RCB ವಿರುದ್ಧ ಸೋತರೂ CSK ತಂಡವನ್ನು ಹಾಡಿ ಹೊಗಳಿದ ಅಂಬಾಟಿ ರಾಯುಡು
IPL 2025 RCB vs CSK: ಐಪಿಎಲ್ ಸೀಸನ್-18ರ 52ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 213 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 211 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 2 ರನ್ಗಳ ರೋಚಕ ಜಯ ಸಾಧಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (62), ಜೇಕಬ್ ಬೆಥೆಲ್ (55) ಹಾಗೂ ರೊಮಾರಿಯೊ ಶೆಫರ್ಡ್ (53) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್ಸಿಬಿ ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಚೆನ್ಣೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ 94 ರನ್ ಬಾರಿಸಿದರೆ, ರವೀಂದ್ರ ಜಡೇಜಾ ಅಜೇಯ 77 ರನ್ ಸಿಡಿಸಿದ್ದರು. ಇದಾಗ್ಯೂ ಅಂತಿಮ ಓವರ್ನಲ್ಲಿ 15 ರನ್ಗಳ ಗುರಿ ಪಡೆದ ಸಿಎಸ್ಕೆ ತಂಡವು 2 ರನ್ನಿಂದ ಸೋಲೊಪ್ಪಿಕೊಂಡಿತು. ಈ ವಿರೋಚಿತ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಡಿ ಹೊಗಳಿದ್ದಾರೆ.
ಆರ್ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದಾಗ್ಯೂ ಸಿಎಸ್ಕೆ ಪಂದ್ಯವನ್ನು ಸೋತಿದ್ದು ದುರದೃಷ್ಟಕರ. ಒಟ್ಟಾರೆಯಾಗಿ ನೋಡುವುದಾದರೆ ಇದು ಈ ಸೀಸನ್ನಲ್ಲಿನ ಸಿಎಸ್ಕೆ ತಂಡ ಬೆಸ್ಟ್ ಫರ್ಫಾಮೆನ್ಸ್. ಹೀಗಾಗಿ ಈ ಸೋಲಿನ ಹೊರತಾಗಿಯೂ ಸಿಎಸ್ಕೆ ಉತ್ತಮ ಕ್ರಿಕೆಟ್ ಆಡಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಆರ್ಸಿಬಿ ತಂಡದ ಗೆಲುವಿಗೆ ಕಾರಣ ಅವರ ಬ್ಯಾಟಿಂಗ್. ಮೊದಲ ಇನಿಂಗ್ಸ್ನಲ್ಲಿ ಅವರು ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು. ಇತ್ತ ಸಿಎಸ್ಕೆ ತಂಡವು ಉತ್ತಮ ಪೈಪೋಟಿ ನೀಡಿದರೂ, ಕೊನೆಯ ಓವರ್ನಲ್ಲಿ ಸೋಲೊಪ್ಪಿಕೊಂಡಿದೆ. ಆದರೆ ಸಿಎಸ್ಕೆ ತಂಡವು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ಪಂದ್ಯದ ಕೊನೆಯ ಓವರ್ನಲ್ಲಿ ಯಶ್ ದಯಾಳ್ ಉತ್ತಮವಾಗಿ ಬೌಲಿಂಗ್ ಮಾಡಿದರು. ದಯಾಳ್ ತಮ್ಮ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಇದು ಪ್ರಶಸ್ತಿಯನ್ನು ಗೆಲ್ಲಲು ಬಯಸುವ ತಂಡಕ್ಕೆ ಪ್ಲಸ್ ಪಾಯಿಂಟ್. ಇಂತಹ ಪ್ರದರ್ಶನ ನೀಡುವುದರಿಂದ ಹೆಚ್ಚಿನ ಆತ್ಮ ವಿಶ್ವಾಸ ಸಿಗುತ್ತದೆ ಎಂದು ರಾಯುಡು ಅಭಿಪ್ರಾಯಪಟ್ಟರು.
ಇದನ್ನೂ ಓದಿ: PSL ಗೆ ಕೈಕೊಟ್ಟು IPL ಗೆ ಎಂಟ್ರಿ ಕೊಟ್ಟ ಸ್ಫೋಟಕ ದಾಂಡಿಗ
ಒಟ್ಟಿನಲ್ಲಿ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಗೆದ್ದರೂ, ಸಿಎಸ್ಕೆ ತಂಡದಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿರುವುದು ಪ್ಲಸ್ ಪಾಯಿಂಟ್ ಎಂದು ಅಂಬಾಟಿ ರಾಯುಡು ಜಿಯೋ ಹಾಟ್ಸ್ಟಾರ್ನ ಪ್ಯಾನೆಲ್ ಚರ್ಚೆಯಲ್ಲಿ ಹೇಳಿದ್ದಾರೆ.