ಏನಾದ್ರು ಹೊಸ ಡೈಲಾಗ್ ಹೇಳ್ರಪ್ಪಾ… ಸೂರ್ಯಕುಮಾರ್ ಯಾದವ್ ತಿರುಗೇಟು

IND vs NZ: ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಮೂರನೇ ಬಾರಿ ವಿಶ್ವಕಪ್ ಗೆದ್ದ ವಿಶ್ವದ ಮೊದಲ ತಂಡ ಎನಿಸಿಕೊಳ್ಳಲಿದೆ.

ಏನಾದ್ರು ಹೊಸ ಡೈಲಾಗ್ ಹೇಳ್ರಪ್ಪಾ... ಸೂರ್ಯಕುಮಾರ್ ಯಾದವ್ ತಿರುಗೇಟು
Suryakumar Yadav

Updated on: Mar 08, 2026 | 7:41 AM

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು (ಮಾ.8) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಗೂ ಮುನ್ನ ನಡೆದ ‘ಕ್ಯಾಪ್ಟನ್ಸ್ ಪ್ರೆಸ್​ಮೀಟ್’​​ ನಾಯಕರುಗಳ ವಾಕ್ಸಮರಕ್ಕೆ ಸಾಕ್ಷಿಯಾಗಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ‘ಅಹಮದಾಬಾದ್​​ನ ಸ್ಟೇಡಿಯಂನಲ್ಲಿ ಪ್ರೇಕ್ಷಕರನ್ನು ಮೌನಗೊಳಿಸುವ’ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದೇ ಪ್ರಶ್ನೆಯನ್ನು ಆ ಬಳಿಕ ಸೂರ್ಯಕುಮಾರ್ ಯಾದವ್ ಮುಂದಿಡಲಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ “ಸ್ಥಳೀಯ ಪ್ರೇಕ್ಷಕರನ್ನು ಮೌನಗೊಳಿಸುವುದಾಗಿ” ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿದ್ದ ಹೇಳಿಕೆಗೆ ನೀವು ಏನಂತೀರಿ ಎಂದು ಕೇಳಲಾಗಿದೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್,  “ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಈಗ ಅದೇ ಮಾತನ್ನು ಹೇಳುತ್ತಿದ್ದಾರೆ. ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದ್ದಾರೆ.

ಅಂದರೆ ‘ಪ್ರೇಕ್ಷಕರನ್ನು ಮೌನಗೊಳಿಸುವ’ ಡೈಲಾಗ್ ಶುರುವಾಗಿದ್ದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಂದ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಭಾರತೀಯ ಪ್ರೇಕ್ಷಕರನ್ನು ಮೌನಗೊಳಿಸಿ ಪ್ರಶಸ್ತಿ ಗೆಲ್ಲುತ್ತೇವೆ ಎಂದಿದ್ದರು.

ಇದನ್ನೇ ಇತ್ತೀಚೆಗೆ ಇಂಗ್ಲೆಂಡ್​ನ ಸ್ಯಾಮ್ ಕರನ್ ಪುನರುಚ್ಚರಿಸಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ ಎಂದಿದ್ದರು.

ಇದೀಗ ಟಿ20 ವಿಶ್ವಕಪ್​ ಫೈನಲ್​ಗೂ ಮುನ್ನ ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ ‘ಸೈಲೆಂಟ್’ ಡೈಲಾಗ್ ಹೊಡೆದಿದ್ದಾರೆ. ಕಿವೀಸ್​ ಕ್ಯಾಪ್ಟನ್​ನ ಹೇಳಿಕೆಗೆ ಹೊಸ ಡೈಲಾಗ್​ ಏನನ್ನಾದರೂ ಹೇಳಿ ಎಂದೇಳುವ ಮೂಲಕ ಟೀಮ್ ಇಂಢಿಯಾ ನಾಯಕ ಸೂರ್ಯಕುಮಾರ್ ಯಾದವ್ ತಿರುಗೇಟು ನೀಡಿದ್ದಾರೆ.

ಅಷ್ಟೇ ಅಲ್ಲದೆ ಇದೆಲ್ಲವೂ ಮೈಂಡ್ ಗೇಮ್. ದೊಡ್ಡ ಪಂದ್ಯಗಳಿಗೆ ಮುನ್ನ ಅತಿಯಾಗಿ ಬಳಸಲಾಗುವ ಮತ್ತು ಊಹಿಸಬಹುದಾದ ಮಾತು ಅಷ್ಟೇ.  ಇಂತಹ ಡೈಲಾಗ್​ಗಳು ವರ್ಕ್ ಆಗಲ್ಲ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ಸೈಲೆಂಟ್ ಮಾಡಲು ಬಂದು, ಸೈಲೆಂಟ್ ಆಗಿ ‘ಸೋಲಿಸಿದ’ ಸ್ಯಾಮ್ ಕರನ್..!

ಈ ಮೂಲಕ ಈ ಬಾರಿ ಅಹಮದಾಬಾದ್​ ಮೈದಾನದಲ್ಲಿ ಭಾರತ ತಂಡ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಸೂರ್ಯಕುಮಾರ್ ಯಾದವ್ ವ್ಯಕ್ತಪಡಿಸಿದ್ದಾರೆ.

 

Follow Us