‘ನಾವು ಮನೆಯಲ್ಲಿದ್ದಂತೆ ಭಾಸವಾಗುತ್ತಿದೆ’; ಭಾರತದ ಆತಿಥ್ಯವನ್ನು ಹಾಡಿ ಹೊಗಳಿದ ಪಾಕ್ ನಾಯಕ ಬಾಬರ್

|

Updated on: Oct 05, 2023 | 12:46 PM

ICC World Cup 2023: ಕಳೆದ ಒಂದು ವಾರದಿಂದ ನಾವು ವಿದೇಶದಲ್ಲಿದ್ದಂತೆ ಅನಿಸಲಿಲ್ಲ. ಭಾರತಕ್ಕೆ ಹೋದಾಗ, ನಾನು ಒಂಟಿತನ ಅನುಭವಿಸುತ್ತೇನೆ ಎಂದು ಈ ಹಿಂದೆ ಭಾವಿಸಿದ್ದೆ, ಆದರೆ ಭಾರತದ ಜನರು ನಮಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ ಮತ್ತು ಮುಂದೆಯೂ ಅದೇ ಪ್ರೀತಿಯನ್ನು ನಾವು ಪಡೆಯುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಬಾಬರ್ ಹೇಳಿಕೊಂಡಿದ್ದಾರೆ.

‘ನಾವು ಮನೆಯಲ್ಲಿದ್ದಂತೆ ಭಾಸವಾಗುತ್ತಿದೆ’; ಭಾರತದ ಆತಿಥ್ಯವನ್ನು ಹಾಡಿ ಹೊಗಳಿದ ಪಾಕ್ ನಾಯಕ ಬಾಬರ್
ಬಾಬರ್ ಆಝಂ
Follow us on

2023ರ ಏಕದಿನ ವಿಶ್ವಕಪ್‌ನ (ICC World Cup 2023) ಮಹಾ ಸಂಭ್ರಮ ಇಂದಿನಿಂದ ಭಾರತದಲ್ಲಿ ಆರಂಭವಾಗಲಿದೆ. ವಿಶ್ವಕಪ್‌ನ ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New Zealand) ನಡುವೆ ನಡೆಯಲಿದೆ. ಆದರೆ ಅದಕ್ಕೂ ಮುನ್ನ ನಿನ್ನೆ ಅಂದರೆ ಅಕ್ಟೋಬರ್ 4 ರಂದು ಐಸಿಸಿ ಎಲ್ಲಾ ವಿಶ್ವಕಪ್ ತಂಡಗಳ ನಾಯಕರ ಸಭೆಯನ್ನು ಅಹಮದಾಬಾದ್‌ನಲ್ಲಿ ಆಯೋಜಿಸಿತ್ತು. ಈವೆಂಟ್‌ನಲ್ಲಿ ಎಲ್ಲಾ ಹತ್ತು ತಂಡಗಳು ನಾಯಕರು ವಿಶ್ವಕಪ್ ತಯಾರಿಯ ಬಗ್ಗೆ ಹಾಗೂ ತಂಡದ ಬಗ್ಗೆ ಮಾತನಾಡಿದರು. ಈ ವೇಳೆ ಮೊದಲ ಬಾರಿಗೆ ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ (Babar Azam) ಕೂಡ ತಮ್ಮ ತಂಡದ ಬಗ್ಗೆ ಹಾಗೂ ಭಾರತದಲ್ಲಿ ಸಿಗುತ್ತಿರುವ ಆತಿಥ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದರು. ಈ ವೇಳೆ ಭಾರತದ ಆತಿಥ್ಯವನ್ನು ಹೊಗಳಿರುವ ಬಾಬರ್ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ಬಾಬರ್ ಆಝಂ ಹೇಳಿದ್ದೇನು?

ಪಾಕಿಸ್ತಾನ ತಂಡದ ನಾಯಕತ್ವ ಹೊತ್ತು ಭಾರತಕ್ಕೆ ಮೊದಲ ಬಾರಿಗೆ ಪ್ರಯಾಣ ಬೆಳೆಸಿರುವ ಬಾಬರ್​ಗೆ ಭಾರತೀಯರ ಆತಿಥ್ಯ ಹಾಗೂ ಉಪಚಾರ ಬಹಳ ಇಷ್ಟವಾಗಿದೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ. ಈ ಸಂಬಂಧ ಮಾತನಾಡಿದ ಬಾಬರ್, ಕಳೆದ ಒಂದು ವಾರದಿಂದ ನಾವು ವಿದೇಶದಲ್ಲಿದ್ದಂತೆ ಅನಿಸಲಿಲ್ಲ. ಭಾರತಕ್ಕೆ ಹೋದಾಗ, ನಾನು ಒಂಟಿತನ ಅನುಭವಿಸುತ್ತೇನೆ ಎಂದು ಈ ಹಿಂದೆ ಭಾವಿಸಿದ್ದೆ, ಆದರೆ ಭಾರತದ ಜನರು ನಮಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ ಮತ್ತು ಮುಂದೆಯೂ ಅದೇ ಪ್ರೀತಿಯನ್ನು ನಾವು ಪಡೆಯುತ್ತೇವೆ ಎಂದು ನಾನು ಭಾವಿಸುತ್ತೇನೆ. ನನಗೆ ಹೈದರಾಬಾದ್ ಬಿರಿಯಾನಿ ಎಂದರೆ ತುಂಬಾ ಇಷ್ಟ ಎಂದು ಬಾಬರ್ ಹೇಳಿಕೊಂಡಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸಿ ನಡು ರಸ್ತೆಯಲ್ಲಿ ದಂಡ ಕಟ್ಟಿದ ಪಾಕ್ ನಾಯಕ ಬಾಬರ್

ರೋಹಿತ್ ಶರ್ಮಾ ಹೇಳಿದ್ದೇನು?

ಇದೇ ವೇಳೆ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 2023ರ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸುವುದು ನನಗೆ ಹೆಮ್ಮೆಯ ವಿಷಯ. ನಮ್ಮ ಮೇಲೆ ಒತ್ತಡವಿರುತ್ತದೆ ಆದರೆ ತಂಡ ಈಗ ಅದಕ್ಕೆ ಒಗ್ಗಿಕೊಂಡಿದೆ. ನಾವು ಮಾಡಿಕೊಂಡಿರುವ ತಯಾರಿಯು ವಿಶ್ವಕಪ್‌ನಲ್ಲಿ ನಮಗೆ ಅನುಕೂಲವಾಗಲಿದೆ. ಪ್ರತಿಯೊಂದು ಪಂದ್ಯವೂ ನಮಗೆ ಮಹತ್ವದ್ದಾಗಿದೆ. ಅಭ್ಯಾಸ ಪಂದ್ಯಗಳ ಕೊರತೆಯು ಹೆಚ್ಚಿನ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದರು.

ವಿಶ್ವಕಪ್‌ನಲ್ಲಿ 10 ತಂಡಗಳು

ಈ ಬಾರಿಯ ವಿಶ್ವಕಪ್‌ನಲ್ಲಿ 10 ತಂಡಗಳಿದ್ದು, ಭಾರತದ ಹತ್ತು ನಗರಗಳ ಕ್ರೀಡಾಂಗಣಗಳಲ್ಲಿ ಈ ಟೂರ್ನಿ ನಡೆಯಲಿದೆ. ವಿಶ್ವಕಪ್‌ನಲ್ಲಿ 48 ಪಂದ್ಯಗಳು ನಡೆಯಲಿದ್ದು, ಚೆನ್ನೈ, ದೆಹಲಿ, ಪುಣೆ, ಅಹಮದಾಬಾದ್, ಧರ್ಮಶಾಲಾ, ಪುಣೆ, ಲಕ್ನೋ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿವೆ.

ಏತನ್ಮಧ್ಯೆ, ವಿಶ್ವಕಪ್ ಭಾರತದಲ್ಲಿ ನಡೆಯಲಿರುವುದರಿಂದ, ಭಾರತ ತಂಡವನ್ನು ಗೆಲುವಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಕೂಡ ಈ ರೇಸ್‌ನಲ್ಲಿ ಬಲಿಷ್ಠ ತಂಡಗಳಾಗಿವೆ. ಅದರೊಂದಿಗೆ ನೆದರ್ಲ್ಯಾಂಡ್ಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಕಡಿಮೆ ಅಂದಾಜು ಮಾಡುವಂತಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ