
ಪುರಿ ಜಗನ್ನಾಥ ದೇವಸ್ಥಾನಕ್ಕೆ ಸಂಬಂಧಿಸಿದ ಜಾನಪದ ಕಥೆಗಳ ಪ್ರಕಾರ, ಅವಿವಾಹಿತ ಜೋಡಿ ಒಟ್ಟಿಗೆ ದೇವಾಲಯದ ಗರ್ಭಗುಡಿಗೆ ಭೇಟಿ ನೀಡಬಾರದು ಎಂಬ ವಿಶಿಷ್ಟ ನಂಬಿಕೆಯಿದೆ. ಒಂದು ವೇಳೆ ಅವಿವಾಹಿತ ಜೋಡಿ ಒಟ್ಟಿಗೆ ಜಗನ್ನಾಥ ಸ್ವಾಮಿಯ ದರ್ಶನ ಪಡೆದರೆ, ಅದು ಅವರ ಪ್ರೇಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು ಅಥವಾ ಅವರ ಮದುವೆಗೆ ದೊಡ್ಡ ಅಡೆತಡೆಗಳನ್ನು ತಂದೊಡ್ಡಬಹುದು ಎಂದು ನಂಬಲಾಗಿದೆ. ಈ ನಂಬಿಕೆಯು ತಲೆಮಾರುಗಳಿಂದ ಸ್ಥಳೀಯರಲ್ಲಿ ಪ್ರಚಲಿತದಲ್ಲಿದ್ದು, ಇಂದಿಗೂ ಅನೇಕ ಅವಿವಾಹಿತ ದಂಪತಿಗಳು ಈ ಸಂಪ್ರದಾಯವನ್ನು ಗೌರವಿಸಿ, ಪ್ರತ್ಯೇಕವಾಗಿಯೇ ದೇವಸ್ಥಾನದೊಳಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ.
ಈ ಜಾನಪದ ಕಥೆಯು ತಾಯಿ ರಾಧಾ ರಾಣಿಯ ಶಾಪಕ್ಕೆ ಸಂಬಂಧಿಸಿದೆ ಎಂದು ದಂತಕಥೆಗಳು ಹೇಳುತ್ತವೆ. ಪುರಾಣಗಳ ಪ್ರಕಾರ, ರಾಧಾ ರಾಣಿಯು ಒಮ್ಮೆ ಪುರಿಯಲ್ಲಿರುವ ಶ್ರೀಕೃಷ್ಣನನ್ನು (ಜಗನ್ನಾಥ) ಭೇಟಿ ಮಾಡಲು ಬಂದಿದ್ದಳು. ಆದರೆ ದೇವಾಲಯದ ಪುರೋಹಿತರು ಅವಳನ್ನು ಒಳಗೆ ಪ್ರವೇಶಿಸದಂತೆ ತಡೆದು, ಭಗವಂತ ಮತ್ತು ಅವನ ಪತ್ನಿಗೆ ಮಾತ್ರ ಒಳಗೆ ಹೋಗಲು ಅವಕಾಶವಿದೆ ಎಂದು ಹೇಳಿದರು. ಇದರಿಂದ ತೀವ್ರವಾಗಿ ನೊಂದ ರಾಧಾ, ಈ ದೇವಾಲಯವನ್ನು ಒಟ್ಟಿಗೆ ಪ್ರವೇಶಿಸುವ ಯಾವುದೇ ಅವಿವಾಹಿತ ಜೋಡಿ ಎಂದಿಗೂ ಒಂದಾಗಲ್ಲ ಎಂದು ಶಾಪ ನೀಡಿದಳು. ಈ ಶಾಪದ ಭೀತಿಯಿಂದಾಗಿ ಇಂದಿಗೂ ಭಕ್ತರು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಈ ನಂಬಿಕೆಯು ಕೇವಲ ಜಾನಪದ ಕಥೆಯಾಗಿದ್ದು, ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು ಅವಿವಾಹಿತ ದಂಪತಿಗಳು ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಯಾವುದೇ ಕಾನೂನು ಅಥವಾ ಅಧಿಕೃತ ನಿರ್ಬಂಧಗಳನ್ನು ವಿಧಿಸಿಲ್ಲ. ದೇವಾಲಯದ ನಿಯಮಾವಳಿಗಳಲ್ಲಿ ಪ್ರೇಮಿಗಳು ಒಟ್ಟಿಗೆ ಪ್ರವೇಶಿಸಬಾರದು ಎಂಬ ಯಾವುದೇ ಷರತ್ತುಗಳಿಲ್ಲ. ಇದು ಸಂಪೂರ್ಣವಾಗಿ ಭಕ್ತರ ವೈಯಕ್ತಿಕ ನಂಬಿಕೆಯ ವಿಷಯವಾಗಿದ್ದು, ನಂಬುವವರು ಇದನ್ನು ಪಾಲಿಸಿದರೆ, ಇನ್ನುಳಿದ ಅನೇಕ ಭಕ್ತರು ಸಾಮಾನ್ಯವಾಗಿ ಒಟ್ಟಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
ಜಗನ್ನಾಥ ದೇವರ ರಥಯಾತ್ರೆಯನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಒಂಬತ್ತು ದಿನಗಳ ಮೆರವಣಿಗೆಯ ಸಮಯದಲ್ಲಿ, ಜಗನ್ನಾಥ ದೇವರು, ಅವರ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರಾ ದೇವಿ ಭವ್ಯವಾದ ರಥಗಳನ್ನೇರಿ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ಅದ್ಭುತ ಮತ್ತು ದೈವಿಕ ಪ್ರಯಾಣವನ್ನು ಕಣ್ಣುತುಂಬಿಕೊಳ್ಳಲು ಭಾರತದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಆಗಮಿಸುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ