IPL 2026: ಅದು ಕ್ಲಿಯರ್ ಔಟ್… ಅಶ್ವಿನ್ ನೀಡಿದ ಸ್ಪಷ್ಟನೆ ಹೀಗಿದೆ

IPL 2026: ಐಪಿಎಲ್ ಅಂಗಳದಲ್ಲಿ ವಿವಾದಗಳು ಹೊಸದೇನಲ್ಲ, ಆದರೆ ಈ ಬಾರಿಯ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ಒಂದು ಅಸಾಮಾನ್ಯ ಕ್ಯಾಚ್‌ನಿಂದಾಗಿ ಕ್ರಿಕೆಟ್ ಲೋಕದ ಗಮನ ಸೆಳೆದಿದೆ. ಜೇಸನ್ ಹೋಲ್ಡರ್ ಹಿಡಿದ ರಾಜತ್ ಪಾಟಿದಾರ್ ಅವರ ಆ ಕ್ಯಾಚ್ ನಿಜಕ್ಕೂ 'ಕ್ಲೀನ್' ಆಗಿತ್ತೇ ಅಥವಾ ನೆಲಕ್ಕೆ ತಗುಲಿತ್ತೇ ಎಂಬ ಚರ್ಚೆ ಇಡೀ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ. ಈ ಗೊಂದಲದ ನಡುವೆ, ಭಾರತದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರು ತಾರ್ಕಿಕ ಅಂಶಗಳೊಂದಿಗೆ ಆ ಕ್ಯಾಚ್ ಅನ್ನು ವಿಶ್ಲೇಷಿಸಿದ್ದಾರೆ.

IPL 2026: ಅದು ಕ್ಲಿಯರ್ ಔಟ್... ಅಶ್ವಿನ್ ನೀಡಿದ ಸ್ಪಷ್ಟನೆ ಹೀಗಿದೆ
Ashwin

Updated on: May 02, 2026 | 8:14 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಅವರ ಕ್ಯಾಚ್ ಔಟ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಕ್ಯಾಚ್ ಬಗ್ಗೆ ಟೀಮ್ ಇಂಡಿಯಾದ  ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದು, ಇದು ‘ಸಂಪೂರ್ಣ ನ್ಯಾಯಸಮ್ಮತವಾದ ಕ್ಯಾಚ್’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಿದು ವಿವಾದ?

ಅಹಮದಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದಿ ಆರ್​ಸಿಬಿ ವಿರುದ್ಧ ಅರ್ಷದ್ ಖಾನ್ ಎಸೆದ ಎಸೆತವನ್ನು ರಜತ್ ಪಾಟಿದಾರ್ ಪುಲ್ ಮಾಡಲು ಹೋಗಿ ಟಾಪ್-ಎಡ್ಜ್ ಮಾಡಿದರು. ಡೀಪ್ ಸ್ಕ್ವೇರ್ ಲೆಗ್‌ನಿಂದ ಓಡಿ ಬಂದ ಹೋಲ್ಡರ್ ಮುನ್ನುಗ್ಗಿ ಡೈವ್ ಹೊಡೆದು ಚೆಂಡನ್ನು ಹಿಡಿದರು.

ಈ ಕ್ಯಾಚ್ ವಿಡಿಯೋ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ, ಕ್ಯಾಚ್ ಹಿಡಿದ ಬಳಿಕ ಚೆಂಡು ನೆಲಕ್ಕೆ ತಗುಲಿದೆ ಎಂದು ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ತಂಡದ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಥರ್ಡ್ ಅಂಪೈರ್ ತೀರ್ಪಿನಂತೆ ರಜತ್ ಪಾಟಿದಾರ್ ಔಟಾಗಿ ಹೊರ ನಡೆದಿದ್ದರು.

ಇತ್ತ ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿದರೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳನ್ನು ಹೊರಹಾಕಿದ್ದರು. ಇದೀಗ ಈ ವಿವಾದಕ್ಕೆ ತೆರೆ ಎಳೆಯುವಂತೆ ರವಿಚಂದ್ರನ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ.

ಅಶ್ವಿನ್ ಸ್ಪಷ್ಟನೆ!

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ ರವಿಚಂದ್ರನ್ ಅಶ್ವಿನ್, ಹೋಲ್ಡರ್ ಅವರನ್ನು ಸಮರ್ಥಿಸಿಕೊಳ್ಳಲು ಕೆಲವು ಪ್ರಮುಖ ಅಂಶಗಳನ್ನು ಮುಂದಿಟ್ಟಿದ್ದಾರೆ:

  •  ಹೋಲ್ಡರ್ ಅವರ ದೊಡ್ಡ ಕೈಗಳು: “ಜೇಸನ್ ಹೋಲ್ಡರ್ ಅವರ ಕೈಗಳು ನನ್ನ ಕೈಗಿಂತ ಎರಡು ಪಟ್ಟು ದೊಡ್ಡದಾಗಿವೆ. ಅವರ ಬೃಹತ್ ಹಸ್ತದೊಳಗೆ ಕ್ರಿಕೆಟ್ ಬಾಲ್ ಸಂಪೂರ್ಣವಾಗಿ ಮರೆಯಾಗಬಲ್ಲದು” ಎಂದು ಅಶ್ವಿನ್ ವಿವರಿಸಿದ್ದಾರೆ.
  •  ದೃಷ್ಟಿ ಭ್ರಮೆ: ಹೋಲ್ಡರ್ ಅವರ ಬೆರಳುಗಳ ನಡುವಿನ ಅಂತರದಿಂದ ಚೆಂಡು ಕಾಣಿಸಿದಾಗ ಅದು ನೆಲಕ್ಕೆ ತಗುಲಿದಂತೆ ಭಾಸವಾಗಬಹುದು. ಆದರೆ, ಅವರ ದೊಡ್ಡ ಬೆರಳುಗಳು ಚೆಂಡಿನ ಕೆಳಭಾಗದಲ್ಲಿದ್ದವು ಎಂಬುದು ಅಶ್ವಿನ್ ವಾದ.
  • ಅಂಪೈರ್ ನಿರ್ಧಾರಕ್ಕೆ ಗೌರವ: ಆನ್-ಫೀಲ್ಡ್ ಅಂಪೈರ್ ‘ಸಾಫ್ಟ್ ಸಿಗ್ನಲ್’ ಔಟ್ ನೀಡಿದ್ದಾಗ, ಅದನ್ನು ಬದಲಿಸಲು ಬಲವಾದ ಪುರಾವೆ ಬೇಕು. ಇಲ್ಲಿ ಅಂತಹ ಯಾವುದೇ ಪುರಾವೆ ಇರಲಿಲ್ಲ ಎಂಬುದು ಅವರ ಅಭಿಪ್ರಾಯ.

ಅಶ್ವಿನ್ ಅವರ ಪ್ರಕಾರ, ಜೇಸನ್ ಹೋಲ್ಡರ್ ಅವರ ಕೈ ಎರಡು ಪಟ್ಟು ದೊಡ್ಡದು. ಆತನ ಕೈಯಲ್ಲಿ ಚೆಂಡು ಬಹುತೇಕ ಕಣ್ಮರೆಯಾಗುತ್ತದೆ. ಹೀಗಾಗಿ ಆತನ ಬೆರಳುಗಳ ನಡುವೆ ಚೆಂಡು ಕಾಣಿಸಿದ್ದರೂ ಬಾಲ್ ನೆಲಕ್ಕೆ ಬಡಿದಿದೆ ಎಂದು ಅರ್ಥವಲ್ಲ. ಬಹುಶಃ ಆತ ಸರಿಯಾಗಿ ಚೆಂಡನ್ನು ಹಿಡಿದಿದ್ದಾರೆ. ನನ್ನ ಪ್ರಕಾರ, ಚೆಂಡು ನೆಲಕ್ಕೆ ತಾಗಿಲ್ಲ. ಹೀಗಾಗಿ ಅದು ಕ್ಲಿಯರ್ ಕ್ಯಾಚ್ ಎಂದಿದ್ದಾರೆ.

ಇದನ್ನೂ ಓದಿ: ಮೊದಲ ಎಸೆತದಲ್ಲೇ ಭರ್ಜರಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಪಂದ್ಯದ ಫಲಿತಾಂಶ:

ಭರ್ಜರಿ ಫಾರ್ಮ್​ನಲ್ಲಿದ್ದ ರಜತ್ ಫಾಟಿದಾರ್ ಅವರ ಈ ವಿಕೆಟ್ ಪಂದ್ಯದ ಗತಿಯನ್ನೇ ಬದಲಿಸಿತು. ಅಲ್ಲದೆ ಆರ್​ಸಿಬಿ ತಂಡವು ಈ ಪಂದ್ಯದಲ್ಲಿ 19.2 ಓವರ್​ಗಳಲ್ಲಿ 155 ರನ್ ಬಾರಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್​ ತಂಡವು 15.5 ಓವರ್​ಗಳಲ್ಲಿ 158 ರನ್ ಬಾರಿಸಿ 4 ವಿಕೆಟ್​ಗಳ ವಿಜಯ ಸಾಧಿಸಿದೆ.

 

 

Published On - 8:09 am, Sat, 2 May 26

Follow Us