
ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ವಿಶೇಷವಾದ ಪ್ರಾಮುಖ್ಯತೆಯಿದೆ. ಸಾಮಾನ್ಯವಾಗಿ ಮನೆಯ ಪೂಜಾ ಮಂದಿರಗಳಲ್ಲಿ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸುವುದನ್ನು ಕಾಣುತ್ತೇವೆ. ಆದರೆ, ದೇವರಿಗೆ ಅಭಿಷೇಕ ಮಾಡುವುದು, ನೈವೇದ್ಯ ಮತ್ತು ಪಂಚಾಮೃತ ಅರ್ಪಿಸಲು ಬೆಳ್ಳಿ ಪಾತ್ರೆಗಳಿಗೆ ಪ್ರತ್ಯೇಕ ಸ್ಥಾನ ನೀಡಲಾಗುತ್ತದೆ. ಪೂಜಾ ವಿಧಿವಿಧಾನಗಳಲ್ಲಿ ಬೆಳ್ಳಿಯನ್ನು ಅಷ್ಟು ಪವಿತ್ರ ಲೋಹವೆಂದು ಪರಿಗಣಿಸಲು ಕೆಲವು ಜ್ಯೋತಿಷ್ಯ, ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಂದ್ರ ಗ್ರಹದೊಂದಿಗೆ ನೇರ ಸಂಬಂಧ ಹೊಂದಿದೆ. ಚಂದ್ರನನ್ನು ಮನಸ್ಸು, ಶಾಂತಿ ಮತ್ತು ಸೌಮ್ಯತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿ ಪಾತ್ರೆಗಳಲ್ಲಿ ದೇವರಿಗೆ ನೀರು ಅಥವಾ ನೈವೇದ್ಯವನ್ನು ಅರ್ಪಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಸಕಾರಾತ್ಮಕ ಭಾವನೆಗಳು ಸಿಗುತ್ತವೆ ಎಂಬ ನಂಬಿಕೆಯಿದೆ.
ಪೂಜೆಯ ಸಮಯದಲ್ಲಿ ವಿವಿಧ ಕಾರ್ಯಗಳಿಗೆ ಬೆಳ್ಳಿಯ ವಸ್ತುಗಳನ್ನು ಬಳಸಲಾಗುತ್ತದೆ. ನೈವೇದ್ಯ ಹಾಗೂ ಪಂಚಾಮೃತಕ್ಕೆ ಬೆಳ್ಳಿಯ ಬಟ್ಟಲುಗಳನ್ನು, ಅಭಿಷೇಕಕ್ಕೆ ಬೆಳ್ಳಿಯ ಚೆಂಬು ಮತ್ತು ಪವಿತ್ರ ನೀರನ್ನು ಹಿಡಿದಿಡಲು ಬೆಳ್ಳಿಯ ಪಾತ್ರೆಗಳನ್ನು ಉಪಯೋಗಿಸುತ್ತಾರೆ. ಆಚಮನಕ್ಕೆ ಬೆಳ್ಳಿಯ ಪಂಚಪತ್ರೆ-ಉದ್ಧರಣೆ, ಪೂಜೆಯ ಆರತಿಗೆ ಬೆಳ್ಳಿಯ ದೀಪಗಳು ಹಾಗೂ ಅರಿಶಿನ, ಕುಂಕುಮ, ಶ್ರೀಗಂಧ ಮತ್ತು ಅಕ್ಷತೆಗೆ ಸಣ್ಣ ಬೆಳ್ಳಿಯ ತಟ್ಟೆಗಳನ್ನು ಬಳಸುವುದು ಸಾಂಪ್ರದಾಯಿಕ ಪದ್ಧತಿಯಾಗಿದೆ.
ಹಿಂದೂ ಪುರಾಣಗಳ ಪ್ರಕಾರ ಬೆಳ್ಳಿಯನ್ನು ಅಷ್ಟಲಕ್ಷ್ಮಿಯ ರೂಪವೆಂದು ಭಾವಿಸಲಾಗುತ್ತದೆ. ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಈ ಲೋಹವನ್ನು ಪೂಜೆಯಲ್ಲಿ ಬಳಸುವುದರಿಂದ ಮನೆಗೆ ಐಶ್ವರ್ಯ, ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿ ಒಲಿದುಬರುತ್ತದೆ ಎಂಬ ಐತಿಹ್ಯವಿದೆ. ಬೆಳ್ಳಿಯು ಪವಿತ್ರತೆ ಮತ್ತು ಪರಿಶುದ್ಧತೆಯ ಸಂಕೇತವೂ ಹೌದು.
ಇದನ್ನೂ ಓದಿ: ಜಪಾನ್ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಬೆಳ್ಳಿಯು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ (Antibacterial) ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಬೆಳ್ಳಿ ಪಾತ್ರೆಗಳಲ್ಲಿ ಸಂಗ್ರಹಿಸಿಡುವ ನೀರು, ಹಾಲು ಅಥವಾ ಪ್ರಸಾದವು ಸೂಕ್ಷ್ಮಜೀವಿಗಳಿಂದ ಮುಕ್ತವಾಗಿ, ದೀರ್ಘಕಾಲದವರೆಗೆ ಕೆಡದಂತೆ ಶುದ್ಧ ಹಾಗೂ ತಾಜಾವಾಗಿರುತ್ತದೆ.
ಪೂಜಾ ಪದ್ಧತಿಗಳು ಪ್ರದೇಶ, ಕುಟುಂಬದ ಸಂಪ್ರದಾಯ ಮತ್ತು ಪದ್ಧತಿಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಹೀಗಾಗಿ ಪೂಜೆಯಲ್ಲಿ ಬೆಳ್ಳಿ ಪಾತ್ರೆಗಳನ್ನೇ ಬಳಸಬೇಕು ಎಂಬ ಕಡ್ಡಾಯ ನಿಯಮವೇನೂ ಇಲ್ಲ. ಬೆಳ್ಳಿಯ ಪಾತ್ರೆಗಳಿಗಿಂತ ಭಕ್ತಿ ಮತ್ತು ನಿಷ್ಠೆಯಿಂದ ಮಾಡುವ ಪೂಜೆಗೆ ಮೊದಲ ಆದ್ಯತೆ ನೀಡುವುದು ಮುಖ್ಯ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ