
ಭಾರತೀಯ ಸಂಸ್ಕೃತಿ ಹಾಗೂ ಪ್ರಪಂಚದಾದ್ಯಂತದ ಹಲವು ಪದ್ಧತಿಗಳಲ್ಲಿ ವ್ಯಕ್ತಿ ಮೃತಪಟ್ಟಾಗ ಅವರ ಭೌತಿಕ ಶರೀರದ (ಪಾರ್ಥಿವ ಶರೀರ) ಮೇಲೆ ಹೂವುಗಳನ್ನು ಅರ್ಪಿಸುವುದು, ಹೂಮಾಲೆ ಹಾಕುವುದು ತಲೆತಲಾಂತರಗಳಿಂದ ಬಂದಿರುವ ಒಂದು ಪ್ರಮುಖ ಆಚಾರವಾಗಿದೆ. ಕೇವಲ ಹಿಂದೂ ಧರ್ಮದಲ್ಲಷ್ಟೇ ಅಲ್ಲದೆ, ಕ್ರಿಶ್ಚಿಯನ್, ಬೌದ್ಧ ಸೇರಿದಂತೆ ಹಲವು ಧರ್ಮಗಳಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ಈ ಕ್ರಮ ಯಾಕೆ ಇದೆ ಎಂಬ ಬಗ್ಗೆ ಇಂದಿಗೂ ಅನೇಕರಿಗೆ ಸರಿಯಾಗಿ ಗೊತ್ತಿಲ್ಲ. ಸತ್ತವರ ಮೇಲೆ ಹೂವುಗಳನ್ನು ಹಾಕುವುದರ ಹಿಂದೆ ಹಲವಾರು ಆಳವಾದ ಸಾಂಪ್ರದಾಯಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ಹಿಂದೂ ಸನಾತನ ಧರ್ಮದಲ್ಲಿ ಜೀವಿಯ ದೇಹವನ್ನು ‘ದೇವಾಲಯ’ ಎಂದೂ, ಜೀವವನ್ನು ‘ಆತ್ಮ’ (ದೇವರ ಸ್ವರೂಪ) ಎಂದೂ ಭಾವಿಸಲಾಗುತ್ತದೆ. ಆತ್ಮವು ದೇಹವನ್ನು ತೊರೆದರೂ, ಇಷ್ಟು ದಿನ ಆತ್ಮಕ್ಕೆ ಆಶ್ರಯ ನೀಡಿದ್ದ ಆ ಶರೀರಕ್ಕೆ ಶ್ರದ್ಧಾಂಜಲಿ ಹಾಗೂ ಗೌರವ ಸಲ್ಲಿಸುವ ಸಂಕೇತವಾಗಿ ಪವಿತ್ರ ಹೂವುಗಳನ್ನು ಅರ್ಪಿಸಲಾಗುತ್ತದೆ.
ಹೂವುಗಳು ಪ್ರಕೃತಿಯ ಅತ್ಯಂತ ಪವಿತ್ರ ಮತ್ತು ಶುದ್ಧವಾದ ಸೃಷ್ಟಿ. ಪಾರ್ಥಿವ ಶರೀರಕ್ಕೆ ಹೂವುಗಳನ್ನು ಅರ್ಪಿಸುವ ಮೂಲಕ, “ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ, ಶರೀರವನ್ನು ತೊರೆದ ಆತ್ಮವು ನೊಗ-ಬಂಧನಗಳಿಂದ ಮುಕ್ತವಾಗಿ ದೈವತ್ವವನ್ನು ತಲುಪಲಿ” ಎಂದು ದೇವ ರಲ್ಲಿ ಪ್ರಾರ್ಥಿಸಲಾಗುತ್ತದೆ.
ಹಳೆಯ ಕಾಲದಲ್ಲಿ ಇಂದಿನಂತೆ ಶವಗಾರಗಳು (Mortuary) ಅಥವಾ ‘ಫ್ರೀಜರ್ ಬಾಕ್ಸ್’ಗಳು ಇರಲಿಲ್ಲ. ವ್ಯಕ್ತಿ ಮೃತಪಟ್ಟ ನಂತರ ದೇಹದಿಂದ ದುರ್ಗಂಧ ಬರಲು ಪ್ರಾರಂಭವಾಗುತ್ತಿತ್ತು. ಸುಗಂಧಿತ ಹೂವುಗಳಾದ ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಹಾಗೂ ಸುಗಂಧರಾಜನಂತಹ ಹೂವುಗಳನ್ನು ಶವದ ಮೇಲೆ ಹಾಕುವುದರಿಂದ, ಹೂವುಗಳ ಪ್ರಾಕೃತಿ ಸೌರಭವು ದುರ್ಗಂಧವನ್ನು ಕಮ್ಮಿ ಮಾಡುತ್ತಿತ್ತು. ಅಲ್ಲದೆ ಹೂವುಗಳಲ್ಲಿರುವ ನೈಸರ್ಗಿಕ ತೇವಾಂಶವು ವಾತಾವರಣವನ್ನು ತಂಪಾಗಿಡಲು ನೆರವಾಗುತ್ತಿತ್ತು.
ಇದನ್ನೂ ಓದಿ: ನಾಯಿಗಳು ಚಪ್ಪಲಿ, ಶೂಗಳನ್ನು ಅಗಿಯೋದೇಕೆ? ಇದರ ಹಿಂದಿನ ಕಾರಣವೇನು?
ಹೂವುಗಳು ಅರಳಿ, ಸೌಂದರ್ಯ ಚೆಲ್ಲಿ, ಕೊನೆಗೆ ಬಾಡಿ ಮಣ್ಣಿಗೆ ಸೇರುತ್ತವೆ. ಮಾನವನ ಜೀವನವೂ ಹಾಗೆಯೇ – ಜನನ, ಜೀವನ ಮತ್ತು ಮರಣ. ಶವದ ಮೇಲೆ ಹೂವುಗಳನ್ನು ಹಾಕುವುದು ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ, “ಮಾನವ ದೇಹವೂ ಒಂದು ದಿನ ಈ ಹೂವಿನಂತೆ ಮಣ್ಣಾಗಲಿದೆ” ಎಂಬ ಜೀವನದ ನಶ್ವರತೆಯನ್ನು ಮತ್ತು ಅಂತಿಮ ಸತ್ಯವನ್ನು ಜಗತ್ತಿಗೆ ನೆನಪಿಸುತ್ತದೆ.
ಮರಣ ಸಂಭವಿಸಿದ ಮನೆಯಲ್ಲಿ ಶೋಕ ಮತ್ತು ನಕಾರಾತ್ಮಕ ವಾತಾವರಣ ಆವರಿಸಿರುತ್ತದೆ. ಹೂವುಗಳ ಸೌಂದರ್ಯ ಮತ್ತು ಸುವಾಸನೆಯು ಅಲ್ಲಿಗೆ ಆಗಮಿಸುವ ಬಂಧು-ಮಿತ್ರರ ಮನಸ್ಸಿಗೆ ಕೊಂಚ ಸಮಾಧಾನ ಹಾಗೂ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ