RCB ಪಾಲಿಗೆ ಅಭಿಶಾಪವಾಗಲಿದೆಯಾ ಬಿಸಿಸಿಐನ ಈ ಒಂದು ನಿರ್ಧಾರ!

IPL 2026 Final, RCB vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ ಸೀಸನ್​-19ರ ಮೊದಲ ಕ್ವಾಲಿಫೈಯರ್​ನಲ್ಲಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದ್ವಿತೀಯ ಕ್ವಾಲಿಫೈಯರ್​ನಲ್ಲಿ ಜಯ ಸಾಧಿಸಿರುವ ಗುಜರಾತ್ ಟೈಟಾನ್ಸ್ ತಂಡಗಳು ಈ ಬಾರಿಯ ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಬಾರಿಯ ಫೈನಲ್​ನಲ್ಲಿ ಗೆಲ್ಲೋರು ಯಾರು ಎಂಬುದೇ ಕುತೂಹಲ.

RCB ಪಾಲಿಗೆ ಅಭಿಶಾಪವಾಗಲಿದೆಯಾ ಬಿಸಿಸಿಐನ ಈ ಒಂದು ನಿರ್ಧಾರ!
RCB

Updated on: May 30, 2026 | 11:22 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮೇ 31) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಫೈನಲ್ ಪಂದ್ಯ ನಡೆಯುತ್ತಿರುವುದು ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿ. ಇದುವೇ ಗುಜರಾತ್ ಟೈಟಾನ್ಸ್ ಪಾಲಿಗೆ ಪ್ಲಸ್ ಪಾಯಿಂಟ್.

ಗುಜರಾತ್ ಟೈಟಾನ್ಸ್ ತಂಡಕ್ಕೆ ಹೀಗೊಂದು ಅನುಕೂಲಕರ ವಾತಾವರಣ ಸೃಷ್ಟಿಯಾಗಲು ಮುಖ್ಯ ಕಾರಣ ಬಿಸಿಸಿಐ ತೆಗೆದುಕೊಂಡ ಒಂದು ನಿರ್ಧಾರ. ಅದುವೇ ಫೈನಲ್ ಪಂದ್ಯ ಶಿಫ್ಟ್​..!

  • ಐಪಿಎಲ್ ನಿಯಮದ ಪ್ರಕಾರ, ಫೈನಲ್ ಪಂದ್ಯಕ್ಕೆ ಹಾಲಿ ಚಾಂಪಿಯನ್​ನ ತವರು ಮೈದಾನ ಆತಿಥ್ಯವಹಿಸಬೇಕಿತ್ತು. ಅದರಂತೆ ಈ ಬಾರಿಯ ಫೈನಲ್ ಮ್ಯಾಚ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು.

ಆದರೆ ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಬಿಸಿಸಿಐ,  ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್​ಗೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಬಿಸಿಸಿಐ ನೀಡಿರುವ ಕಾರಣಗಳೆಂದರೆ, ಸ್ಥಳೀಯ ಶಾಸಕರ ಫ್ರೀ ಟಿಕೆಟ್ ಡಿಮ್ಯಾಂಡ್ ಮತ್ತು ಸಾರ್ವಜನಿಕ ಸುರಕ್ಷತೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮೇ 30 ಮತ್ತು ಮೇ 31 ರಂದು ಅಹಮದಾಬಾದ್​ನಲ್ಲಿ ಐಸಿಸಿ ಮಂಡಳಿ  ಮತ್ತು ಮುಖ್ಯ ಕಾರ್ಯನಿರ್ವಾಹಕರ ಸಮಿತಿಯ ಈ ಹೈ-ಪ್ರೊಫೈಲ್ ಸಭೆಯನ್ನು ಆಯೋಜಿಸಲಾಗಿರುವುದು.

ಅಂದರೆ ಐಪಿಎಲ್ ಫೈನಲ್ ಪಂದ್ಯದ ವೇಳೆ ವಿಶ್ವ ಕ್ರಿಕೆಟ್ ಮಂಡಳಿಯ ಪ್ರಮುಖರು ಅಹಮದಾಬಾದ್​ನಲ್ಲಿ ಇರಲಿದ್ದಾರೆ ಎಂಬುದು. ಇದಕ್ಕಾಗಿಯೇ ಫೈನಲ್ ಮ್ಯಾಚ್​ ಅನ್ನು ಬೆಂಗಳೂರಿನಿಂದ ಅಹಮದಾಬಾದ್​ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಅದೇನಾಗಿದ್ದರೂ ಇದೀಗ ಐಪಿಎಲ್ ಫೈನಲ್ ಪಂದ್ಯದ ಶಿಫ್ಟ್ ಆರ್​ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

  • ಆರ್​ಸಿಬಿ ತಂಡವು ಅಹಮದಾಬಾದ್​ನಲ್ಲಿ ಈವರೆಗೆ 7 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಅಂದರೆ 4 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.
  • ಈ ಬಾರಿ ಕಣಕ್ಕಿಳಿದಾಗಲೂ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್​ಗಳಿಂದ ಸೋಲನುಭವಿಸಿತ್ತು.
  • ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ವಿನ್ನಿಂಗ್ ಪರ್ಸಂಟೇಜ್ 42.8 ಮಾತ್ರ.

ಅಂದರೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್​ಸಿಬಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ತವರಿನ ಸಾಮ್ರಾಟರೆಂದೇ ಗುರುತಿಸಿಕೊಂಡಿರುವ ಗುಜರಾತ್ ಪಡೆಯನ್ನು ಸೋಲಿಸುವುದು ದೊಡ್ಡ ಸವಾಲೇ ಸರಿ. ಏಕೆಂದರೆ…

  • ಗುಜರಾತ್ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ಈವರೆಗೆ 28 ಪಂದ್ಯಗಳನ್ನಾಡಿದೆ. ಈ ವೇಳೆ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ.
  • ಈ ಬಾರಿ ತವರಿನಲ್ಲಿ ಆಡಿದ 7 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 5 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ.
  • ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿ ಆರ್​ಸಿಬಿ ತಂಡಕ್ಕೆ ಸೋಲುಣಿಸುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿದೆ.
  • ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ 60.7 ವಿನ್ನಿಂಗ್ ಪರ್ಸಂಟೇಜ್ ಹೊಂದಿದೆ.

ಈ ಎಲ್ಲಾ ಕಾರಣಗಳಿಂದಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಈ ಗುರುತಿಸಿಕೊಳ್ಳುವಿಕೆಗೆ ಮುಖ್ಯ ಕಾರಣ ಫೈನಲ್ ಮ್ಯಾಚ್​ನ ಶಿಫ್ಟ್​.

ಇದನ್ನೂ ಓದಿ: Vaibhav Sooryavanshi: 440 ಎಸೆತಗಳಲ್ಲಿ ಸಾರ್ವಕಾಲಿಕ ದಾಖಲೆ ಧೂಳೀಪಟ!

ಅಂದರೆ ಆರ್​ಸಿಬಿ ತಂಡದ ತವರು ಮೈದಾನದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಇದೀಗ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲು ಅಣಿಯಾಗಿ ನಿಂತಿದೆ. ಇದುವೇ ಆರ್​ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಈಗ ದೊಡ್ಡ ಯಕ್ಷ ಪ್ರಶ್ನೆ.

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us