ಅಂಗಾಂಗ ದಾನ ಮಾಡಿ, ಜೀವಗಳನ್ನು ಉಳಿಸಿ; ಟೀಂ ಇಂಡಿಯಾ ಆಟಗಾರರಿಂದ ಜಾಗೃತಿ ಅಭಿಯಾನ

Cricket Stars Urge Organ Donation: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಸಂದರ್ಭದಲ್ಲಿ, ಬಿಸಿಸಿಐ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟಿಗರು ಅಂಗಾಂಗ ದಾನದ ಮಹತ್ವವನ್ನು ತಿಳಿಸುವ ವೀಡಿಯೊವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ಅಭಿಯಾನವು ಹೆಚ್ಚಿನ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಿದೆ.

ಅಂಗಾಂಗ ದಾನ ಮಾಡಿ, ಜೀವಗಳನ್ನು ಉಳಿಸಿ; ಟೀಂ ಇಂಡಿಯಾ ಆಟಗಾರರಿಂದ ಜಾಗೃತಿ ಅಭಿಯಾನ
ಟೀಂ ಇಂಡಿಯಾ

Updated on: Feb 10, 2025 | 5:58 PM

ಪ್ರಸ್ತುತ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈಗಾಗಲೇ ಸರಣಿಯಲ್ಲಿ ಎರಡು ಪಂದ್ಯಗಳು ನಡೆದಿದ್ದು, ಆತಿಥೇಯ ಟೀಂ ಇಂಡಿಯಾ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಮೂರನೇ ಏಕದಿನ ಪಂದ್ಯಕ್ಕೆ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಮೈದಾನ ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬಿಸಿಸಿಐ ಮಹತ್ವದ ಕಾರ್ಯವೊಂದಕ್ಕೆ ಸಿದ್ಧವಾಗಿದ್ದು, ಇದೀಗ ಕ್ರಿಕೆಟ್​ ಬಿಗ್​ಬಾಸ್​ನ ಈ ವಿಶೇಷ ಜಾಗೃತಿ ಅಭಿಯಾನಕ್ಕೆ ಕ್ರಿಕೆಟ್ ಅಭಿಮಾನಿಗಳು ಸಲಾಂ ಹೊಡೆಯುತ್ತಿದ್ದಾರೆ.

ಬಿಸಿಸಿಐನ ವಿಶೇಷ ಜಾಗೃತಿ ಅಭಿಯಾನ

ವಾಸ್ತವವಾಗಿ ನರೇಂದ್ರ ಮೋದಿ ಮೈದಾನದಲ್ಲಿ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಬಿಸಿಸಿಐ, ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಅಂಗಾಂಗ ದಾನ ಮಾಡಿ, ಜೀವಗಳನ್ನು ಉಳಿಸಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈಗಾಗಲೇ ಈ ಬಗ್ಗೆ ಬಿಸಿಸಿಐನ ಮಾಜಿ ಕಾರ್ಯದರ್ಶಿ ಹಾಗೂ ಐಸಿಸಿಯ ಹಾಲಿ ಅಧ್ಯಕ್ಷರಾಗಿರುವ ಜಯ್ ಶಾ ತಮ್ಮ ಎಕ್ಸ್​ ಖಾತೆಯಲ್ಲಿ ವಿಶೇಷ ಮಾಹಿತಿಯನ್ನು ಹಂಚಿಕೊಂಡು ಜನರ ಬಳಿ ಮನವಿ ಮಾಡಿದ್ದಾರೆ. ಇದಲ್ಲದೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಕೂಡ ಕ್ರಿಕೆಟ್‌ನ ಭಾಷೆಯಲ್ಲಿ ಅಂಗಾಂಗ ದಾನದ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿರುವ ವೀಡಿಯೊವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಅಂಗಾಂಗ ದಾನಕ್ಕೆ ಮನವಿ

ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದ ಆರಂಭದಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದು, ‘ನೀವು ನಿಮ್ಮ ಅಂತಿಮ ಶತಕ ಬಾರಿಸಿದ ನಂತರ, ನೀವು ನಿಮ್ಮ ಅಂಗಾಂಗಗಳ ದಾನದ ಮುಖಾಂತರ ಇತರರು ಜೀವಿತಾವಧಿಗಿಂತ ಹೆಚ್ಚು ಕಾಲ ಬದುಕಲು ಸಹಾಯ ಮಾಡಬಹುದು ಎಂದಿದ್ದಾರೆ. ಆ ಬಳಿಕ ಮಾತನಾಡಿರುವ ಶುಭ್​ಮನ್ ಗಿಲ್, ‘ಜೀವನದ ನಾಯಕನಾಗಿರಿ’. ಒಬ್ಬ ನಾಯಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಂತೆಯೇ, ನೀವು ನಿಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದಿದ್ದಾರೆ. ಶ್ರೇಯಸ್ ಅಯ್ಯರ್ ಮಾತನಾಡಿ, ‘ಒಬ್ಬ ದಾನಿ ಎಂಟು ಜೀವಗಳನ್ನು ಉಳಿಸಬಹುದು. ಇಂದೇ ಪ್ರತಿಜ್ಞೆ ಮಾಡಿ ಮತ್ತು ಮಾನವೀಯತೆಗಾಗಿ ಸಿಕ್ಸ್ ಬಾರಿಸಿ ಎಂದಿದ್ದಾರೆ. ಕೆ.ಎಲ್. ರಾಹುಲ್ ಮಾತನಾಡಿ, ‘ಅಂತಿಮ ಗೆಲುವಿನ ಶಾಟ್ ಆಡಿ. ನಿಮ್ಮ ಅಂಗಾಂಗಗಳನ್ನು ದಾನ ಮಾಡುವ ನಿಮ್ಮ ನಿರ್ಧಾರವು ಇತರರ ಜೀವನದಲ್ಲಿ ಮ್ಯಾಚ್ ವಿನ್ನಿಂಗ್ ಕ್ಷಣವಾಗಬಹುದು ಎಂದಿದ್ದಾರೆ.

ಅಕ್ಷರ್ ಪಟೇಲ್ ಮಾತನಾಡಿ, ‘ಒಬ್ಬ ದಯಾಳು ನಾಯಕನಾಗಿರಿ. ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿ ಮತ್ತು ಇತರರನ್ನು ಇದಕ್ಕೆ ಪ್ರೇರೇಪಿಸಿ ಎಂದಿದ್ದಾರೆ. ‘ನಿಮ್ಮ ಈ ಒಂದು ನಿರ್ಧಾರ ಗೆಲುವಿನ ಹೊಡೆತವಾಗಬಹುದು’ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ರವೀಂದ್ರ ಜಡೇಜಾ ಮಾತನಾಡಿ, ‘ಮಾನವೀಯತೆಗಾಗಿ ಸಿಕ್ಸ್ ಬಾರಿಸಿ. ಒಬ್ಬ ದಾನಿ ಎಂಟು ಜೀವಗಳನ್ನು ಉಳಿಸಬಹುದು ಎಂದಿದ್ದಾರೆ. ವರುಣ್ ಚಕ್ರವರ್ತಿ ಮಾತನಾಡಿ, ‘ಗೇಮ್ ಚೇಂಜರ್ ಆಗಿರಿ. ಅಂಗಾಂಗ ದಾನದಿಂದ ಜೀವ ಉಳಿಸಬಹುದು. ಇಂದೇ ಪ್ರತಿಜ್ಞೆ ಮಾಡಿ ಮತ್ತು ನಿಜವಾದ ನಗುವಿನ ನಾಯಕರಾಗಿ ಎಂದಿದ್ದಾರೆ. ಇವರಲ್ಲದೆ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಮತ್ತು ಅರ್ಷದೀಪ್ ಸಿಂಗ್ ಕೂಡ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ