
IPL 2026: ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ಸೋತ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಮನಬಿಚ್ಚಿ ಮಾತನಾಡಿದ್ದಾರೆ. ಪಂದ್ಯದ ನಂತರದ ಮಾತನಾಡಿದ ಅವರು, ತಂಡದ ಪ್ರದರ್ಶನ ಮತ್ತು ಕೆ.ಎಲ್. ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ, ಸೋಲಿಗೆ ಕಾರಣವಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಆಡಿವೆ. ಇಂತಹ ರೋಚಕ ಪಂದ್ಯಗಳು ನಡೆದಾಗ ಯಾವುದೋ ಒಂದು ನಿರ್ದಿಷ್ಟ ಕಾರಣವನ್ನು ಬೆರಳು ಮಾಡಿ ತೋರಿಸುವುದು ಕಷ್ಟ. ಆದರೆ ಒಟ್ಟಾರೆಯಾಗಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂಬ ತೃಪ್ತಿಯಿದೆ” ಎಂದು ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
211 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ತಂಡವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ ಅಕ್ಷರ್ ಪಟೇಲ್, “ಚೇಸಿಂಗ್ ಮಾಡುವಾಗ ನಾವು ಇನ್ನೂ ಸ್ವಲ್ಪ ಜಾಣತನದಿಂದ ಆಡಬೇಕಿತ್ತು. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ವಿಕೆಟ್ಗಳು ಉರುಳಿದ್ದು ನಮಗೆ ದೊಡ್ಡ ಹೊಡೆತ ನೀಡಿತು. ಆ ಸಮಯದಲ್ಲಿ ವಿಕೆಟ್ ಉಳಿಸಿಕೊಂಡಿದ್ದರೆ, ನಾವು ಪಂದ್ಯವನ್ನು ಮೊದಲೇ ಮುಗಿಸಬಹುದಿತ್ತು” ಎಂದು ಸೋಲಿನ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೆ.ಎಲ್. ರಾಹುಲ್ (92 ರನ್) ಅವರ ಬಗ್ಗೆ ಅಕ್ಷರ್ ಪಟೇಲ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಪವರ್ಪ್ಲೇನಲ್ಲಿ ಸಿಕ್ಕ ಆರಂಭವನ್ನು ಅವರು ಪಂದ್ಯದ ಉದ್ದಕ್ಕೂ ಮುಂದುವರಿಸಿದರು. ಒಂದು ಕಡೆ ವಿಕೆಟ್ಗಳು ಬೀಳುತ್ತಿದ್ದರೂ, ಅವರು ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡರು. ಅವರ ಬ್ಯಾಟಿಂಗ್ ನಿಜಕ್ಕೂ ಶ್ಲಾಘನೀಯ” ಎಂದರು.
“ನಾವು ಪ್ರಸ್ತುತ ಉತ್ತಮ ಲಯದಲ್ಲಿದ್ದೇವೆ. ಈ ಪಂದ್ಯದಿಂದ ಕಲಿತ ಪಾಠಗಳೊಂದಿಗೆ ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ಜಯ ಸಾಧಿಸುತ್ತೇವೆ” ಎಂದು ಅಭಿಮಾನಿಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಭರವಸೆ ನೀಡಿದ್ದಾರೆ.
ಇದಾಗ್ಯೂ ಈ ಪಂದ್ಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಡೇವಿಡ್ ಮಿಲ್ಲರ್ ಅವರ ಹೋರಾಟದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಎಂಬುದು ಅಚ್ಚರಿ.
“ನಾವು ಚೇಸಿಂಗ್ನಲ್ಲಿ ಇನ್ನೂ ಸ್ವಲ್ಪ ಜಾಣತನದಿಂದ ಆಡಬೇಕಿತ್ತು” ಎಂದು ಅಕ್ಷರ್ ಪಟೇಲ್ ಹೇಳಿದ್ದು ಡೇವಿಡ್ ಮಿಲ್ಲರ್ ಅವರ ಈ ನಿರ್ಧಾರವನ್ನು ಉದ್ದೇಶಿಸಿಯೇ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ಈ ಪಂದ್ಯದ ಕೊನೆಯ ಓವರ್ನ 5ನೇ ಎಸೆತದಲ್ಲಿ ಸಿಂಗಲ್ ತೆಗೆದು ಪಂದ್ಯವನ್ನು ಟೈ ಮಾಡುವ ಅವಕಾಶವಿದ್ದರೂ ಡೇವಿಡ್ ಮಿಲ್ಲರ್ ರನ್ ನಿರಾಕರಿಸಿದ್ದರು. ಪರಿಣಾಮ ಕೊನೆಯ ಎಸೆತದಲ್ಲಿ 2 ರನ್ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 1 ರನ್ನಿಂದ ಸೋಲೊಪ್ಪಿಕೊಂಡಿತು.
ಒಂದು ವೇಳೆ ಡೇವಿಡ್ ಮಿಲ್ಲರ್ 5ನೇ ಎಸೆತದಲ್ಲಿ ಒಂದು ರನ್ ಓಡಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲನ್ನು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಮಿಲ್ಲರ್ ಅವರ ಅತಿಯಾದ ಆತ್ಮ ವಿಶ್ವಾಸದಿಂದಾಗಿ ಡಿಸಿ ಪಡೆ ಒಂದು ರನ್ನಿಂದ ಸೋಲಬೇಕಾಯಿತು.
ಇದನ್ನೂ ಓದಿ: ಕೃನಾಲ್ ಪಾಂಡ್ಯ ಬೌಲಿಂಗ್ಗೆ ಬ್ಯಾನ್ ಭೀತಿ?
ಇನ್ನು ಈ ಸೋಲಿನ ಹೊರತಾಗಿಯೂ, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
Published On - 9:57 am, Thu, 9 April 26