AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೌದು, ನಾನು ಔಟ್ ಆಗಿದ್ದೆ’; ಔಟೆಂದು ಗೊತ್ತಿದ್ದರೂ ಬ್ಯಾಟಿಂಗ್‌ ಮುಂದುವರೆಸಿದ ಸ್ಟೀವ್ ಸ್ಮೀತ್

Steve Smith's DRS Controversy: ಆಸ್ಟ್ರೇಲಿಯಾ-ಬಾಂಗ್ಲಾದೇಶ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಔಟಾಗಿದ್ದರೂ ತಂತ್ರಜ್ಞಾನದ ಲೋಪದಿಂದ ನಾಟೌಟ್ ಆಗಿ ಬ್ಯಾಟಿಂಗ್ ಮುಂದುವರಿಸಿದ ಘಟನೆ ವಿವಾದ ಸೃಷ್ಟಿಸಿದೆ. ಚೆಂಡು ಬ್ಯಾಟ್‌ಗೆ ತಾಗಿರುವುದು ಗೊತ್ತಿದ್ದರೂ ಅಲ್ಟ್ರಾ ಎಡ್ಜ್ ಪತ್ತೆ ಹಚ್ಚುವಲ್ಲಿ ವಿಫಲವಾಗಿ ಸ್ಮಿತ್ ಪೆವಿಲಿಯನ್‌ಗೆ ತೆರಳಲಿಲ್ಲ. ಈ ಬಗ್ಗೆ ಸ್ವತಃ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದು, ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

‘ಹೌದು, ನಾನು ಔಟ್ ಆಗಿದ್ದೆ’; ಔಟೆಂದು ಗೊತ್ತಿದ್ದರೂ ಬ್ಯಾಟಿಂಗ್‌ ಮುಂದುವರೆಸಿದ ಸ್ಟೀವ್ ಸ್ಮೀತ್
Steve Smith
ಪೃಥ್ವಿಶಂಕರ
|

Updated on:Aug 13, 2026 | 5:11 PM

Share

ಡಾರ್ವಿನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ (australia vs bangladesh) ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 198 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ (steve smith) 109 ಎಸೆತಗಳಲ್ಲಿ 71 ರನ್ ಬಾರಿಸಿ ತಂಡವನ್ನು 150 ರನ್​ಗಳ ಗಡಿ ದಾಟಿಸಿದರು. ಇಲ್ಲದಿದ್ದರೆ ಆಸೀಸ್ ಪಡೆ 150 ರನ್​ಗಳನ್ನು ದಾಟುತ್ತಿರಲಿಲ್ಲ. ಆದರೆ ಪಂದ್ಯದ ಮೊದಲ ದಿನದಾಟ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಟೀವ್ ಸ್ಮಿತ್ ನೀಡಿದ ಹೇಳಿಕೆ ಅವರ ನೈತಿಕತೆ ಮತ್ತು ಪ್ರಾಮಾಣಿಕತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚೆಂಡು ಬ್ಯಾಟಿಗೆ ತಾಗಿತ್ತು

ವಾಸ್ತವವಾಗಿ ಸ್ಟೀವ್ ಸ್ಮಿತ್ ಇಂದಿನ ಪಂದ್ಯದಲ್ಲಿ ಪ್ರಾಮಾಣಿಕತೆ ಮೆರೆದಿದ್ದರೆ ಅವರು ಕೂಡ ಒಂದಂಕಿ ಮೊತ್ತ ದಾಟಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚೆಂಡು ಬ್ಯಾಟಿಗೆ ತಾಗಿರುವುದು ಗೊತ್ತಿದ್ದರೂ, ತಂತ್ರಜ್ಞಾನದ ಲೋಪದೋಷದ ಲಾಭ ಪಡೆದ ಸ್ಮಿತ್ ಬ್ಯಾಟಿಂಗ್‌ ಮುಂದುವರೆಸಿ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಪಂದ್ಯದ ಮೊದಲ ದಿನದಾಟ ಮುಗಿದ ಬಳಿಕ ಪತ್ರಕರ್ತರು ಈ ಬಗ್ಗೆ ಕೇಳಿದಕ್ಕೆ ಯಾವುದೇ ಅಂಜಿಕೆ ಇಲ್ಲದೆ ಉತ್ತರಿಸಿದ ಸ್ಮಿತ್, ಹೌದು, ಚೆಂಡು ಬ್ಯಾಟಿಗೆ ತಾಗಿತ್ತು. ಆದರೆ ಅಲ್ಟ್ರಾ ಎಡ್ಜ್ ತಂತ್ರಜ್ಞಾನ ಬಳಿಸಿದಾಗ ಚೆಂಡು ತಾಗಿರುವುದು ಖಚಿತವಾಗಲಿಲ್ಲ. ಹೀಗಾಗಿ ನನಗೆ ತಂತ್ರಜ್ಞಾನದ ಲೋಪದೋಷದಿಂದ ಲಾಭವಾಗಿ ಬದುಕುಳಿದೆ ಎಂದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂಬುದನ್ನು ನೋಡುವುದಾದರೆ..

ಬಾಂಗ್ಲಾ ವಿರುದ್ಧ ಅತ್ಯಲ್ಪ ಮೊತ್ತಕ್ಕೆ ಆಲೌಟ್; ಅವಮಾನಕರ ದಾಖಲೆ ಬರೆದ ಆಸ್ಟ್ರೇಲಿಯಾ

ಸ್ಮಿತ್ ವಿಕೆಟ್​ಗಾಗಿ ಮೇಲ್ಮನವಿ

ಆಸ್ಟ್ರೇಲಿಯಾ ಇನ್ನಿಂಗ್ಸ್​ನ 21 ನೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಸ್ಟ್ರೈಕ್​ನಲ್ಲಿದ್ದರು. ಇತ್ತ ಬಾಂಗ್ಲಾದೇಶ ಪರ ಇಬಾದತ್ ಹೊಸೈನ್ ಬೌಲಿಂಗ್ ಮಾಡುತ್ತಿದ್ದರು. ಈ ಓವರ್​ನ ನಾಲ್ಕನೇ ಎಸೆತವನ್ನು ಸ್ಮಿತ್ ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಸ್ಮಿತ್ ಅವರ ಬ್ಯಾಟಿನ ಅಂಚಿಗೆ ತಾಗಿ ಸೀಧಾ ವಿಕೆಟ್ ಕೀಪರ್​ ಕೈಗೆ ಹೋಯಿತು. ಕೂಡಲೇ ಬಾಂಗ್ಲಾದೇಶ ಆಟಗಾರರು ಸಂಭ್ರಮಿಸಲು ಶುರು ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಹೀಗಾಗಿ ಬಾಂಗ್ಲಾ ನಾಯಕ ಸ್ಮಿತ್ ವಿಕೆಟ್​ಗಾಗಿ ಮೇಲ್ಮನವಿ ಸಲ್ಲಿಸಿದರು.

ಅಲ್ಟ್ರಾ ಎಡ್ಜ್ ತಂತ್ರಜ್ಞಾನದಲ್ಲಿ ಲೋಪ

ಮೂರನೇ ಅಂಪೈರ್ ಅಲ್ಟ್ರಾ ಎಡ್ಜ್ ತಂತ್ರಜ್ಞಾನವನ್ನು ಬಳಸಿ ಪರಿಶೀಲಿಸಿದಾಗ ಚೆಂಡು ಸ್ಮಿತ್ ಅವರ ಬ್ಯಾಟ್‌ಗೆ ತಾಗಿರುವುದು ಪತ್ತೆಯಾಗಲಿಲ್ಲ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅಲ್ಟ್ರಾ ಎಡ್ಜ್ ತಂತ್ರಜ್ಞಾನವನ್ನು ಬಳಸಿದಾಗ ಚೆಂಡು ಬ್ಯಾಟ್ ಸಮೀಪ ಬರುವುದಕ್ಕೂ ಮುನ್ನವೇ ಫ್ಲಾಟ್ ಲೈನ್‌ನಲ್ಲಿ ಏರಿಳಿತ ಕಾಣುತ್ತಿತ್ತು. ಆದ್ದರಿಂದ, ಚೆಂಡು ಸ್ಮಿತ್ ಅವರ ಬ್ಯಾಟ್‌ಗೆ ತಗುಲಿದೆ ಎಂಬುದು ಮೂರನೇ ಅಂಪೈರ್‌ಗೆ ಖಚಿತವಾಗಲಿಲ್ಲ. ಹೀಗಾಗಿ ಮೂರನೇ ಅಂಪೈರ್ ಸ್ಮಿತ್ ನಾಟೌಟ್ ಎಂದು ತೀರ್ಪು ನೀಡಿದರು.

ಕ್ರೀಡಾ ಸ್ಫೂರ್ತಿ ಮರೆತ ಸ್ಮಿತ್

ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ಈ ಬಗ್ಗೆ ಸ್ಮಿತ್ ಬಳಿ ಆ ಘಟನೆಯ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಮಿತ್, ‘ಹೌದು, ನಾನು ಔಟ್ ಆಗಿದ್ದೆ. ಬ್ಯಾಟಿಗೆ ಚೆಂಡು ತಾಗಿರುವುದು ನನಗೆ ಗೊತ್ತಿತ್ತು. ಆದರೆ ತಂತ್ರಜ್ಞಾನ ನನ್ನನ್ನು ಔಟಾಗುವುದರಿಂದ ಪಾರು ಮಾಡಿತು. ಕೆಲಮೊಮ್ಮೆ ಈ ರೀತಿಯ ಲಾಭವನ್ನು ಬಳಸಿಕೊಳ್ಳಬೇಕು’ ಎಂದು ಸ್ಮಿತ್ ಯಾವುದೇ ಅಂಜಿಕೆ ಇಲ್ಲದೆ ಹೇಳಿದರು. ಎಷ್ಟೋ ಬಾರಿ ಅಂಪೈರ್ ನಾಟೌಟ್ ನೀಡಿದಾಗಲೂ ಸಚಿನ್ ತೆಂಡೂಲ್ಕರ್ ತಾನು ಔಟಾಗಿದ್ದೇನೆ ಎಂದು ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರನ್ನು ಕ್ರಿಕೆಟ್ ದೇವರು ಎನ್ನುತ್ತಾರೆ. ಆದರೆ ತಾನು ಔಟಾಗಿರುವುದು ಗೊತ್ತಿದ್ದರೂ ಬ್ಯಾಟಿಂಗ್‌ ಮುಂದುವರೆಸಿದ ಸ್ಟೀವ್ ಸ್ಮಿತ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Thu, 13 August 26

Follow Us