IND vs BAN: ಅಕ್ಷರ್ ಪಟೇಲ್ ಬಳಿ ಕೈಮುಗಿದು ಕ್ಷಮೆಯಾಚಿಸಿದ ರೋಹಿತ್ ಶರ್ಮಾ..! ವಿಡಿಯೋ ನೋಡಿ

|

Updated on: Feb 20, 2025 | 4:04 PM

Champions Trophy 2025: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದೆ. ಬಾಂಗ್ಲಾದೇಶ ತಂಡವು ವೇಗದ ಬೌಲಿಂಗ್‌ಗೆ ತತ್ತರಿಸಿ 5 ವಿಕೆಟ್ ಕಳೆದುಕೊಂಡಿದೆ. ಇದೇ ವೇಳೆ ದಾಳಿಗಿಳಿದ ಅಕ್ಷರ್ ಪಟೇಲ್ ಅವರು ಅದ್ಭುತ ಬೌಲಿಂಗ್ ಪ್ರದರ್ಶಿಸಿ ಸತತ 2 ವಿಕೆಟ್ ಪಡೆದರು. ಆದರೆ ಹ್ಯಾಟ್ರಿಕ್ ಅವಕಾಶವನ್ನು ರೋಹಿತ್ ಶರ್ಮಾ ಅವರ ತಪ್ಪಿನಿಂದ ಕಳೆದುಕೊಂಡರು. ರೋಹಿತ್ ತಮ್ಮ ತಪ್ಪಿಗೆ ಅಕ್ಷರ್ ಬಳಿ ಕ್ಷಮೆಯಾಚಿಸಿದರು.

IND vs BAN: ಅಕ್ಷರ್ ಪಟೇಲ್ ಬಳಿ ಕೈಮುಗಿದು ಕ್ಷಮೆಯಾಚಿಸಿದ ರೋಹಿತ್ ಶರ್ಮಾ..! ವಿಡಿಯೋ ನೋಡಿ
Rohit Sharma
Follow us on

2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆದರೆ ಟೀಂ ಇಂಡಿಯಾ ವೇಗಿಗಳ ಕರಾರುವಕ್ಕಾದ ದಾಳಿಗೆ ನಲುಗಿರುವ ಬಾಂಗ್ಲಾ ತಂಡ ಈಗಾಗಲೇ 5 ವಿಕೆಟ್ ಕಳೆದುಕೊಂಡಿದೆ. ಆರಂಭದಲ್ಲೇ ಪಂದ್ಯದ ಮೇಲೆ ಟೀಂ ಇಂಡಿಯಾ ಹಿಡಿತ ಸಾಧಿಸಿದೆಯಾದರೂ ನಾಯಕ ರೋಹಿತ್ ಶರ್ಮಾ ಮಾತ್ರ ತಾನು ಮಾಡಿದ ತಪ್ಪಿಗೆ ಸಾರ್ವಜನಿಕವಾಗಿಯೇ ಸ್ಪಿನ್ನರ್ ಅಕ್ಷರ್ ಪಟೇಲ್ ಬಳಿ ಕೈಮುಗಿದು ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ತಂಡದ ನಾಯಕನೇ ಕ್ಷಮೆ ಕೇಳುವಂತಹ ತಪ್ಪನ್ನು ರೋಹಿತ್ ಶರ್ಮಾ ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ..

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಆರಂಭದಲ್ಲಿಯೇ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ಉತ್ತಮ ಆರಂಭ ನೀಡಿದರು. ಇದಾದ ನಂತರ, ಅಕ್ಷರ್ ಪಟೇಲ್ ತಮ್ಮ ಮೊದಲ ಓವರ್‌ನಲ್ಲಿಯೇ ವಿನಾಶಕಾರಿ ದಾಳಿ ನಡೆಸಿ ಬಾಂಗ್ಲಾದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದರು.

2 ಎಸೆತಗಳಲ್ಲಿ 2 ವಿಕೆಟ್

ಸತತ 8 ಓವರ್‌ಗಳ ವೇಗದ ಬೌಲಿಂಗ್ ನಂತರ, ನಾಯಕ ರೋಹಿತ್ ಶರ್ಮಾ 9 ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರನ್ನು ಬೌಲಿಂಗ್‌ಗೆ ಇಳಿಸಿದರು. 9ನೇ ಓವರ್​ನ ಎರಡನೇ ಎಸೆತದಲ್ಲಿ ಅಕ್ಷರ್ ತಂಜಿದ್ ಹಸನ್ ಅವರ ವಿಕೆಟ್ ಪಡೆದರು. ವಿಕೆಟ್ ಕೀಪರ್ ಕೆಎಲ್ ರಾಹುಲ್ ಉತ್ತಮ ಕ್ಯಾಚ್ ಹಿಡಿಯುವ ಮೂಲಕ ತಂಜಿದ್​ಗೆ ಪೆವಿಲಿಯನ್ ದಾರಿ ತೋರಿಸಿದರು. ನಂತರ ಮುಂದಿನ ಎಸೆತದಲ್ಲೇ ಕಣಕ್ಕಿಳಿದ ಅನುಭವಿ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ಕೂಡ ಅಕ್ಷರ್ ಎಸೆತದಲ್ಲಿ ರಾಹುಲ್​ಗೆ ಕ್ಯಾಚ್ ನೀಡಿದರು. ಹೀಗಾಗಿ ಸತತ 2 ಎಸೆತಗಳಲ್ಲಿ 2 ವಿಕೆಟ್ ಪಡೆದಿದ್ದ ಅಕ್ಷರ್​ಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಸಿಕ್ಕಿತು.

ಆತುರ ಪಟ್ಟ ರೋಹಿತ್

ಇದಕ್ಕೆ ಪೂರಕವಾಗಿ ಅಕ್ಷರ್​ ಕೂಡ ಮುಂದಿನ ಎಸೆತದಲ್ಲೇ ವಿಕೆಟ್ ಪಡೆಯುವ ಸನ್ನಿವೇಶ ಸೃಷ್ಟಿಸಿದ್ದರು. ಆದರೆ ಕ್ರಿಕೆಟ್‌ನಲ್ಲಿ ಕ್ಷಮಿಸಲಾಗದ ತಪ್ಪನ್ನು ನಾಯಕ ರೋಹಿತ್ ಶರ್ಮಾ ಮಾಡಿದ್ದು ಇಲ್ಲಿಯೇ. ಹ್ಯಾಟ್ರಿಕ್ ಎಸೆತಕ್ಕೂ ಮುನ್ನ ಫಿಲ್ಡ್ ಬದಲಿಸಿದ್ದ ನಾಯಕ ರೋಹಿತ್ ಸ್ವತಃ ಮೊದಲ ಸ್ಲಿಪ್​ನಲ್ಲಿ ಹೋಗಿ ನಿಂತರೆ, ಶುಭ್​ಮನ್ ಗಿಲ್ ಅವರನ್ನು ಎರಡನೇ ಸ್ಲಿಪ್‌ನಲ್ಲಿ ನಿಲ್ಲಿದ್ದರು. ಇದೇ ವೇಳೆ ಅಕ್ಷರ್ ಬೌಲ್ ಮಾಡಿದ ಹ್ಯಾಟ್ರಿಕ್ ಎಸೆತ ಹೊಸ ಬ್ಯಾಟ್ಸ್‌ಮನ್ ಜಾಕಿರ್ ಅಲಿ ಅವರ ಬ್ಯಾಟ್​ನ ಅಂಚಿಗೆ ತಾಗಿ ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಕಡೆಗೆ ಹೋಯಿತು. ರೋಹಿತ್ ಕೂಡ ಆರಂಭದಲ್ಲಿ ಕ್ಯಾಚ್ ಅನ್ನು ಸುಲಭವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿದರು. ಆದರೆ ರೋಹಿತ್ ಆತುರದಲ್ಲಿದ್ದ ಕಾರಣ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಅಕ್ಷರ್ ಪಟೇಲ್ ಹ್ಯಾಟ್ರಿಕ್ ತಪ್ಪಿಸಿಕೊಂಡರು.

ಕೈಮುಗಿದ ಕ್ಷಮೆಯಾಚಿಸಿದ ರೋಹಿತ್

ರೋಹಿತ್ ಮಾಡಿದ ಈ ತಪ್ಪನ್ನು ಯಾವ ಭಾರತೀಯ ಆಟಗಾರನೂ ನಂಬಲು ಸಾಧ್ಯವಾಗಲಿಲ್ಲ. ಕ್ರೀಡಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರು ಕೂಡ ಆಘಾತಕ್ಕೊಳಗಾದರು. ಇತ್ತ ರೋಹಿತ್ ಕೂಡ ಕೋಪದಿಂದ ನೆಲಕ್ಕೆ ತಮ್ಮ ಕೈಗಳನ್ನು ಹೊಡೆಯಲಾರಂಭಿಸಿದರು. ಆ ನಂತರ ಕೈಗಳನ್ನು ಜೋಡಿಸಿ ಅಕ್ಷರ್‌ ಬಳಿ ಕ್ಷಮೆಯಾಚಿಸಿದರು. ಒಂದು ವೇಳೆ ರೋಹಿತ್ ಈ ಕ್ಯಾಚ್​ ಅನ್ನು ಹಿಡಿದಿದ್ದರೆ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಮತ್ತು ಎರಡನೇ ಬೌಲರ್ ಎಂಬ ದಾಖಲೆ ಅಕ್ಷರ್ ಪಾಲಾಗುತ್ತಿತ್ತು. ಆದರೆ ಆ ಅವಕಾಶ ರೋಹಿತ್ ಮಾಡಿದ ತಪ್ಪಿನಿಂದ ಕೈತಪ್ಪಿತು.

Published On - 3:59 pm, Thu, 20 February 25