಕದ 30,000 ಜನರು ಕಾಶಿ ಯಾತ್ರೆಗಾಗಿ ತಲಾ ₹ 5 ಸಾವಿರ ಸಬ್ಸಿಡಿ ಪಡೆಯಲಿದ್ದಾರೆ ಎಂದು ಸರ್ಕಾರವು ಹೇಳಿತ್ತು. ‘ನ 11ರ ಯಾತ್ರೆಯ 547 ಟಿಕೆಟ್​ಗಳು ಈಗಾಗಲೇ ಮಾರಾಟವಾಗಿವೆ. ರೈಲು ತನ್ನ ಮುಂದಿನ ಸಂಚಾರವನ್ನು ನ 23ರಂದು ಆರಂಭಿಸಬಹುದು ಎಂಬ ನಿರೀಕ್ಷೆಯಿದೆ. ಆದರೆ ಈ ವಿಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಮುಂದಿನ ಯಾತ್ರೆಯ 100 ಟಿಕೆಟ್​ಗಳು ಮಾರಾಟವಾಗಿವೆ’ ಎಂದು ಸಚಿವರು ತಿಳಿಸಿದ್ದಾರೆ. ‘ವಂದೇ ಭಾರತ್ ಎಕ್ಸ್​ಪ್ರೆಸ್ ಜೊತೆಗೆ ಕಾಶಿ ಗೌರವ್ ಯಾತ್ರೆ ರೈಲು ಸಂಚಾರಕ್ಕೂ ಚಾಲನೆ ನೀಡುವಂತೆ ವಿನಂತಿಸಿದ್ದೇವೆ. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಮಾರ್ಚ್​ ತಿಂಗಳಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿ ಈ ರೈಲಿನ ಬಗ್ಗೆ ಪ್ರಸ್ತಾಪಿಸಿದ್ದರು.

ಬೆಂಗಳೂರು ನಗರದ ಜೊತೆಗೆ ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಮತ್ತು ರಾಯಭಾಗ ನಿಲ್ದಾಣಗಳಲ್ಲಿಯೂ ರೈಲಿಗೆ ಜನರು ಹತ್ತಲು ಅವಕಾಶವಿದೆ. ಆದರೆ ಟಿಕೆಟ್​ಗಳನ್ನು ಮೊದಲೇ ಖರೀದಿಸಿರಬೇಕು. 5 ವರ್ಷ ಮೇಲ್ಪಟ್ಟ ಎಲ್ಲರಿಗೂ ಪೂರ್ಣ ಚಾರ್ಜ್ ವಿಧಿಸಲಾಗುವುದು. ಪ್ರಯಾಣಿಕರಿಗೆ ರೈಲಿನಲ್ಲಿಯೇ ಊಟ, ತಿಂಡಿ, ಪಾನೀಯದ ವ್ಯವಸ್ಥೆ ಇರುತ್ತದೆ. ಪ್ರವಾಸಿ ಸ್ಥಳಗಳಲ್ಲಿ ಹೊಟೆಲ್​ನಲ್ಲಿ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಪ್ಯಾಕೇಜ್ ವಿವರ

‘ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್’ ಹೆಸರಿನ ರೈಲು ಒಟ್ಟು 8 ಹಗಲು 7 ರಾತ್ರಿಗಳ ಸಂಚಾರವನ್ನು ಒಳಗೊಂಡಿರುತ್ತದೆ. ಬೆಂಗಳೂರಿನಿಂದ ಹೊರಡುವ ರೈಲು ವಾರಾಣಸಿ (ಕಾಶಿ), ಅಯೋಧ್ಯೆ, ಪ್ರಯಾಗ್​ರಾಜ್ ಸಂದರ್ಶಿಸಿ ನಂತರ ಬೆಂಗಳೂರಿಗೆ ಮರಳುತ್ತದೆ.

ಏನೆಲ್ಲಾ ನೋಡಬಹುದು

ವಾರಾಣಸಿಯಲ್ಲಿ ತುಳಸಿ ಮಾನಸ ದೇಗುಲ, ಸಂಕಟಮೋಚನ ಹನುಮಾನ್ ದೇಗುಲ, ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾರತಿ. ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇಗುಲ, ಹನುಮಾನ್ ಗಡಿ, ಸರಯೂ ಘಾಟ್. ಪ್ರಯಾಗ್​ರಾಜ್​ನಲ್ಲಿ ಗಂಗಾ-ಯಮುನಾ ಸಂಗಮ, ಹನುಮಾನ್ ದೇಗುಲ.

Published On - 1:36 pm, Thu, 10 November 22