Duleep Trophy 2024: ರಾಹುಲ್ ಅರ್ಧಶತಕ ವ್ಯರ್ಥ; ಬೆಂಗಳೂರಿನಲ್ಲಿ ಗೆದ್ದ ಭಾರತ ಬಿ ತಂಡ

Duleep Trophy 2024: ಬೆಂಗಳೂರಿನಲ್ಲಿ ನಡೆದ ಈ ಪಂದ್ಯದ ಕೊನೆಯ ದಿನದಂದು ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ-ಬಿ ತಂಡವು, ಭಾರತ-ಎ ತಂಡವನ್ನು 76 ರನ್‌ಗಳಿಂದ ಸೋಲಿಸಿತು. ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.

Duleep Trophy 2024: ರಾಹುಲ್ ಅರ್ಧಶತಕ ವ್ಯರ್ಥ; ಬೆಂಗಳೂರಿನಲ್ಲಿ ಗೆದ್ದ ಭಾರತ ಬಿ ತಂಡ
ಭಾರತ ಎ- ಭಾರತ ಬಿ ತಂಡಗಳು
Follow us
|

Updated on:Sep 08, 2024 | 4:59 PM

ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನ ಪಂದ್ಯಗಳು ಮುಗಿದಿವೆ. ಈ ಸುತ್ತಿನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಡಿ ತಂಡ, ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ಸಿ ತಂಡದ ವಿರುದ್ಧ ಸೋಲನುಭವಿಸಿತ್ತು. ಇನ್ನೊಂದೆಡೆ ಶುಭಮನ್ ಗಿಲ್ ನಾಯಕತ್ವದ ಭಾರತ ಎ ತಂಡ, ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ ಬಿ ತಂಡದ ವಿರುದ್ಧ ಸೋತಿದೆ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದ ಕೊನೆಯ ದಿನದಂದು ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ-ಬಿ ತಂಡವು, ಭಾರತ-ಎ ತಂಡವನ್ನು 76 ರನ್‌ಗಳಿಂದ ಸೋಲಿಸಿತು. ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ. ಇನ್ನು ಈ ಪಂದ್ಯದಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಗಿಲ್ ನಾಯಕನಾಗಿ ಹಾಗೂ ಆಟಗಾರನಾಗಿ ಎರಡೂ ವಿಭಾಗಗಳಲ್ಲೂ ವಿಫಲರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಕೊನೆಯ ದಿನದಂದು, ಭಾರತ-ಬಿ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 150 ರನ್​ಗಳಿಗೆ 6 ವಿಕೆಟ್‌ ಕಳೆದುಕೊಂಡು ದಿನದಾಟವನ್ನು ಮುಂದುವರೆಸಿತು. ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದರೂ ಉಳಿದ 4 ವಿಕೆಟ್‌ಗಳನ್ನು ಕಬಳಿಸಲು ಭಾರತ ಎ ತಂಡ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಭಾರತ ಎ ಪರ ಮಿಂಚಿದ ವೇಗದ ಬೌಲರ್ ಆಕಾಶ್ ದೀಪ್ ಉಳಿದ ಈ 4 ವಿಕೆಟ್‌ಗಳಲ್ಲಿ 3 ವಿಕೆಟ್​ಗಳು ಪಡೆದು ಭಾರತ-ಬಿ ತಂಡವನ್ನು 181 ರನ್‌ಗಳಿಗೆ ಔಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಆಕಾಶ್, ಎರಡನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮುಶೀರ್ ದಾಖಲೆಯ ಇನ್ನಿಂಗ್ಸ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬಿ ತಂಡ 321 ರನ್ ಕಲೆಹಾಕಿತು. ತಂಡದ ಪರ ಮುಶೀರ್ ಖಾನ್ 181 ರನ್​ಗಳ ದಾಖಲೆಯ ಇನ್ನಿಂಗ್ಸ್ ಆಡಿದರು. ಇವರಿಗೆ ಸಾಥ್ ನೀಡಿದ ವೇಗಿ ನವದೀಪ್ ಸೈನಿ 56 ರನ್​ಗಳ ಇನ್ನಿಂಗ್ಸ್ ಆಡಿದಲ್ಲದೆ, ಮುಶೀರ್ ಜೊತೆ ದ್ವಿಶತಕದ ಜೊತೆಯಾಟ ನಡೆಸಿದರು. ಇವರಿಬ್ಬರ ಆಟದಿಂದಾಗಿ ಭಾರತ ಬಿ ತಂಡ ಇಷ್ಟು ಮೊತ್ತ ಕಲೆಹಾಕಲು ಸಾಧ್ಯವಾಯಿತು.ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎ ತಂಡ 231 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ಯಾರೊಬ್ಬರು ಅರ್ಧಶತಕದ ಇನ್ನಿಂಗ್ಸ್ ಆಡಲಿಲ್ಲ. ಕನ್ನಡಿಗ ಕೆಲ್ ರಾಹುಲ್ ತಂಡದ ಪರ ಅತ್ಯಧಿಕ 37 ರನ್​ಗಳ ಇನ್ನಿಂಗ್ಸ್ ಆಡಿದರು.

ಮಿಂಚಿದ ಪಂತ್

ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 90 ರನ್‌ಗಳ ಮುನ್ನಡೆ ಪಡೆದುಕೊಂಡ ಭಾರತ ಬಿ ತಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 184 ರನ್​ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್​ನಲ್ಲಿ ಸರ್ಫರಾಜ್ 46 ರನ್ ಬಾರಿಸಿದರೆ, ರಿಷಬ್ ಪಂತ್ 61 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಉಳಿದಂತೆ ಯಾರೂ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ.

ಸ್ಟಾರ್ ಕ್ರಿಕೆಟಿಗರು ಫೇಲ್

ಅಂತಿಮವಾಗಿ, ಗೆಲ್ಲಲು 275 ರನ್‌ಗಳ ಗುರಿ ಪಡೆದ ಭಾರತ ಎ ತಂಡಕ್ಕೆ ಈ ಗುರಿಯೇನು ಕಷ್ಟಕರವಾಗಿರಲಿಲ್ಲ. ಏಕೆಂದರೆ ತಂಡದಲ್ಲಿ ಶುಭಮನ್ ಗಿಲ್, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಶಿವಂ ದುಬೆಯಂತಹ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಿದ್ದರು. ಹೀಗಾಗಿ ಭಾರತ ಎ ತಂಡ ಗೆಲುವು ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ. ತಂಡದ ಮೊತ್ತ 99 ರನ್‌ ಆಗುವಷ್ಟರಲ್ಲಿ ಮಯಾಂಕ್, ಶುಭ್‌ಮನ್ ಗಿಲ್, ರಿಯಾನ್ ಮತ್ತು ಶಿವಂ ಸೇರಿದಂತೆ 6 ಪ್ರಮುಖ ವಿಕೆಟ್‌ಗಳು ಪತನಗೊಂಡವು. ಅಂತಹ ಪರಿಸ್ಥಿತಿಯಲ್ಲಿ, ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಕೆಎಲ್ ರಾಹುಲ್ ಮೇಲೆ ನಿರೀಕ್ಷೆ ಹೆಚ್ಚಿತ್ತು. ರಾಹುಲ್​ಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ರಾಹುಲ್ ಅರ್ಧಶತಕದ ಇನ್ನಿಂಗ್ಸ್

ಈ ನಿಟ್ಟಿನಲ್ಲಿ ರಾಹುಲ್ ಕೂಡ ಸಾಕಷ್ಟು ಪ್ರಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ದೀರ್ಘಕಾಲ ಕ್ರೀಸ್​ನಲ್ಲಿ ಇದ್ದರಾದರೂ ರಾಹುಲ್​ಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿರಲಿಲ್ಲ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅದೇ ರೀತಿ ಬ್ಯಾಟ್ ಬೀಸಿದ ರಾಹುಲ್ ಅರ್ಧಶತಕ ಸಿಡಿಸಿದರಾದರೂ, ಆ ನಂತರವೇ ತಮ್ಮ ವಿಕೆಟ್ ಒಪ್ಪಿಸಿದರು. ರಾಹುಲ್ ವಿಕೆಟ್ ಪತನದೊಂದಿಗೆ ಭಾರತ ಎ ತಂಡದ ಸೋಲು ಕೂಡ ಖಚಿತವಾಯಿತು. ಕೊನೆಯಲ್ಲಿ ಆಕಾಶ್ ದೀಪ್ 43 ರನ್ ಸಿಡಿಸಿದರಾದರೂ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Sun, 8 September 24