AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaikuntha Ekadashi: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ವೈಕುಂಠ ಏಕಾದಶಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ದಿನ. ಈ ದಿನ ವಿಷ್ಣುವಿನ ದರ್ಶನದಿಂದ ಪುನರ್ಜನ್ಮದಿಂದ ಮುಕ್ತಿ, ಪಾಪಗಳ ನಿವಾರಣೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. 33 ಕೋಟಿ ದೇವತೆಗಳ ಅನುಗ್ರಹವೂ ದೊರೆಯುತ್ತದೆ. ಉಪವಾಸ, ವಿಷ್ಣು ಸಹಸ್ರನಾಮ ಜಪ ಹಾಗೂ ತುಳಸಿ ಅರ್ಪಣೆ ಈ ದಿನದ ಪ್ರಮುಖ ಆಚರಣೆಗಳಾಗಿವೆ.

Vaikuntha Ekadashi: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ
ವೈಕುಂಠ ಏಕಾದಶಿ
ಅಕ್ಷತಾ ವರ್ಕಾಡಿ
|

Updated on: Dec 30, 2025 | 9:52 AM

Share

ವೈಕುಂಠ ಏಕಾದಶಿಯ ಫಲ ಹಾಗೂ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಹಿಂದೂ ಧರ್ಮದಲ್ಲಿ ಆಚರಿಸಲಾಗುವ 24 ಏಕಾದಶಿಗಳಲ್ಲಿ, ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿಯು ಅತಿ ಹೆಚ್ಚು ಪ್ರಾಶಸ್ತ್ಯ ಮತ್ತು ಮಹತ್ವವನ್ನು ಪಡೆದಿದೆ. ವರ್ಷಕ್ಕೊಮ್ಮೆ ಬರುವ ಈ ಪವಿತ್ರ ದಿನವು ಸಾಕ್ಷಾತ್ ನಾರಾಯಣನ ಕೃಪೆಗೆ ಪಾತ್ರರಾಗಲು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಅಪೂರ್ವ ಅವಕಾಶವನ್ನು ಒದಗಿಸುತ್ತದೆ.

ವೈಕುಂಠ ಏಕಾದಶಿಯಂದು ದೇವತೆಗಳ ದರ್ಶನ:

ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯಲಾಗುತ್ತದೆ. ಮುಕ್ಕೋಟಿ ಎಂದರೆ 33 ಕೋಟಿ. ಈ ದಿನ 33 ಕೋಟಿ ದೇವತೆಗಳು ವಿಷ್ಣುವನ್ನು ದರ್ಶನ ಮಾಡಲು ವೈಕುಂಠಕ್ಕೆ ಆಗಮಿಸುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ, ಭಕ್ತರು ಈ ದಿನ ವಿಷ್ಣುವಿನ ದರ್ಶನ ಮಾಡುವುದರಿಂದ ಸಾಕ್ಷಾತ್ ವಿಷ್ಣುವಿನ ಜೊತೆಗೆ ಈ 33 ಕೋಟಿ ದೇವತೆಗಳ ಅನುಗ್ರಹವನ್ನೂ ಪಡೆಯುವ ಏಕೈಕ ದಿನವಾಗಿದೆ. ವಿಷ್ಣುವಿನ ದರ್ಶನದಿಂದ ಪುನರ್ಜನ್ಮ ಇಲ್ಲವಾಗುತ್ತದೆ ಅಥವಾ ಮೋಕ್ಷಕ್ಕೆ ದಾರಿಯಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಮಾನವನ 11 ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಿಂದ ಆದ ಪಾಪಗಳು ಈ ಒಂದು ದಿನದ ಆಚರಣೆಯಿಂದ ನಿವಾರಣೆಯಾಗುತ್ತವೆ.

ಪೌರಾಣಿಕ ಹಿನ್ನೆಲೆ:

ಶಾಸ್ತ್ರಗಳ ಪ್ರಕಾರ, ವೈಕುಂಠ ಏಕಾದಶಿಯ ದಿನದಂದು ಕ್ಷೀರಸಾಗರ ಮಂಥನದಿಂದ ಅಮೃತವು ಉದ್ಭವಿಸಿತು. ಅಲ್ಲದೆ, ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯ ಉಪದೇಶವನ್ನು ಮಾಡಿದ ಪವಿತ್ರ ದಿನವೂ ಇದೇ ಆಗಿದೆ. ಈ ಕಾರಣಗಳಿಂದ ಈ ದಿನಕ್ಕೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ.

ವೈಕುಂಠ ಏಕಾದಶಿಯ ಆಚರಣೆಗಳು:

ವೈಕುಂಠ ಏಕಾದಶಿಯ ಆಚರಣೆಯಲ್ಲಿ ಉಪವಾಸ ವ್ರತವು ಅತ್ಯಂತ ಪ್ರಮುಖವಾಗಿದೆ. ಈ ದಿನ ರಜೋ ಆಹಾರ ಮತ್ತು ತಮೋ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಮತ್ತು ಮದ್ಯಪಾನವನ್ನು ಸೇವಿಸಬಾರದು. ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನು ಸೇವಿಸುವುದಕ್ಕೆ ನಿಷಿದ್ಧವಿದೆ. ರೋಗಿಗಳು, ವೃದ್ಧರು ಮತ್ತು ಅಶಕ್ತರು ಮಾತ್ರ ಅವಲಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಬಹುದು. ಉಪವಾಸ ಮಾಡುವಾಗ ಒಳ್ಳೆಯ ಮಾತುಗಳನ್ನು ಆಡಿಕೊಳ್ಳಬೇಕು.

ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಬೇಕು. ನಂತರ ಓಂ ನಮೋ ನಾರಾಯಣಾಯ ಎಂಬ ಮಂತ್ರವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಜಪಿಸಬೇಕು. ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ, ಭಗವಾನ್ ವಿಷ್ಣುವಿಗೆ ತುಳಸಿ ಮಾಲೆ ಹಾಗೂ ತುಳಸಿ ಅರ್ಚನೆ ಮಾಡುವುದು ಶ್ರೇಷ್ಠ. ವಿಷ್ಣು ಸಹಸ್ರನಾಮ ಮತ್ತು ಶ್ರೀಮನ್ನಾರಾಯಣನ ಅಷ್ಟೋತ್ತರಗಳನ್ನು ಪಠಿಸುವುದು ಶುಭಕರ.

ತಿರುಪತಿ ವೆಂಕಟೇಶ್ವರನ ದರ್ಶನ:

ಈ ದಿನ ಸಾಕ್ಷಾತ್ ವೆಂಕಟೇಶ್ವರನ ದರ್ಶನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ತಿರುಪತಿಯಲ್ಲಿ ಈ ಮುಕ್ಕೋಟಿ ಏಕಾದಶಿಯಿಂದ 21 ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತವೆ. ನಿಮ್ಮ ಹಳ್ಳಿಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ವಿಷ್ಣುವಿನ ಅಂಶವಿರುವ ದೇವಾಲಯಗಳಿದ್ದರೆ, ಅಲ್ಲಿಗೆ ಭೇಟಿ ನೀಡಿ ಉತ್ತರ ದ್ವಾರದ ಮೂಲಕ ವಿಷ್ಣುವನ್ನು ದರ್ಶಿಸುವುದು ಅತ್ಯಂತ ಶುಭ. ಉತ್ತರ ದ್ವಾರದ ವ್ಯವಸ್ಥೆ ಇಲ್ಲದಿದ್ದರೂ, ವಿಷ್ಣುವಿನ ದರ್ಶನಕ್ಕೆ ಈ ದಿನ ಬಹಳ ಶ್ರೇಷ್ಠವಾಗಿದೆ.

ಆಧ್ಯಾತ್ಮಿಕ ಫಲಗಳು:

ಅಶ್ವಮೇಧ ಸಹಸ್ರಾಣಿ ವಾಜಪೇಯಾಯುತಾನಿಚ. ಏಕಾದಶೋ ಉಪವಾಸಸ್ಯ ಕಲಂ ನಾರಹಂತಿ ಷೋಡಶಿ. ಎಂಬ ಶ್ಲೋಕದ ಪ್ರಕಾರ, ವೈಕುಂಠ ಏಕಾದಶಿಯಂದು ಉಪವಾಸ ಮತ್ತು ವಿಷ್ಣು ದರ್ಶನ ಮಾಡುವುದರಿಂದ ಸಾವಿರಾರು ಅಶ್ವಮೇಧ ಯಾಗ ಮತ್ತು ವಾಜಪೇಯ ಯಾಗಗಳನ್ನು ಮಾಡಿದಷ್ಟು ಫಲ ಪ್ರಾಪ್ತಿಯಾಗುತ್ತದೆ. ಇದು ರೋಗರುಜಿನಗಳಿಂದ ಕೂಡಿದ ದೇಹ ಮತ್ತು ಕಷ್ಟಗಳಿಂದ ಕೂಡಿದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತರುತ್ತದೆ. ಈ ದಿನದಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರೆ, ದೈವಾನುಗ್ರಹಕ್ಕೆ ಪಾತ್ರರಾಗಿ, ಜೀವನದಲ್ಲಿ ಸುಖ, ಸಮೃದ್ಧಿ ಹಾಗೂ ಮೋಕ್ಷವನ್ನು ಪಡೆಯಬಹುದು. ಮಾರನೆಯ ದಿನ, ಮುಕ್ಕೋಟಿ ದ್ವಾದಶಿಯಂದು ಉಪವಾಸ ಪಾರಣ ಮಾಡಲಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ