Navaratri Day 9: ನವರಾತ್ರಿಯ ಒಂಭತ್ತನೆ ದಿನದ ವಿಶೇಷ; ಸಿದ್ಧಿಗಳನ್ನು ಪ್ರದಾನಿಸುವ ಸಿದ್ಧಿದಾತ್ರೀ

ನವರಾತ್ರಿಯ ಒಂಬತ್ತನೇ ದಿನದಂದು ಸಿದ್ಧಿದಾತ್ರೀ ದೇವಿಯನ್ನು ಆರಾಧಿಸಲಾಗುತ್ತದೆ. ಈ ತಾಯಿ ಎಲ್ಲಾ ಎಂಟು ಮಹಾಸಿದ್ಧಿಗಳನ್ನು ಅನುಗ್ರಹಿಸುವ ಶಕ್ತಿಯಾಗಿದ್ದಾಳೆ. ಶಿವನು ಅರ್ಧನಾರೀಶ್ವರನಾಗಲು ಸಿದ್ಧಿದಾತ್ರೀ ಕೃಪೆಯೇ ಕಾರಣ. ಭಕ್ತರು ಇವರನ್ನು ಪೂಜಿಸುವುದರಿಂದ ಲೌಕಿಕ ಮತ್ತು ಆಧ್ಯಾತ್ಮಿಕ ಕೋರಿಕೆಗಳು ಪೂರ್ಣಗೊಂಡು, ಶಾಂತಿ ಮತ್ತು ಸಂತೋಷವನ್ನು ಪಡೆಯುತ್ತಾರೆ. ಸಿದ್ಧಿದಾತ್ರೀ ಅನುಗ್ರಹದಿಂದ ಸೃಷ್ಟಿಯ ಹದಿನೆಂಟು ಸಿದ್ಧಿಗಳನ್ನೂ ಪಡೆಯಬಹುದು.

Navaratri Day 9: ನವರಾತ್ರಿಯ ಒಂಭತ್ತನೆ ದಿನದ ವಿಶೇಷ; ಸಿದ್ಧಿಗಳನ್ನು ಪ್ರದಾನಿಸುವ ಸಿದ್ಧಿದಾತ್ರೀ
ಸಿದ್ಧಿದಾತ್ರೀ

Updated on: Sep 29, 2025 | 10:24 AM

ನವರಾತ್ರಿಯ ಒಂಬತ್ತನೇ ದಿನ ಭಕ್ತರ ಆರಾಧನೆಗೆ ಪಾತ್ರವಾಗುವ ದೇವಿಯ ಸ್ವರೂಪವೇ ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ, ಎಲ್ಲಾ ವಿಧದ ಸಿದ್ಧಿಗಳನ್ನು ಅನುಗ್ರಹಿಸುವ ಶಕ್ತಿ ಈ ಮಹಾತಾಯಿ. ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖಿಸಿರುವಂತೆ, ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ – ಹೀಗೆ ಎಂಟು ಮಹಾಸಿದ್ಧಿಗಳನ್ನು ಈ ದೇವಿಯ ಅನುಗ್ರಹದಿಂದ ಪಡೆಯಬಹುದು.

ಸಿದ್ಧಗಂಧರ್ವಯಾದ್ವೆ ಸುರೈರಮರೈರಪಿ ।
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ॥

ಸಿದ್ಧಿದಾತ್ರೀ ಪುರಾಣದ ಉಲ್ಲೇಖ:

ದೇವಿಪುರಾಣದ ಪ್ರಕಾರ, ಮಹಾಶಿವನಿಗೂ ಸಹ ಈ ಸಿದ್ಧಿಗಳು ಸಿದ್ಧಿದಾತ್ರಿಯ ಅನುಗ್ರಹದಿಂದಲೇ ದೊರಕಿದವು. ತಾಯಿಯ ಕೃಪೆಯಿಂದಲೇ ಶಿವನ ಅರ್ಧಶರೀರವು ದೇವಿಯದಾಯಿತು. ಅದರಿಂದಲೇ ಶಿವನು ಜಗತ್ತಿನಲ್ಲಿ ಅರ್ಧನಾರೀಶ್ವರ ಎಂಬ ಹೆಸರಿನಿಂದ ಪ್ರಸಿದ್ಧನಾದ. ಈ ಪುರಾಣ ಪ್ರಸಂಗವು ಸಿದ್ಧಿದಾತ್ರಿಯ ಮಹಿಮೆ ಎಷ್ಟು ಅಪಾರವೆಂಬುದಕ್ಕೆ ಸಾಕ್ಷಿ.

ದೇವಿಯ ಸ್ವರೂಪ:

ಸಿದ್ಧಿದಾತ್ರೀ ದೇವಿಗೆ ನಾಲ್ಕು ಭುಜಗಳು. ವಾಹನ ಸಿಂಹ. ಕಮಲಾಸನದ ಮೇಲೆ ಕುಳಿತಿರುವ ಆಕೆಯ ಕೆಳಗಿನ ಬಲಗೈಯಲ್ಲಿ ಚಕ್ರ, ಮೇಲಿನ ಬಲಗೈಯಲ್ಲಿ ಗದೆ, ಕೆಳಗಿನ ಎಡಗೈಯಲ್ಲಿ ಶಂಖ, ಮೇಲಿನ ಎಡಗೈಯಲ್ಲಿ ಕಮಲ. ಈ ದಿವ್ಯ ಸ್ವರೂಪದ ಧ್ಯಾನ-ಆರಾಧನೆಯಿಂದ ಭಕ್ತರಿಗೆ ಸಿದ್ಧಿ, ಶಾಂತಿ, ಸಂತೋಷ ಹಾಗೂ ಕೋರಿಕೆಗಳ ಪರಿಪೂರ್ಣತೆ ದೊರೆಯುತ್ತದೆ.

ಆರಾಧನೆಯ ಮಹತ್ವ:

ಶರನ್ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರೀ ದೇವಿಯ ಆರಾಧನೆ ಮಾಡಿದಾಗ ಎಂಟು ಮಹಾಸಿದ್ಧಿಗಳು ಭಕ್ತರಿಗೆ ಅನುಗ್ರಹವಾಗುತ್ತವೆ. ಲೌಕಿಕ ಹಾಗೂ ಪಾರಮಾರ್ಥಿಕ ಎಲ್ಲಾ ಬಗೆಯ ಕೋರಿಕೆಗಳು ನೆರವೇರುತ್ತವೆ. ಆಧ್ಯಾತ್ಮಿಕ ಸಾಧನೆಗೆ ಅಸಾಧಾರಣ ಶಕ್ತಿ ದೊರೆಯುತ್ತದೆ. ಈ ಭಗವತಿಯ ಅನುಗ್ರಹವನ್ನು ಪಡೆದ ಆರಾಧಕರಿಗೆ ಈ ಲೋಕದಲ್ಲಿ ಸಿಗದಂಥ ಯಾವುದೂ ಇರುವುದಿಲ್ಲ ಎಂಬುದು ಪುರಾಣಗಳು ಸಾರುವ ಸತ್ಯ.

ಇದನ್ನೂ ಓದಿ: ನವರಾತ್ರಿಯ ಎಂಟನೇ ದಿನದ ವಿಶೇಷ; ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರೀ

ಹದಿನೆಂಟು ಸಿದ್ಧಿಗಳು:

ಪೌರಾಣಿಕ ಗ್ರಂಥಗಳಲ್ಲಿ ದೇವಿಯ ಅನುಗ್ರಹದಿಂದ ದೊರೆಯುವ ಹದಿನೆಂಟು ಸಿದ್ಧಿಗಳ ಉಲ್ಲೇಖ ಇದೆ. ಅವು:

  1. ಅಣಿಮಾ
  2. ಲಘಿಮಾ
  3. ಪ್ರಾಪ್ತಿ
  4. ಪ್ರಾಕಾಮ್ಯ
  5. ಮಹಿಮಾ
  6. ಈಶಿತ್ವ
  7. ವಶಿತ್ವ
  8. ಸರ್ವಕಾಮಾವಸಾಯಿತಾ
  9. ಸರ್ವತ್ವ
  10. ದೂರಶ್ರವಣ
  11. ಪರಕಾಯ ಪ್ರವೇಶನ
  12. ವಾಕ್‌ಸಿದ್ಧಿ
  13. ಕಲ್ಪವೃತ್ವ
  14. ಸೃಷ್ಟಿಶಕ್ತಿ
  15. ಸಂಹಾರಸಾಮರ್ಥ್ಯ
  16. ಅಮರತ್ವ
  17. ಸರ್ವನ್ಯಾಯಕತ್ವ
  18. ಭಾವನಾಸಿದ್ಧಿ.

ಈ ಸಿದ್ಧಿಗಳ ಪ್ರಾಪ್ತಿ ಸಿದ್ಧಿದಾತ್ರೀ ದೇವಿಯ ಕೃಪೆಯಿಂದಲೇ ಸಾಧ್ಯ.

ನವರಾತ್ರಿಯ ಒಂಬತ್ತನೇ ದಿನದ ಆರಾಧನೆಯೊಂದಿಗೆ ದೇವಿಯ ಒಂಬತ್ತು ಸ್ವರೂಪಗಳ ಪೂಜೆ ಸಂಪೂರ್ಣಗೊಳ್ಳುತ್ತದೆ. ಸಿದ್ಧಿದಾತ್ರೀ ದೇವಿಯ ಅನುಗ್ರಹ ಪಡೆದ ಭಕ್ತರಿಗೆ ಲೌಕಿಕ-ಪಾರಮಾರ್ಥಿಕ ಸಮೃದ್ಧಿಯೊಂದಿಗೆ ಆಧ್ಯಾತ್ಮಿಕ ಸಾಧನೆಯೂ ನೆರವೇರುತ್ತದೆ. ತಾಯಿಯ ಅನುಗ್ರಹದ ಬಳಿಕ ಮತ್ತೇನೂ ಬೇಕಾಗುವುದಿಲ್ಲ. ಆದ್ದರಿಂದ ಈ ನವರಾತ್ರಿಯ ಅಂತಿಮ ದಿನ ಸಿದ್ಧಿದಾತ್ರೀ ದೇವಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧನೆ ಮಾಡಿ, ಅಲೌಕಿಕ ಸಿದ್ಧಿಗಳು, ಕೃಪಾ ಪ್ರಸಾದ ಹಾಗೂ ಜೀವನದ ಪರಿಪೂರ್ಣತೆಯನ್ನು ಅನುಭವಿಸಿ.

ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us