
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸಿದ್ಧಿಧಾತ್ರಿ ದೇವಿ ಪೂಜೆಯ ಮಹತ್ವವನ್ನು ವಿವರಿಸಿದ್ದಾರೆ. ಇಂದು ನವರಾತ್ರಿಯ ಒಂಬತ್ತನೆಯ ಮತ್ತು ಅಂತಿಮ ದಿನವಾದ ಮಹಾನವಮಿ ಹಾಗೂ ಶುಕ್ಲ ನವಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸಿದ್ಧಿಧಾತ್ರಿ ದೇವಿ ಪೂಜೆ ಮತ್ತು ಆಯುಧ ಪೂಜೆಗಳನ್ನು ವಿಶೇಷವಾಗಿ ನೆರವೇರಿಸಲಾಗುತ್ತದೆ. ಒಂಬತ್ತು ದಿನಗಳ ನವರಾತ್ರಿ ಆಚರಣೆಯನ್ನು ಸಿದ್ಧಿಧಾತ್ರಿ ಪೂಜೆಯೊಂದಿಗೆ ಸಂಪನ್ನಗೊಳಿಸಲಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ಮಹಾನವಮಿಯಂದು ದುರ್ಗಾದೇವಿಯನ್ನು ಸಿದ್ಧಿಧಾತ್ರಿ ರೂಪದಲ್ಲಿ ಪೂಜಿಸಲಾಗುತ್ತದೆ. ದುರ್ಗಾದೇವಿಯು ಒಂಬತ್ತು ಶಕ್ತಿಗಳೊಂದಿಗೆ ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ಪ್ರತೀಕವಾಗಿ ಈ ಪೂಜೆ ಆಚರಣೆಯಲ್ಲಿದೆ. ಸಿದ್ಧಿಧಾತ್ರಿ ಎಂಬ ಹೆಸರೇ ಸೂಚಿಸುವಂತೆ, ಇವಳು ಎಲ್ಲಾ ಸಿದ್ಧಿಗಳನ್ನು ದಯಪಾಲಿಸುವ ತಾಯಿ. ಮಾನಸಿಕ ಗೊಂದಲಗಳನ್ನು ಹೋಗಲಾಡಿಸಿ ಜಯಕ್ಕೆ ಕಾರಣೀಭೂತಳಾಗುವ, ಕರುಣೆಯ ತಾಯಿ ಎಂದು ಈ ದೇವಿಯನ್ನು ಕರೆಯಲಾಗುತ್ತದೆ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಸಿದ್ಧಿಧಾತ್ರಿ ಅಷ್ಟಸಿದ್ಧಿಗಳಾದ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಮೆಯೋ, ಈಶಿತ್ವಾ, ವಶಿತ್ವಾಗಳನ್ನು ನೀಡುವಳು. ಈ ಸಿದ್ಧಿಗಳು ಯುದ್ಧದಲ್ಲಿ ಶತ್ರುಗಳ ಮೇಲೆ ಪ್ರಭಾವ ಬೀರಲು, ಪ್ರಜ್ಞೆ ತಪ್ಪಿಸಲು, ಮತ್ತು ಅದೃಶ್ಯವಾಗಲು ಸಹಾಯ ಮಾಡುತ್ತವೆ. ಸಿದ್ಧಿಧಾತ್ರಿಯ ಮಂತ್ರ “ಓಂ ಐಂ ಹ್ರೀಂ ಶ್ರೀಂ ಸಿದ್ಧಿಧಾತ್ರೇ ನಮಃ” ಇದನ್ನು ಕನಿಷ್ಠ 21 ಬಾರಿ ಜಪಿಸುವುದರಿಂದ ಧೈರ್ಯ, ಶಕ್ತಿ, ಸಕಾರಾತ್ಮಕ ಮನೋಭಾವ, ಮತ್ತು ಅಖಂಡ ಆತ್ಮಸ್ಥೈರ್ಯ ವೃದ್ಧಿಸುತ್ತದೆ. ಆರೋಗ್ಯ, ಜಯ, ಮತ್ತು ಸಂಕುಚಿತ ಭಾವನೆಗಳ ನಿವಾರಣೆಗಾಗಿ ಈ ತಾಯಿಯನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸಬೇಕು. ಸಿದ್ಧಿಧಾತ್ರಿಗೆ ಕೋಸಂಬರಿ, ಕೋಡುಬಳೆ, ಹೆಸರುಬೇಳೆ ಹುಸಲಿ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತಾಯಿಯು ನಾಲ್ಕು ಭುಜಗಳನ್ನು ಹೊಂದಿದ್ದು, ಕಮಲ ಪುಷ್ಪದ ಮೇಲೆ ವಿರಾಜಮಾನಳಾಗಿರುತ್ತಾಳೆ. ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಕಮಲ ಪುಷ್ಪವನ್ನು ಧರಿಸಿರುತ್ತಾಳೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Wed, 1 October 25