ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯನ ಮೊರೆ ಹೋಗಲಿ: ಈ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಹೇಳೋದೇನು?

|

Updated on: Apr 23, 2021 | 11:06 AM

ಈ ಕುರಿತು ಪಕ್ಷದ ವರಿಷ್ಠರಿಗೆ ಆಗಾಗ ಹೇಳಿದ್ದೆ. ದೇಶದ ಪ್ರಧಾನ ಮಂತ್ರಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಬೇಕು ಎಂದು ತಿಳಿಸಿದ್ದೆ. ಅವರು ಇದನ್ನು ಕಡೆಗಣಿಸಿದರು. ಬಹುಶಃ ಯಾವುದೋ ಬಣ್ಣ ಬಳಿದುಕೊಂಡ ಗುರೂಜಿಗಳು ಹೇಳಿದ್ದರೆ ತೂಕ ಇರುತ್ತಿತ್ತು. ನಾನು ಪೂರ್ವ ಪ್ರತೀತಿಯ ಆಧಾರದಲ್ಲಿ ಹೇಳಿದ್ದು: ಪ್ರಕಾಶ್ ಅಮ್ಮಣ್ಣಾಯ

ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯನ ಮೊರೆ ಹೋಗಲಿ: ಈ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಹೇಳೋದೇನು?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
Follow us on

ಬೆಂಗಳೂರು: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅತಿ ವೇಗವಾಗಿ ವ್ಯಾಪಿಸುತ್ತಿದ್ದು, ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುವತ್ತ ಸಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶತಾಯುಗತಾಯ ಪ್ರಯತ್ನ ನಡೆಸುತ್ತಿವೆಯಾದರೂ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟಸಾಧ್ಯವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪರಿಹಾರಕ್ಕಾಗಿ ಬರೀ ವೈಜ್ಞಾನಿಕತೆಯನ್ನೇ ನಂಬಿಕೊಂಡು ಕುಳಿತರೆ ಆಗುವುದಿಲ್ಲ, ದೈವ ಶಕ್ತಿಯ ಮೊರೆ ಹೋಗುವುದೂ ಅಗತ್ಯ ಎಂದು ಹಲವು ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಆ ಪೈಕಿ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಸಹ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕಷ್ಟಕಾಲದಲ್ಲಿ ದೇಶದ ಪ್ರಧಾನ ಮಂತ್ರಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಮೊರೆ ಹೋಗಬೇಕು ಎಂದು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉತ್ತಮ ಹೆಸರಿದೆ. ಅಲ್ಲಿನ ಶಕ್ತಿಯ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಅದು ವ್ಯಾಪಾರೀಕರಣಕ್ಕಾಗಿ ಹುಟ್ಟಿಕೊಂಡ ಕ್ಷೇತ್ರವಲ್ಲ. ಒಂದು ದಟ್ಟ ಕಾಡಿನ ಭಾಗದಲ್ಲಿ ತಲೆಯಿತ್ತಿದ ನಿಜವಾದ ಪುಣ್ಯ ಕ್ಷೇತ್ರ. ಮೇಲಾಗಿ, ನಾವು ಸುಬ್ರಹ್ಮಣ್ಯನನ್ನು ಸೇನಾನಿ ರೂಪದಲ್ಲಿ ಕಾಣುತ್ತೇವೆ. ಕಷ್ಟಗಳು ಬಂದಾಗ ಆತನಿಗೆ ಮೊರೆ ಇಟ್ಟರೆ ಅದು ಪರಿಹರಿಸಲ್ಪಡುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಕೊರೊನಾ ದೇಶದೆಲ್ಲೆಡೆ ಇಷ್ಟು ವ್ಯಾಪಕವಾಗಿ ಪರಿಣಾಮ ಬೀರುತ್ತಿರುವಾಗ ನಾಡಿನ ಪ್ರಧಾನಮಂತ್ರಿಗಳು ಜನರ ಒಳಿತನ್ನು ಗಮನದಲ್ಲಿರಿಸಿಕೊಂಡು ಕುಕ್ಕೆಗೆ ಭೇಟಿ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

ಈ ಕುರಿತು ಪಕ್ಷದ ವರಿಷ್ಠರಿಗೆ ಆಗಾಗ ಹೇಳಿದ್ದೆ. ದೇಶದ ಪ್ರಧಾನ ಮಂತ್ರಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಬೇಕು ಎಂದು ತಿಳಿಸಿದ್ದೆ. ಅವರು ಇದನ್ನು ಕಡೆಗಣಿಸಿದರು. ಬಹುಶಃ ಯಾವುದೋ ಬಣ್ಣ ಬಳಿದುಕೊಂಡ ಗುರೂಜಿಗಳು ಹೇಳಿದ್ದರೆ ತೂಕ ಇರುತ್ತಿತ್ತು. ನಾನು ಪೂರ್ವ ಪ್ರತೀತಿಯ ಆಧಾರದಲ್ಲಿ ಹೇಳಿದ್ದು. ರೋಗ ನಿರೋಧಕ ಶಕ್ತಿ ಇರುವುದೇ ಈ ಸೇನಾನಿ ಸುಬ್ರಹ್ಮಣ್ಯನಲ್ಲಿ ಮಾತ್ರ. ಯಾವುದೋ ಲಾಭ, ಕಾಟಾಚಾರಕ್ಕೆ ಅಲ್ಲಿ ಸುಬ್ರಹ್ಮಣ್ಯನ ಸಾನ್ನಿಧ್ಯ ಸೃಷ್ಟಿ ಆಗಲಿಲ್ಲ. ಇವರೆಲ್ಲ ಲಾಬಿ ಮಾಡಲು ಪ್ರಧಾನ ಮಂತ್ರಿಯವರ ಭೇಟಿ ಮಾಡುತ್ತಾರೆಯೇ ವಿನಃ ಇಂತಹ ಭಾವನಾತ್ಮಕ, ಪಾರಮಾರ್ಥಿಕ ವಿಚಾರದಲ್ಲಿ ಭೇಟಿ ಮಾಡ್ತಿಲ್ಲ. ಸುಮಾರು ಲೇಖನಗಳನ್ನು ಅನೇಕ ಸಲ ಬರೆದಿದ್ದೆ. ಊಹೂಂ ಇವರಿಗೆ ಅರ್ಥ ಆಗಲ್ಲ. ಇರಲಿ ಬಿಡಿ, ನಮಗೇನು? ಇದನ್ನೆಲ್ಲಾ ಹೇಳುವುದು ನಮ್ಮ ಧರ್ಮ. ಕೇಳುವುದು ಬಿಡುವುದು ಅವರ ಇಷ್ಟ. ದೇಶದ ಸ್ವಾಸ್ಥ್ಯಕ್ಕಾಗಿ ಹೇಳಿದ್ದೇನೆ. ಈ ಕಡೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದಲ್ಲಿ ಮತ ಸಂಪ್ರದಾಯ ವಿಚಾರದಲ್ಲಿ ಕಲಹ ಆಗುತ್ತದೆಯೇ ವಿನಃ ಇನ್ನೇನೂ ಇಲ್ಲ. ಎಲ್ಲವೂ ದೈವ ಚಿತ್ತಕ್ಕೆ ಬಿಟ್ಟದ್ದು. ಇನ್ನೊಮ್ಮೆ ನಾನು ಈ ವಿಚಾರದಲ್ಲಿ ಬರೆಯೋದಿಲ್ಲ ಬಿಡಿ ಎಂದು ತಮ್ಮ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಅವರನ್ನೇ ಕೇಳಿದಾಗಲೂ ನಾನು ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ದೇಶ ಇಷ್ಟೆಲ್ಲಾ ಕಷ್ಟ ಎದುರಿಸುತ್ತಿರುವಾಗ ಪ್ರಧಾನಿ ಹುದ್ದೆಯಲ್ಲಿದ್ದವರು ಒಳ್ಳೆಯದಾಗುತ್ತದೆ ಎಂದಾಗ ಇದನ್ನು ಭಕ್ತಿಯಿಂದ ಮಾಡಬೇಕು. ಇದರಲ್ಲಿ ಮತ್ತೆ ಧರ್ಮ, ಪಂಗಡ ತರುವುದು ಬೇಕಾಗಿಲ್ಲ. ನಮ್ಮಲ್ಲಿ ನಂಬಿಕೆಗಿಂತ ದೊಡ್ಡದು ಯಾವುದೂ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಟ್ಟರೂ ಸಾಕು. ಭಾರತದಲ್ಲಿ ಬೇರೆ ಬೇರೆ ಕಡೆ ಸುಬ್ರಹ್ಮಣ್ಯ ದೇಗುಲಗಳು ಇರಬಹುದು ಆದರೆ ಕುಕ್ಕೆಯ ಸುಬ್ರಹ್ಮಣ್ಯನಿಗೆ ಇರುವ ಶಕ್ತಿ, ಪ್ರಭಾವ ವಿಶಿಷ್ಟವಾದದ್ದು. ಹೀಗಾಗಿ ಪ್ರಧಾನಿ ಇಲ್ಲಿಗೆ ಬಂದು ಬೇಡಿಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
ಕುಕ್ಕೆಯಲ್ಲಿ ಶೈವ-ವೈಷ್ಣವ ಪೂಜಾ ವಿವಾದ: ಇದು ಹಿಂದೂ ಏಕತೆಯ ವಿಚಾರವೆಂದ ಹಿತರಕ್ಷಣಾ ವೇದಿಕೆ..! 

ಕೊರೊನಾ ಲಕ್ಷಣ ಕಾಣಿಸಿಕೊಂಡ ಕೂಡ್ಲೇ ವೈದ್ಯರನ್ನ ಸಂಪರ್ಕ ಮಾಡಿ ಟ್ರೀಟ್ಮೆಂಟ್ ತಗೋಳ್ಳಿ