
ಸನಾತನ ಧರ್ಮದಲ್ಲಿ ಅರಿಶಿನ ಕೊಂಬಿನ ಮಹತ್ವ ಅಪಾರ. ಇದು ಕೇವಲ ಒಂದು ಪೂಜಾ ಸಾಮಾಗ್ರಿಯಲ್ಲ, ಬದಲಾಗಿ ಇದು ಒಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರತೀಕ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅರಶಿನ ಕೊಂಬಿನ ಮಹತ್ವವನ್ನು ವಿವರಿಸಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ, ಯಾವುದೇ ಶುಭಕಾರ್ಯಕ್ಕೆ ಅರಿಶಿನ ಅಥವಾ ಅರಿಶಿನ ಕುಂಕುಮವನ್ನು ಮೊದಲು ಬಳಸುವುದು ವಾಡಿಕೆ. ಅರಿಶಿನ ಕೊಂಬಿನ ಮಹತ್ವವನ್ನು ಎಲ್ಲರಿಗೂ ತಿಳಿದಿಲ್ಲ. ಅನೇಕರು ಪೂಜೆಯ ಸಮಯದಲ್ಲಿ ಮಾತ್ರ ಅದನ್ನು ಜ್ಞಾಪಿಸಿಕೊಳ್ಳುತ್ತಾರೆ. ಆದರೆ, ಅರಿಶಿನ ಕೊಂಬು ಮನುಷ್ಯನ ಮನಸ್ಸನ್ನು ಜಾಗೃತಗೊಳಿಸುತ್ತದೆ, ದುಷ್ಟಶಕ್ತಿಗಳನ್ನು ಹೋಗಲಾಡಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ಪ್ರತಿ ಪೂಜೆಯಲ್ಲಿಯೂ ಅರಿಶಿನ ಕೊಂಬನ್ನು ಬಳಸುವುದು ವಾಡಿಕೆ. ತಾಳಿ ಇಲ್ಲದಿದ್ದರೂ ಸಹ, ಅರಿಶಿನ ಕೊಂಬು ಇರಬೇಕು ಎಂದು ಹೇಳಲಾಗುತ್ತದೆ. ಹಳೆಯ ಕಾಲದಲ್ಲಿ, ಬಡತನದ ಸಮಯದಲ್ಲಿ, ಬಂಗಾರದ ತಾಳಿಗೆ ಬದಲಾಗಿ ಅರಿಶಿನ ಕೊಂಬನ್ನು ಧರಿಸುವುದು ವಾಡಿಕೆಯಾಗಿತ್ತು. ಮದುವೆಗಳಲ್ಲಿ ಅರಿಶಿನ ಕೊಂಬಿನ ಬಳಕೆ ಅತ್ಯಂತ ಮುಖ್ಯ. ವರ ಮತ್ತು ವಧುವಿಗೆ ಅರಿಶಿನ ಸ್ನಾನ ಮಾಡಿಸುವುದು, ಅರಿಶಿನ ಶಾಸ್ತ್ರದ ಒಂದು ಅಂಗವಾಗಿದೆ. ಈ ಅರಿಶಿನ ಶಾಸ್ತ್ರದ ನಂತರ, ಮದುವೆಯನ್ನು ಮುಂದೂಡಲು ಸಾಧ್ಯವಿಲ್ಲ. ಆದ್ದರಿಂದ, ಅರಿಶಿನ ಕೊಂಬು ಕೇವಲ ಪೂಜೆಗೆ ಮಾತ್ರ ಸೀಮಿತವಾಗಿಲ್ಲ.
ಇದನ್ನೂ ಓದಿ: ಪಿತೃ ಪಕ್ಷದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು?
ಅರಿಶಿನ ಕೊಂಬಿನ ಮೂಲವನ್ನು ತ್ರಿಪುರಾಸುರ ವಧೆಯ ಕಥೆಯೊಂದಿಗೆ ಸಂಬಂಧಿಸಲಾಗಿದೆ. ತ್ರಿಪುರಾಸುರನನ್ನು ಸಂಹಾರ ಮಾಡಲು ಶಿವನಿಗೆ ನಂದೀಶ್ವರನ ಸಹಾಯ ಬೇಕಾಯಿತು. ನಂದೀಶ್ವರನ ಕೊಂಬು ಭೂಮಿಯ ಮೇಲೆ ಬಿದ್ದಾಗ, ಅದನ್ನು ಗಣಪತಿ ತಂದು ಪೂಜೆ ಮಾಡಿದನು. ಅಂದಿನಿಂದ ಅರಿಶಿನ ಕೊಂಬು ಗಣಪತಿಯ ಪ್ರತೀಕವಾಗಿದೆ. ಮನೆಯಲ್ಲಿ ಅರಿಶಿನ ಕೊಂಬನ್ನು ದಿಂಬಿನ ಕೆಳಗೆ, ಹಣದ ಪೆಟ್ಟಿಗೆಯಲ್ಲಿ ಅಥವಾ ಗಲ್ಲದಲ್ಲಿ ಇಡುವುದು ಶುಭವೆಂದು ನಂಬಲಾಗುತ್ತದೆ. ವಾಹನದಲ್ಲಿ ಅಥವಾ ಯಾತ್ರೆಯಲ್ಲಿ ಅರಿಶಿನ ಕೊಂಬನ್ನು ಇಟ್ಟುಕೊಳ್ಳುವುದರಿಂದ ಸುರಕ್ಷತೆ ದೊರೆಯುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ