ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಗ್ರೀನ್ ಸಿಗ್ನಲ್!

India vs Ireland: ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಯು ಜೂನ್ 26 ರಿಂದ ಶುರುವಾಗಲಿದೆ. ಐರ್ಲೆಂಡ್​ನಲ್ಲಿ ಜರುಗಲಿರುವ ಈ ಸರಣಿಯ ಮೂಲಕ ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಹಾಗೆಯೇ ಈ ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ವೈಭವ್​ ಸೂರ್ಯವಂಶಿ ಇಂಟರ್​​ನ್ಯಾಷನಲ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಗ್ರೀನ್ ಸಿಗ್ನಲ್!
Team India
Image Credit source: GettyImages

Updated on: Jun 22, 2026 | 2:08 PM

ಜೂನ್  26 ರಿಂದ ಶುರುವಾಗಲಿರುವ ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಜೂನ್ ಕೊನೆಯ ವಾರದಲ್ಲಿ ನಿಗದಿಯಾಗಿರುವ ಎರಡು ಪಂದ್ಯಗಳ ಈ ಸರಣಿಯು ಯಾವುದೇ ಅಡೆತಡೆಯಿಲ್ಲದೆ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ‘ಕ್ರಿಕೆಟ್ ಐರ್ಲೆಂಡ್’ ಸ್ಪಷ್ಟಪಡಿಸಿದೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಕೂಡ ಕನ್ಫರ್ಮ್ ಆಗಿದೆ.

ಇದಕ್ಕೂ ಮುನ್ನ ಬೆಲ್​ಫಾಸ್ಟ್​ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಣ ಪಂದ್ಯಗಳು ನಡೆಯುವುದು ಡೌಟ್ ಎನ್ನಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಬೆಲ್‌ಫಾಸ್ಟ್‌ನಲ್ಲಿ ನಡೆದ ವಲಸೆ ವಿರೋಧಿ ಪ್ರತಿಭಟನೆಗಳು.

ಈ ವಲಸೆ ವಿರೋಧಿ ಪ್ರತಿಭಟನೆಗಳಿಂದಾಗಿ ಉಂಟಾದ ಆಂತರಿಕ ಗಲಭೆಗಳಿಂದ ಭಾರತ ಮತ್ತು ಐರ್ಲೆಂಡ್ ನಡುವಣ ಸರಣಿಯು ರದ್ದಾಗಲಿದೆ ಎನ್ನಲಾಗಿತ್ತು. ಆದರೀಗ ಬೆಲ್​ಫಾಸ್ಟ್​ನಲ್ಲಿ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಸರಣಿಯನ್ನು ನಿಗದಿತ ವೇಳಾಪಟ್ಟಿಯಂತೆ ಆಯೋಜಿಸಲಿದ್ದೇವೆ ಎಂದು ಐರ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ವಲಸೆ ವಿರೋಧಿ ಪ್ರತಿಭಟನೆ ಯಾಕೆ?

ಕೆಲ ದಿನಗಳ ಹಿಂದೆಯಷ್ಟೇ ಬೆಲ್‌ಫಾಸ್ಟ್‌ನ ಬೀದಿಯೊಂದರಲ್ಲಿ ಐರ್ಲೆಂಡ್ ವ್ಯಕ್ತಿಯೊಬ್ಬರ ಮೇಲೆ ಭೀಕರ ಚಾಕು ಇರಿತದ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಸಂತ್ರಸ್ತ ವ್ಯಕ್ತಿ ತೀವ್ರವಾಗಿ ಗಾಯಗೊಂಡು, ಭಾಗಶಃ ದೃಷ್ಟಿ ಕಳೆದುಕೊಂಡಿದ್ದರು. ಈ ದಾಳಿ ಮಾಡಿದ್ದು ಸೂಡಾನ್ ದೇಶದ 30 ವರ್ಷದ ನಿರಾಶ್ರಿತ.

ಈ ದಾಳಿಯ ಭೀಕರ ವಿಡಿಯೋ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಿನ್ನಲೆಯಲ್ಲಿ ಐರ್ಲೆಂಡ್​ನ ಕೆಲ ಸಂಘಟನೆಗಳು ವಲಸಿಗರಿಂದಾಗಿ ಸ್ಥಳೀಯರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಉಗ್ರ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಪ್ರತಿಭಟಗಾರರ ಗುಂಪಿನಲ್ಲಿದ್ದ ಮುಖವಾಡ ಧರಿಸಿದ ಕೆಲವರು ಹಿಂಸಾಚಾರಕ್ಕೆ ಇಳಿದಿದ್ದರು. ಅಲ್ಲದೆ ವಲಸಿಗರು ವಾಸಿಸುತ್ತಿದ್ದಾರೆಂದು ಶಂಕಿಸಲಾದ ಮನೆಗಳು, ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು.

ಈ ಹಿಂಸಾಚಾರವನ್ನು ಖಂಡಿಸಿ ಬೆಲ್‌ಫಾಸ್ಟ್‌ನಲ್ಲಿ ಹತ್ತಾರು ಸಾವಿರ ನಾಗರಿಕರು ‘ವರ್ಣಭೇದ ನೀತಿ ವಿರೋಧಿ’ ಬೃಹತ್ ಜಾಥಾ ನಡೆಸಿ, ವಲಸಿಗರಿಗೆ ಮತ್ತು ಹೊಸದಾಗಿ ಬಂದವರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಇದೀಗ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಭಾರತದ ಪಂದ್ಯಕ್ಕೂ ಭದ್ರತೆ:

ಬೆಲ್​ಫಾಸ್ಟ್​ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಗೆ ಸಂಪೂರ್ಣ ಸುರಕ್ಷತೆ ಒದಗಿಸುವುದಾಗಿ ಐರ್ಲೆಂಡ್ ಸರ್ಕಾರ ತಿಳಿಸಿದೆ.

ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೆ ಯಾವುದೇ ರೀತಿಯ ನೇರ ಸುರಕ್ಷತಾ ಭೀತಿ ಇಲ್ಲ ಎಂದು ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದ್ದು,  ಹೆಚ್ಚುವರಿ ಬಿಗಿ ಭದ್ರತೆಯ ನಡುವೆ ಪಂದ್ಯಗಳನ್ನು ಆಯೋಜಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ರಿಕೆಟ್ ಐರ್ಲೆಂಡ್ ತಿಳಿಸಿದೆ.

ಅದರಂತೆ ಭಾರತ ಮತ್ತು ಐರ್ಲೆಂಡ್ ನಡುವಣ 2 ಮ್ಯಾಚ್​ಗಳ ಟಿ20 ಸರಣಿಯು ಜೂನ್ 26 ರಿಂದ ಶುರುವಾಗುವುದು ಖಚಿತವಾಗಿದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ಐರ್ಲೆಂಡ್ ಟಿ20 ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ / ಸ್ಥಳ ಸಮಯ ( IST)
1ನೇ ಟಿ20 ಪಂದ್ಯ ಜೂನ್ 26, ಶುಕ್ರವಾರ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನ, ಬೆಲ್‌ಫಾಸ್ಟ್ ರಾತ್ರಿ 6:00 ಗಂಟೆಗೆ
2ನೇ ಟಿ20 ಪಂದ್ಯ ಜೂನ್ 28, ಭಾನುವಾರ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನ, ಬೆಲ್‌ಫಾಸ್ಟ್ ರಾತ್ರಿ 6:00 ಗಂಟೆಗೆ

ಇದನ್ನೂ ಓದಿ: ನಾನಂತೂ ರೆಡಿ… ಸ್ಪಷ್ಟ ಸಂದೇಶ ರವಾನಿಸಿದ ವೈಭವ್ ಸೂರ್ಯವಂಶಿ!

ಐರ್ಲೆಂಡ್ ಟಿ20 ಸರಣಿಗೆ ಭಾರತ ತಂಡ:  ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ.

 

Follow Us