IND vs NZ: ಕಿವೀಸ್ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಮ್ಯಾಚ್ ನಿಲ್ಲಿಸಿದ ಅಂಪೈರ್ಸ್​; ರೊಚ್ಚಿಗೆದ್ದ ಟೀಂ ಇಂಡಿಯಾ ಆಟಗಾರರು

|

Updated on: Oct 19, 2024 | 6:48 PM

IND vs NZ: ಬೆಂಗಳೂರು ಟೆಸ್ಟ್​ ಪಂದ್ಯದ ನಾಲ್ಕನೇ ದಿನದ ಆಟವನ್ನು ಮಳೆಯಿಂದಾಗಿ ಸುಮಾರು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಬೇಕಾಯಿತು. ಆದರೆ ಅಂಪೈರ್​ಗಳ ಈ ನಡೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನಗೊಂಡಿಲ್ಲದೆ, ಮೈದಾನದಲ್ಲೇ ಅಂಪೈರ್‌ಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.

IND vs NZ: ಕಿವೀಸ್ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಮ್ಯಾಚ್ ನಿಲ್ಲಿಸಿದ ಅಂಪೈರ್ಸ್​; ರೊಚ್ಚಿಗೆದ್ದ ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ
Follow us on

ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ ನಡುವೆ ನಡೆಯುತ್ತಿರುವ ಬೆಂಗಳೂರು ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಬಲ ಪುನರಾಗಮನ ಮಾಡಿತ್ತಾದರೂ ನ್ಯೂಜಿಲೆಂಡ್‌ಗೆ ದೊಡ್ಡ ಗುರಿ ನೀಡಲು ವಿಫಲವಾಗಿದೆ. ಇದೆಲ್ಲದರ ನಡುವೆ, ಪಂದ್ಯದ ನಾಲ್ಕನೇ ದಿನದ ಆಟವನ್ನು ಮಳೆಯಿಂದಾಗಿ ಸುಮಾರು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಬೇಕಾಯಿತು. ಆದರೆ ಅಂಪೈರ್​ಗಳ ಈ ನಡೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನಗೊಂಡಿಲ್ಲದೆ, ಮೈದಾನದಲ್ಲೇ ಅಂಪೈರ್‌ಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.

ವಾಸ್ತವವಾಗಿ ಪಂದ್ಯದ ನಾಲ್ಕನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ಕೆಳಕ್ರಮಾಂಕದ ವೈಫಲ್ಯದಿಂದಾಗಿ 462 ರನ್‌ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿತು. ಅಂತಿಮವಾಗಿ ಕಿವೀಸ್ ತಂಡದ ಗೆಲುವಿಗೆ 107 ರನ್​ಗಳ ಗುರಿ ಸಿಕ್ಕಿದೆ. ಹೀಗಾಗಿ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದಾಗ ದಿನದ ಆಟಕ್ಕೆ ಇನ್ನೂ ಸುಮಾರು ಒಂದು ಗಂಟೆಯ ಆಟ ಬಾಕಿ ಇತ್ತು. ಈ ವೇಳೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದರಿಂದ ಟೀಂ ಇಂಡಿಯಾ ವೇಗಿಗಳಿಗೆ ಇದು ಶುಭ ಸೂಚನೆಯಾಗಿತ್ತು. ಏಕೆಂದರೆ ಮೋಡ ಕವಿದ ವಾತಾವರಣವಿದ್ದಾಗ ಪಿಚ್​ ವೇಗಿಗಳಿಗೆ ಹೆಚ್ಚಾಗಿ ನೆರವಾಗುತ್ತದೆ.

ರೋಹಿತ್ ವಾದವೇನು?

ಹೀಗಾಗಿ ಇದರ ಲಾಭ ಪಡೆಯುವ ಸಲುವಾಗಿ ನಾಯಕ ರೋಹಿತ್ ಶರ್ಮಾ, ಬುಮ್ರಾಗೆ ಬೌಲಿಂಗ್ ದಾಳಿ ಆರಂಭಿಸುವ ಜವಬ್ದಾರಿ ನೀಡಿದರು. ಆದರೆ ಬುಮ್ರಾ ಕೇವಲ 4 ಎಸೆತಗಳನ್ನು ಎಸೆದ ಬಳಿಕ ಲೈಟ್ ಮೀಟರ್‌ನಿಂದ ಲೈಟ್ ಅನ್ನು ಪರೀಕ್ಷಿಸಿ ಅಂಪೈರ್‌ಗಳು ಆಟವನ್ನು ನಿಲ್ಲಿಸಲು ನಿರ್ಧರಿಸಿದರು. ಹೀಗಾಗಿ ನ್ಯೂಜಿಲೆಂಡ್‌ನ ಆರಂಭಿಕರಿಬ್ಬರೂ ತಕ್ಷಣವೇ ಪೆವಿಲಿಯನ್ ಕಡೆಗೆ ತೆರಳಿದರು. ಆದರೆ ಫ್ಲಡ್ ಲೈಟ್​ಗಳು ಆನ್ ಆಗಿದ್ದರೂ ಅಂಪೈರ್​ಗಳು ದಿನದಾಟವನ್ನು ರದ್ದುಗೊಳಿಸಿದ್ದು, ಟೀಂ ಇಂಡಿಯಾ ಆಟಗಾರರನ್ನು ಕೆರಳಿಸುವಂತೆ ಮಾಡಿತು. ಕೂಡಲೇ ನಾಯಕ ರೋಹಿತ್ ಶರ್ಮಾ ಅಂಪೈರ್‌ಗಳಾದ ಪಾಲ್ ರೈಫಲ್ ಮತ್ತು ಮೈಕೆಲ್ ಗಾಫ್ ಅವರೊಂದಿಗೆ ವಾಗ್ವಾದ ಆರಂಭಿಸಿದರು.

ಒಂದು ಓವರ್ ಪೂರ್ಣಗೊಳ್ಳದೆ ಆಟವನ್ನು ಏಕೆ ನಿಲ್ಲಿಸಿದಿರಿ ಎಂದು ರೋಹಿತ್, ಅಂಪೈರ್ ಬಳಿ ಪ್ರಶ್ನೆಗಳನ್ನು ಎತ್ತಲಾರಂಭಿಸಿದರು. ಅಂಪೈರ್ ಕೂಡ ತಮ್ಮ ನಿರ್ಧಾರಕ್ಕೆ ಕಾರಣವನ್ನು ವಿವರಿಸಲಾರಂಭಿಸಿದರು. ಇಡೀ ತಂಡ ಇಬ್ಬರೂ ಅಂಪೈರ್‌ಗಳನ್ನು ಸುತ್ತುವರೆದರೂ ಅಂಪೈರ್‌ಗಳು ಭಾರತ ತಂಡದ ಮಾತನ್ನು ಕೇಳದೆ ತಮ್ಮ ನಿರ್ಧಾರಕ್ಕೆ ಬದ್ಧರಾದರು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಕೆಲ ಹೊತ್ತು ಮೈದಾನದಲ್ಲಿ ನಿಂತಿದ್ದರು. ಆದರೆ ಕೆಲವೇ ನಿಮಿಷಗಳ ಬಳಿಕ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದರಿಂದ ಅವರು ಸಹ ಮೈದಾನವನ್ನು ತೊರೆಯಬೇಕಾಯಿತು.

ಅಂಪೈರ್‌ಗಳ ನಿರ್ಧಾರ ತಪ್ಪೇ?

ಸಮಯ ಕಳೆದಂತೆ ಮಳೆ ತುಂಬಾ ಜೋರಾದ್ದರಿಂದ ಪಂದ್ಯವನ್ನು ಪುನರಾರಂಭಿಸುವುದು ಕಷ್ಟಕರವಾಯಿತು. ಈಗ ಪ್ರಶ್ನೆ ಏನೆಂದರೆ ರೋಹಿತ್ ಶರ್ಮಾ ಅಂಪೈರ್​ಗಳ ಜೊತೆ ವಾದ ಮಾಡಿದ್ದು ಸರಿಯೇ ಎಂಬುದು. ವಾಸ್ತವವಾಗಿ, ನಿಯಮಗಳ ಪ್ರಕಾರ, ಆಟ ನಡೆಯಲು ಬೆಳಕು ಸಮಸ್ಯೆಯನ್ನುಂಟು ಮಾಡಿದರೆ, ಅಂಪೈರ್​ಗಳು ಕೂಡಲೇ ಲೈಟ್ ಮೀಟರ್‌ನಿಂದ ರೀಡಿಂಗ್ ನೋಡುತ್ತಾರೆ. ಅದರ ಆಧಾರದ ಮೇಲೆ ಪಂದ್ಯವನ್ನು ಮುಂದುವರೆಸುವುದೋ, ಬೇಡವೋ ಎಂಬ ತೀರ್ಮಾನಕ್ಕೆ ಬರುತ್ತಾರೆ. ವಾಸ್ತವವಾಗಿ ಬೆಂಗಳೂರು ಟೆಸ್ಟ್‌ನ ಎರಡನೇ ದಿನದಂದು, ಮಂದ ಬೆಳಕಿನಿಂದ ಪಂದ್ಯವನ್ನು 10 ನಿಮಿಷಗಳ ಮೊದಲು ನಿಲ್ಲಿಸಲಾಯಿತು. ಆ ಸಮಯದಲ್ಲೂ ರೀಡಿಂಗ್‌ ತೆಗೆದುಕೊಳ್ಳಲಾಗಿತ್ತು. ಇದೀಗ ನಾಲ್ಕನೇ ದಿನವೂ ಅಂಪೈರ್‌ಗಳು ನಿಯಮದ ಪ್ರಕಾರದಂತೆ ಆಟವನ್ನು ನಿಲ್ಲಿಸಿದರು. ಆದರೀಗ ಅಂಪೈರ್​ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ನಾಯಕ ರೋಹಿತ್ ಶರ್ಮಾ ಐಸಿಸಿಯಿಂದ ಶಿಕ್ಷೆಗೊಳಪಡುವ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Sat, 19 October 24