Right Hand Blessings: ಬಲಗೈಯಿಂದಲೇ ಏಕೆ ಆಶೀರ್ವಾದ ಮಾಡಬೇಕು? ಜ್ಯೋತಿಶಾಸ್ತ್ರಜ್ಞರು ಹೇಳುವುದೇನು?
ಸನಾತನ ಹಿಂದೂ ಸಂಸ್ಕೃತಿಯಲ್ಲಿ ಹಿರಿಯರು ಬಲಗೈಯಿಂದ ಆಶೀರ್ವಾದ ಮಾಡುವ ಪದ್ಧತಿ ಇದೆ. ದೇಹದ ಬಲಭಾಗವು ಸೂರ್ಯ ಭಾಗಕ್ಕೆ ಸಂಬಂಧಿಸಿದ್ದು, ಇದು ಪಿಂಗಳ ನಾಡಿಯನ್ನು ನಿಯಂತ್ರಿಸುತ್ತದೆ. ಬಲಗೈ ಆಶೀರ್ವಾದವು ಸಕಾರಾತ್ಮಕ ಶಕ್ತಿ, ಸೌರ ಅಂಶ ಮತ್ತು ಶುಭವನ್ನು ತರುತ್ತದೆ. ಇದು ವ್ಯಕ್ತಿಯ ಸಂಕಷ್ಟಗಳನ್ನು ನಿವಾರಿಸಿ, ಕಾರ್ಯಗಳಲ್ಲಿ ಯಶಸ್ಸು ತರಲು ಸಹಕಾರಿ ಎಂದು ಹೇಳಲಾಗುತ್ತದೆ.

ಸನಾತನ ಹಿಂದೂ ಸಂಸ್ಕೃತಿಯಲ್ಲಿ ನಮಸ್ಕಾರ ಹಾಗೂ ಆಶೀರ್ವಾದಕ್ಕೆ ವಿಶೇಷ ಮಹತ್ವವಿದೆ. ಗುರುಗಳಿಗೆ, ಹಿರಿಯರಿಗೆ ಮತ್ತು ಸ್ವಾಮಿಗಳಿಗೆ ನಮಸ್ಕರಿಸುವುದು ವಿನಯದ ಸಂಕೇತವಾಗಿದ್ದು, ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ನಮಸ್ಕಾರ ಮಾಡಿದಾಗ, ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪೂರ್ಣ ಆಶೀರ್ವಾದದಿಂದ ನಮ್ಮ ಕೆಲಸ ಕಾರ್ಯಗಳು ಮತ್ತು ನಿತ್ಯ ಜೀವನದ ಅಡ್ಡಿ ಆತಂಕಗಳು ನಿವಾರಣೆಯಾಗಿ, ಸುಭಿಕ್ಷವಾಗಿ ಎಲ್ಲಾ ಕಾರ್ಯಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಈ ಆಶೀರ್ವಾದವನ್ನು ಸಾಮಾನ್ಯವಾಗಿ ಬಲಗೈಯಿಂದಲೇ ಏಕೆ ನೀಡಬೇಕು ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ.
ಗುರೂಜಿಯವರು ಹೇಳುವಂತೆ, ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಿದಾಗ, ಬಲಭಾಗವನ್ನು ಸೂರ್ಯ ಭಾಗ ಎಂದೂ, ಎಡಭಾಗವನ್ನು ಚಂದ್ರ ಭಾಗ ಅಥವಾ ವಾಮ ಭಾಗ ಎಂದೂ ಗುರುತಿಸಲಾಗುತ್ತದೆ. ಬಲಗೈ ಸೂರ್ಯ ಭಾಗಕ್ಕೆ ಸೇರಿದೆ. ಆಶೀರ್ವಾದ ನೀಡುವಾಗ ಬಲಗೈಯನ್ನು ಬಳಸುವುದರಿಂದ ಅನೇಕ ಧನಾತ್ಮಕ ಅಂಶಗಳು ಜತೆಯಾಗುತ್ತವೆ.
ಬಲಗೈಗೆ ನಮ್ಮ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ಊಟ ಮಾಡುವುದು, ದೇವರಿಗೆ ಪುಷ್ಪಗಳನ್ನು ಅರ್ಪಿಸುವುದು, ವಿಭೂತಿ ಅಥವಾ ಕುಂಕುಮ ಧರಿಸುವುದು, ದೇವರಿಗೆ ಆರತಿ ಮಾಡುವುದು ಮುಂತಾದ ಶುಭ ಕಾರ್ಯಗಳಿಗೆ ಬಲಗೈಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲದೆ, ಆಳವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಆಯಾಮಗಳನ್ನು ಹೊಂದಿದೆ.
ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!
ನಮ್ಮ ದೇಹದಲ್ಲಿ ಇಡಾ ಮತ್ತು ಪಿಂಗಳ ಎಂಬ ಸೂಕ್ಷ್ಮ ನಾಡಿಗಳಿವೆ. ಇವುಗಳಲ್ಲಿ ಪಿಂಗಳ ನಾಡಿಯು ದೇಹದ ಬಲಭಾಗಕ್ಕೆ ಸಂಪರ್ಕ ಹೊಂದಿದೆ. ಮೆದುಳಿನ ಎಡಭಾಗವು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ, ಹಾಗೆಯೇ ಮೆದುಳಿನ ಬಲಭಾಗವು ದೇಹದ ಎಡಭಾಗವನ್ನು ನಿಯಂತ್ರಿಸುತ್ತದೆ. ಬಲಗೈಯಿಂದ ಮಾಡುವ ಯಾವುದೇ ಕಾರ್ಯವು ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಬಲಗೈಯಿಂದ ಆಶೀರ್ವಾದ ಮಾಡುವಾಗ, ಆಶೀರ್ವಾದ ಮಾಡುವ ವ್ಯಕ್ತಿಗೂ ಒಂದು ಬಲ (ಶಕ್ತಿ) ದೊರೆಯುತ್ತದೆ ಮತ್ತು ಆಶೀರ್ವಾದ ಪಡೆಯುವವರಿಗೂ ಶುಭ ಉಂಟಾಗುತ್ತದೆ.
ಕೆಲವೊಮ್ಮೆ ಬಲಗೈ ಇಲ್ಲದವರು ಅಥವಾ ಅದನ್ನು ಕಳೆದುಕೊಂಡವರು ಆಶೀರ್ವಾದ ನೀಡಬೇಕಾದ ಪರಿಸ್ಥಿತಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಎಡಗೈಯಿಂದ ಆಶೀರ್ವಾದ ಮಾಡಿದರೂ ಅದು ಬಲಗೈಯಿಂದ ಮಾಡಿದ ಆಶೀರ್ವಾದದ ಫಲವನ್ನೇ ನೀಡುತ್ತದೆ. ಏಕೆಂದರೆ, ಒಂದು ಕೈಯಲ್ಲಿ ಎರಡೂ ಕೈಗಳ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಆದರೆ ಎರಡೂ ಕೈಗಳು ಸರಿ ಇದ್ದಾಗ ಬಲಗೈಯನ್ನು ಬಳಸುವುದು ಹೆಚ್ಚು ಸೂಕ್ತ. ಬಲಗೈ ಆಶೀರ್ವಾದವು ಸೂರ್ಯನ ಅಂಶವನ್ನು ಮತ್ತು ಶಕ್ತಿಯನ್ನು ಪಡೆಯಲು ಸಹಕಾರಿಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sat, 28 February 26
