ಮಾನವನ ನಿಜವಾದ ಶತ್ರು ಯಾರು? ಈ ಕುರಿತಾಗಿ ಕೌಸಲ್ಯೆ ಹೇಳಿದ್ದೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 14, 2023 | 12:57 PM

ಯಾರು ನಮ್ಮ ನಿಜವಾದ ಶತ್ರು ಎಂಬ ಪ್ರಶ್ನೆಗೆ ಉತ್ತರವೇನು? ಅದಕ್ಕುತ್ತರ ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಕೌಸಲ್ಯೆಯು ಹೇಳುತ್ತಾಳೆ ಮಾನವನ ನಿಜವಾದ ಶತ್ರು ಯಾರೆಂದು.

ಮಾನವನ ನಿಜವಾದ ಶತ್ರು ಯಾರು? ಈ ಕುರಿತಾಗಿ ಕೌಸಲ್ಯೆ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us on

ಜನ್ಮವನ್ನು ಪಡೆದ ಪ್ರತಿಯೊಂದು ಜೀವಿಗೂ ತನಗೇ ತನ್ನದೇ ಆದ ವಾತಾವರಣಕ್ಕೆ ವಿರುದ್ಧವಾದ ಗುಣವುಳ್ಳ ವಸ್ತು ವ್ಯಕ್ತಿ ಈ ರೀತಿಯಾಗಿ ಶತ್ರುವೆಂಬಂತೆ ಕಾಣುವ ವ್ಯವಸ್ಥೆ ಸಹಜವಾಗಿ ಇದ್ದೇ ಇರುತ್ತದೆ. ಆದರೆ ಬಹಳಷ್ಟು ಜನರಿಗೆ ತಮ್ಮ ಶತ್ರು ಯಾರೆಂಬುದೇ ತಿಳಿದಿಲ್ಲ. ಇದಕ್ಕೆ ಕಾರಣವೇನಿರಬಹುದು ಎಂದು ಯೋಚಿಸಿದರೆ ಉತ್ತರ ಕಾಣುವುದು ಕಷ್ಟ. ಯಾಕೆ ಗೊತ್ತೇ? ನಮಗೆ ಶತ್ರು ಎಂಬ ಪದದ ವಾಸ್ತವ ಭಾವ ತಿಳಿದಿಲ್ಲ. ಹೌದಾ…. ? ಹಾಗಾದರೆ ಶತ್ರು ಎಂದರೇನು? ಎಂದು ಕೇಳಬಹುದು. ಶತ್ರುವೆಂದರೆ ನಮ್ಮ ಸಾತ್ವಿಕ ವೃದ್ಧಿಗೆ ತೊಂದರೆಯಾಗುವಂತಹ ವಾತಾವರಣಕ್ಕೆ ಕಾರಣವಾಗುವ ಎಲ್ಲಾ ಅಂಶಗಳು ಎನ್ನಬಹುದು. ಆದರೆ ಜಗತ್ತಿನಲ್ಲಿ ಹಾಗಿಲ್ಲ. ನಾವು ಬಯಸಿದಂತೆ ಯೋಚಿಸಿದಂತೆ ನಡೆಯಲು ಅಡ್ಡಿಪಡಿಸಿದ ಪಡಿಸುತ್ತಿರುವ ಎಲ್ಲಾ ವ್ಯಕ್ತಿ ಸನ್ನಿವೇಶ ವಾತಾವರಣ ಇವೆಲ್ಲವನ್ನು ನಾವು ಶತ್ರುಗಳು ಎಂದು ಬಿಡುತ್ತೇವೆ. ನಮ್ಮ ಬಯಕೆ ನಮ್ಮ ನಿರ್ಧಾರ ಹಲವರಿಗೆ ಅಥವಾ ಜಗತ್ತಿಗೆ ಮಾರಕವಾಗುವಂತಹದ್ದಾದರೆ ಅದಕ್ಕೆ ಅಡ್ಡಿಪಡಿಸುವವರು ನಿಜವಾಗಿಯೂ ಶತ್ರುಗಳಲ್ಲ. ಅವರು ನಮ್ಮ ಹಿತಚಿಂತಕರು. ಯಾಕೆಂದರೆ ನಮ್ಮಿಂದ ಕೆಡುಕಾಗದಿರಲಿ ಎಂದು ತಡೆಯುವವರು ನಮ್ಮ ಶತ್ರುಗಳಾಗಲು ಸಾಧ್ಯವೇ? ಯೋಚಿಸಿ.

ಹಾಗಾದರೆ ಯಾರು ನಮ್ಮ ನಿಜವಾದ ಶತ್ರು ಎಂಬ ಪ್ರಶ್ನೆಗೆ ಉತ್ತರವೇನು? ಅದಕ್ಕುತ್ತರ ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಕೌಸಲ್ಯೆಯು ಹೇಳುತ್ತಾಳೆ ಮಾನವನ ನಿಜವಾದ ಶತ್ರು ಯಾರೆಂದು.

ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಮ್ |

ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕ ಸಮೋ ರಿಪುಃ ||

ತಾತ್ಪರ್ಯ ಹೀಗಿದೆ ಶೋಕವು ನಮ್ಮ ಧೈರ್ಯವನ್ನು ನಾಶ ಮಾಡುತ್ತದೆ. ಶೋಕವು ನಮ್ಮ ಜ್ಞಾನ ಶಕ್ತಿಯನ್ನು ನಾಶ ಮಾಡುತ್ತದೆ. ಶೋಕವು ನಮ್ಮ ಎಲ್ಲಾ ಕೌಶಲವನ್ನು ನಾಶ ಮಾಡಿಬಿಡುತ್ತದೆ. ಆದ್ದರಿಂದ ಶೋಕಕ್ಕೆ ಸಮನಾದ ಶತ್ರು ಬೇರೆ ಇಲ್ಲ ಎಂದು.

ಅರ್ಥಾತ್ ಮನುಷ್ಯನ ನಿಜವಾದ ಶತ್ರು ಶೋಕ ಎಂದು ಕೌಸಲ್ಯೆ ಹೇಳುತ್ತಾಳೆ. ಹೌದಲ್ಲವೇ ನಮಗೆ ಧೈರ್ಯವಿದ್ದರೆ ಮತ್ತು ನಮ್ಮ ಜ್ಞಾನ ಶಕ್ತಿ ಸರಿ ಇದ್ದರೆ ಮತ್ತು ನಮ್ಮ ಕೌಶಲವು ಸರಿಯಾಗಿ ಸಹಕರಿಸುತ್ತಿದ್ದರೆ ನಾವು ಯಾರನ್ನು ಮತ್ತು ಯಾವುದನ್ನು ಬೇಕಾದರೂ ಜಯಿಸಬಹುದು ಅಲ್ಲವೇ? ಆದರೆ ನನಗೇನಿಲ್ಲ, ನನಗೆ ಮೋಸ ಆಯಿತು ಇತ್ಯಾದಿ ಯೋಚಿಸುತ್ತಾ ಶೋಕಿಸಿದರೆ ನಮ್ಮ ಅವನತಿಗೆ ನಾವೇ ಮುನ್ನುಡಿ ಇಟ್ಟಂತಲ್ಲವೇ?

ಇದನ್ನೂ ಓದಿ: ಶೂದ್ರನೆಂದರೆ ನಿಜವಾಗಿಯೂ ಕನಿಷ್ಠನೇ? ಈ ಕುರಿತಾಗಿ ಶಾಸ್ತ್ರಗಳ ತಾತ್ವಿಕ ಚಿಂತನೆಯೇನು?

ಈಗ ಹೇಳಿ ನಮ್ಮ ನಿಜವಾದ ಶತ್ರು ಶೋಕ” ಅಂತ ಅನ್ನಿಸುವುದಿಲ್ಲವೇ? ಇನ್ನೂ ಮುಂದುವರೆದು ಹೇಳುತ್ತಾಳೆ ಕೌಸಲ್ಯೆ

ಶಕ್ಯಂ ಆಪತಿತಃ ಸೋಢುಂ ಪ್ರಹಾರೋ ರಿಪು ಹಸ್ತತಃ |

ಸೋಢುಂ ಆಪತಿತಃ ಶೋಕಃ ಸುಸೂಕ್ಷ್ಮೋಪಿ ನ ಶಕ್ಯತೇ ||

ಶತ್ರುಗಳ ಕೈಯಿಂದ ಆಗುವ ಪ್ರಹಾರವನ್ನು ಸಹಿಸಬಹುದು ಅಥವಾ ಪ್ರತಿಭಟಿಸಬಹುದು. ಆದರೆ ದೈವ ವಶದಿಂದ ಪ್ರಾಪ್ತವಾಗುವ ಸಣ್ಣ ಶೋಕವನ್ನೂ ಎದುರಿಸುವುದು ಕಷ್ಟಸಾಧ್ಯ. ಆದ ಕಾರಣ ಮಾನವನ ನಿಜವಾದ ಶತ್ರು ಶೋಕ. ಆದ್ದರಿಂದ ನಾವು ಜೀವನದಲ್ಲಿ ಶೋಕಿಸುತ್ತಾ ಕುಳಿತರೆ ನಮ್ಮ ನಿಜವಾದ ಶತ್ರುವಿನ ಮುಂದೆ ಮಂಡಿಯೂರಿದಂತೆ. ನಮ್ಮ ಜೀವನದ ಮೊದಲ ಹೆಜ್ಜೆಯಿಂದ ಆರಂಭಿಸಿ ಶಾಲಾ ಪರೀಕ್ಷೆಯಂತಹ ಘಟ್ಟ ಉದ್ಯೋಗ ಆರೋಗ್ಯ ಹೀಗೇ ಎಲ್ಲಾ ಸಮಯದಲ್ಲೂ ಸೋತಾಗ ಒಂದಿನಿತೂ ಶೋಕಿಸಿಸದೆ ಕೊರಗದೆ ಎದ್ದುನಿಲ್ಲೋಣ ಆ ಮೂಲಕ ನಿಜವಾದ ಶತ್ರುವನ್ನು ಗೆಲ್ಲೋಣ.

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಮತ್ತಷ್ಟು ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.